ETV Bharat / state

ಅರ್ಜುನ ಆನೆ ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ : ಸಚಿವ ಈಶ್ವರ್ ಖಂಡ್ರೆ

author img

By ETV Bharat Karnataka Team

Published : Dec 10, 2023, 7:31 PM IST

dasara-elephant-arjunas-death-is-the-saddest-thing-ishwar-khandre
ಅರ್ಜುನ ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ : ಈಶ್ವರ್ ಖಂಡ್ರೆ

ಕ್ಯಾ. ಅರ್ಜುನ ಆನೆಯ ಸಮಾಧಿ ಸ್ಥಳಕ್ಕೆ ಇಂದು ಅರಣ್ಯ ಸಚಿವ ಈಶ್ವರ್​ ಖಂಡ್ರೆ ಭೇಟಿ ನೀಡಿದರು.

ಹಾಸನ : ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ಮೃತಪಟ್ಟ ಕ್ಯಾಪ್ಟನ್​ ಅರ್ಜುನ ಆನೆಯ ಸಮಾಧಿ ಸ್ಥಳಕ್ಕೆ ಇಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿದ್ದರು. ಈ ವೇಳೆ ಸಮಾಧಿಗೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಖಂಡ್ರೆ, ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ ಎಂದು ಹೇಳಿದರು.

ಕಾರ್ಯಾಚರಣೆ ವೇಳೆ ಕಾಡಾನೆ ಹಿಮ್ಮೆಟ್ಟಿಸಲು ಅರ್ಜುನ ಹೋರಾಡಿ, ತಾನು ಮೃತಪಟ್ಟು ಉಳಿದವರ ಜೀವ ಉಳಿಸಿದ್ದಾನೆ. ಕಳೆದ ನವೆಂಬರ್​ 24ರಿಂದ ಆನೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ದುರ್ಘಟನೆಯನ್ನು ಯಾರು ನಿರೀಕ್ಷೆ ಮಾಡಿರಲಿಲ್ಲ. ಕೆಲವು ಸಣ್ಣಪುಟ್ಟ ಲೋಪದೋಷವಾಗಿದೆ. ಇದರ ಸಮಗ್ರ ತನಿಖೆಗೆ ನಿವೃತ್ತ ಮುಖ್ಯ ವನಪಾಲಕರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯವರು 15 ದಿನಗಳಲ್ಲಿ ಸರ್ಕಾರಕ್ಕೆ ವರದಿ ನೀಡುತ್ತಾರೆ. ಪಾರದರ್ಶಕವಾಗಿ ತನಿಖೆ ಆಗುತ್ತದೆ ಎಂದು ತಿಳಿಸಿದರು.

ಆನೆ ಸಂರಕ್ಷಣೆಗಾಗಿ ಈ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು. ಜೊತೆಗೆ ಅರ್ಜುನ ವಾಸವಿದ್ದ ಮೈಸೂರಿನ ನಾಗರಹೊಳೆ ಶಿಬಿರದಲ್ಲಿ ಅರ್ಜುನ ಅಂಬಾರಿ ಹೊತ್ತ ಹಾಗೂ ಅನೇಕ ಕಾರ್ಯಾಚರಣೆಗಳಲ್ಲಿ ಭಾಗವಹಿಸಿರುವ ಮಾಹಿತಿಗಳನ್ನು ಪ್ರದರ್ಶನ ಮಾಡಲಾಗುವುದು. ಈ ಮೂಲಕ ಶಾಶ್ವತವಾಗಿ ಅರ್ಜುನನ ನೆನಪು ಶಾಶ್ವತವಾಗಿ ಉಳಿಯುವಂತೆ ಸ್ಮಾರಕ ನಿರ್ಮಾಣ ಮಾಡಲಾಗುವುದು. ಇಂತಹ ಕಾರ್ಯಾಚರಣೆ ಅತ್ಯಂತ ಅಪಾಯಕಾರಿ ಹಾಗೂ ಕಷ್ಟಕರವಾದದು. ಮುಂದೆ ಈ ರೀತಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿ‌ಸಲು ಜನಪ್ರತಿನಿಧಿಗಳು, ತಜ್ಞರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಾಡಾನೆಗಳಿವೆ. ದೇಶದಲ್ಲಿಯೇ ಕರ್ನಾಟಕದಲ್ಲಿ ಅತಿ ಹೆಚ್ಚು ಆನೆಗಳಿವೆ. ಸುಮಾರು 6395 ಕಾಡಾನೆಗಳು ಇದ್ದು, ನಗರೀಕರಣ ಹೆಚ್ಚಾದಂತೆ ಇಂತಹ ಸಮಸ್ಯೆಗಳು ಉದ್ಭವಿಸುತ್ತಿವೆ. ವನ್ಯಜೀವಿಗಳ ಉಪಟಳ ನಿಯಂತ್ರಿಸಲು ಹಂತ ಹಂತವಾಗಿ ಇಲಾಖೆ ಕ್ರಮ ಕೈಗೊಳ್ಳಲಿದೆ. ಕಾಡಾನೆ ಉಪಟಳ ನಿಯಂತ್ರಣಕ್ಕೆ ಕಂದಕ ನಿರ್ಮಾಣ, ಸೋಲಾರ್ ಪೆನ್ಸಿಂಗ್ ನಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸ್ಟ್ಯಾಂಡರ್ಡ್ ಅಪರೇಟಿಂಗ್ ಪ್ರೊಸಿಜರ್​ನಲ್ಲಿ ಕೆಲವು ಬದಲಾವಣೆ ತರಲು ಚಿಂತನೆ ಮಾಡಲಾಗುವುದು. ರಾಜ್ಯದಲ್ಲಿ ಅನೇಕ ವನ್ಯಮೃಗಗಳ ಸೆರೆ ಹಾಗೂ ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಅರ್ಜುನ ಭಾಗವಹಿಸಿದ್ದು, ಅನೇಕ ಜನರ ಪ್ರಾಣ ಉಳಿಸಿದೆ. ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸಮಯಕ್ಕೆ ಸರಿಯಾಗಿ ಸಂಬಳ ವಿತರಿಸುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಇದನ್ನೂ ಓದಿ : "ಕ್ಯಾ. ಅರ್ಜುನನ ಸ್ಮಾರಕ ನಿರ್ಮಾಣ"; ಸಾವಿನ ಬಗ್ಗೆ ತನಿಖೆಗೆ ಸೂಚನೆ : ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.