ETV Bharat / state

ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ನೀರಿನ ಸಮಸ್ಯೆ, ಖಾಸಗಿ ಟ್ಯಾಂಕರ್ ಮೊರೆ

author img

By

Published : May 31, 2023, 6:24 PM IST

water-problem-in-dharwad-district-hospital
ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ನೀರಿನ ಸಮಸ್ಯೆ, ಖಾಸಗಿ ಟ್ಯಾಂಕರ್ ಮೊರೆ

ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆಗೆ ಹುಬ್ಬಳ್ಳಿ ಧಾರವಾಡಕ್ಕೆ ನೀರು ಪೂರೈಕೆ ಮಾಡಲು ಗುತ್ತಿಗೆ ಪಡೆದಿರುವ ಎಲ್ ಅಂಡ್​ ಟಿ ಕಂಪನಿಯೇ ಕಾರಣ ಎಂದು ಆರೋಪ ಕೇಳಿ ಬರುತ್ತಿದೆ.

ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ನೀರಿನ ಸಮಸ್ಯೆ, ಖಾಸಗಿ ಟ್ಯಾಂಕರ್ ಮೊರೆ

ಧಾರವಾಡ: ನಿತ್ಯವೂ ಸಾವಿರಾರು ಜನರ ಆರೋಗ್ಯ ಕಾಪಾಡುವ ಜಿಲ್ಲಾಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಕಳೆದ ಕೆಲ ದಿನಗಳಿಂದ ಆಸ್ಪತ್ರೆಗೆ ನೀರು ಸರಬರಾಜು ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಜಿಲ್ಲಾ ಆಸ್ಪತ್ರೆ ಧಾರವಾಡ ಜಿಲ್ಲೆಗೆ ಮಾತ್ರವೇ ಸಿಮೀತವಾಗಿರುವ ಆಸ್ಪತ್ರೆಯಲ್ಲ. ಬದಲಿಗೆ ಉತ್ತರ ಕನ್ನಡ ಜಿಲ್ಲೆಯ ಎರಡು ಹಾಗೂ ಬೆಳಗಾವಿ ಜಿಲ್ಲೆಯ ಮೂರು ತಾಲೂಕಿನ ಜನರಿಗೂ ಇದೇ ಆಸ್ಪತ್ರೆಯೆ ಆಧಾರವಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್​ಗಳಿಗೆ ನೀರು ಪೂರೈಕೆ ಮಾಡುವ ಜವಾಬ್ದಾರಿಯನ್ನು ಈಗಾಗಲೇ ಸರ್ಕಾರ ಜಲಮಂಡಳಿಯಿಂದ ಎಲ್​​ ಅಂಡ್​ ಟಿ ಎಂಬ ಖಾಸಗಿ ಕಂಪನಿಗೆ ವಹಿಸಿ ಒಂದು ವರ್ಷ ಕಳೆದಿದೆ. ಆದರೆ, ಕಂಪನಿ ಅಡಿ ಸಮರ್ಪಕ ನೀರು ಪೂರೈಕೆ ಮಾತ್ರ ಇನ್ನುವರೆಗೂ ಆಗಿಲ್ಲ. ಸದ್ಯ ಅವಳಿ ನಗರದ ಅನೇಕ ಪ್ರದೇಶಗಳಿಗೆ 15 ದಿನ ಕಳೆದರೂ ನೀರು ಬಂದಿಲ್ಲ. ಇದರ ಮಧ್ಯೆಯೆ ಈಗ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿಯೂ ರೋಗಿಗಳು ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸುವುದಕ್ಕೇ ಹುಬ್ಬಳ್ಳಿ ಧಾರವಾಡಕ್ಕೆ ನೀರು ಪೂರೈಕೆ ಮಾಡಲು ಗುತ್ತಿಗೆ ಪಡೆದಿರುವ ಎಲ್ ಅಂಡ್​ ಟಿ ಕಂಪನಿಯೇ ಕಾರಣ ಎಂದು ಆರೋಪ ಕೇಳಿ ಬರುತ್ತಿದೆ. ಯಾಕೆಂದರೆ ಅವಳಿ ನಗರದ ಅನೇಕ ಪ್ರದೇಶಗಳಲ್ಲಿ ಹದಿನೈದು ದಿನ ಕಳೆದರೂ ಸರಿಯಾಗಿ ನೀರು ಪೂರೈಕೆ ಆಗಿಲ್ಲ. ಜಿಲ್ಲಾಸ್ಪತ್ರೆ ಇರುವ ಪ್ರದೇಶಕ್ಕೂ ಇದೇ ಸ್ಥಿತಿ ಆಗಿದೆ. ಹೀಗಾಗಿ ಸಹಜವಾಗಿಯೇ ಜಿಲ್ಲಾ ಆಸ್ಪತ್ರೆಯಲ್ಲಿ ಹೀಗೆ ನೀರಿನ ಬರ ಉಂಟಾಗಿದೆ ಎನ್ನಲಾಗಿದೆ.

ಇನ್ನು ಆಸ್ಪತ್ರೆಯಲ್ಲಿ ನೀರಿಗೆ ಸಮಸ್ಯೆ ಬಗ್ಗೆ ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ. ಶಿವಕುಮಾರ ಮಾನಕರ ಮಾತನಾಡಿ, ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಿರುವುದರಿಂದಾಗಿಯೇ ಹೀಗೆಲ್ಲ ಆಗಿದೆ. ನಮಗೆ ನಿತ್ಯ 50 ಸಾವಿರ ಲೀಟರ್ ನೀರು ಬೇಕಾಗುತ್ತದೆ. ಆದರೆ ನೀರು ಪೂರೈಕೆ ಆಗಿಲ್ಲ. ನಿರಂತರ ನೀರು ಪೂರೈಕೆ ಲೈನ್ ಇದ್ದರೂ ಅಲ್ಲಿಯೂ ಎರಡು ದಿನ ನೀರು ಬಂದಿಲ್ಲ. ಹೀಗಾಗಿ ಎಲ್ ಅಂಡ್​ ಟಿ ಕಂಪನಿಯವರು ನಿತ್ಯ ಎರಡು ಟ್ಯಾಂಕರ್ ಕಳುಹಿಸುತ್ತಿದ್ದಾರೆ. ಆದರೆ ಆ ಟ್ಯಾಂಕರ್​ನಿಂದ ಕೇವಲ 24 ಸಾವಿರ ಲೀಟರ್ ಮಾತ್ರ ನೀರು ಸಿಗುತ್ತದೆ. ಹೀಗಾಗಿ ಖಾಸಗಿ ಟ್ಯಾಂಕರ್​ಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಸರ್ಕಾರದ ಅಧೀನದಲ್ಲಿದ್ದ ನೀರು ಪೂರೈಕೆ ವ್ಯವಸ್ಥೆಯನ್ನು ಖಾಸಗಿಗೆ ವಹಿಸಿದ ಬಳಿಕ ಸಾರ್ವಜನಿಕರು ಮಾತ್ರವಲ್ಲದೇ, ಸರ್ಕಾರಿ ಆಸ್ಪತ್ರೆ ಕೂಡ ಈಗ ನೀರಿಗಾಗಿ ಪರದಾಡಿ ಖಾಸಗಿ ಟ್ಯಾಂಕರ್​ಗಳ ಮೊರೆ ಹೋಗುವಂತಾಗಿದ್ದು, ವಿಪರ್ಯಾಸವಾಗಿದೆ. ಆದರೆ ಇದೆಲ್ಲದರ ಪರಿಣಾಮ ಸಾಮಾನ್ಯ ಜನರ ಮೇಲೆಯೇ ಆಗುತ್ತಿದ್ದು, ಇನ್ನಾದರೂ ಜಿಲ್ಲಾಸ್ಪತ್ರೆಗೆ ಸಮರ್ಪಕ ನೀರು ಪೂರೈಕೆಯಾಗುತ್ತಾ? ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಭೇಟಿಯಾದ ಡಿ.ಕೆ.ಶಿವಕುಮಾರ್: ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.