ETV Bharat / state

ಹುಬ್ಬಳ್ಳಿ ಯುವಕನ ಕೊಲೆ ಪ್ರಕರಣ: ಕುಡಿದ ಮತ್ತಿನಲ್ಲಿ ಸ್ನೇಹಿತರಿಂದಲೇ ಹತ್ಯೆ: ಇಬ್ಬರ ಬಂಧನ

author img

By ETV Bharat Karnataka Team

Published : Oct 26, 2023, 1:29 PM IST

ಹುಬ್ಬಳ್ಳಿ ಯುವಕನ ಕೊಲೆ ಪ್ರಕರಣ
ಹುಬ್ಬಳ್ಳಿ ಯುವಕನ ಕೊಲೆ ಪ್ರಕರಣ

ಹುಬ್ಬಳ್ಳಿಯಲ್ಲಿ ಯುವಕೊನೊಬ್ಬನನ್ನು ಕುಡಿದ ಅಮಲಿನಲ್ಲಿ ಕೊಲೆ ಮಾಡಿದ್ದ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿ: ನಗರದ ಶಿವಳ್ಳಿ ರಸ್ತೆಯ ರೈಲ್ವೆ ಹಳಿ ಪಕ್ಕದ ಜಮೀನಿನಲ್ಲಿ ಯುವಕನೊಬ್ಬ ಕೊಲೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಸಪ್ತಗಿರಿ ಪಾರ್ಕ್‌ನ ಆಟೋ ರಿಕ್ಷಾ ಚಾಲಕ ಮಂಜುನಾಥ ಕಟ್ಟಿಮನಿ ಹಾಗೂ ಬಿಡ್ತಾಳ ಮಾರುತಿ ನಗರದ ಟೇಲರ್ ಕಿರಣ ಶಿರಸಂಗಿ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಂದ ಎರಡು ಬೈಕ್, ಎರಡು ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಅರುಣ ವನಹಳ್ಳಿ ಬೆಂಡೆ ಹಾಗೂ ಇತರರು ಪರಾರಿಯಾಗಿದ್ದಾರೆ.

ಪ್ರಕರಣದ ಹಿನ್ನೆಲೆ: ಅ. 24 ರಂದು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ಹನುಮರಹಳ್ಳಿಯ ಫಕ್ಕೀರೇಶ ಮಂಜುನಾಥ ಸವಣೂರ (22) ಎಂಬ ಯುವಕನ್ನು ಕೊಲೆ ಮಾಡಲಾಗಿತ್ತು. ಫಕೀರೇಶ ಅಂದು ಸ್ನೇಹಿತರೊಂದಿಗೆ ನಗರಕ್ಕೆ ಆಗಮಿಸಿದ್ದ. ರಾತ್ರಿ ಎಲ್ಲರೂ ಸೇರಿ ಮದ್ಯದ ಪಾರ್ಟಿ ಮಾಡಿದ್ದಾರೆ. ಈ ವೇಳೆ, ಹಣಕಾಸಿನ ವಿಷಯವಾಗಿ ಸ್ನೇಹಿತರ ನಡುವೆ ಜಗಳವಾಗಿದೆ. ಗಲಾಟೆ ವಿಕೋಪಕ್ಕೆ ಹೋದಾಗ ಅಮಲಿನಲ್ಲಿ ಮದ್ಯದ ಬಾಟಲಿಯಿಂದ ಫಕೀರೇಶನ ಕುತ್ತಿಗೆಗೆ ಮನಬಂದಂತೆ ಇರಿದಾಗ ಆತ ಸ್ಥಳದಲ್ಲೇ ಅಸುನೀಗಿದ್ದಾನೆ. ಆತನನ್ನು ಅಲ್ಲಿಯೇ ಬಿಟ್ಟು ಎಲ್ಲರೂ ಪರಾರಿಯಾಗಿದ್ದರು. ಖಚಿತ ಮಾಹಿತಿ ಆಧರಿಸಿ ಅಶೋಕನಗರ ಪೊಲೀಸರು ಮಂಜುನಾಥ ಮತ್ತು ಕಿರಣ ಎಂಬುವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳಾದ ಅರುಣ, ಬೆಂಡೆ ಮತ್ತು ಇತರರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ರಾಯಚೂರು: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ.. ಸಹೋದರನಿಂದ ಆತ್ಮಹತ್ಯೆ ಪ್ರಕರಣ ದಾಖಲು

ಲಾಂಗ್​ ಬೀಸಿದ ಯುವಕ( ಆನೇಕಲ್): ಇನ್ನೊಂದು ಇಂತಹದ್ದೇ ಪ್ರಕರಣ ಆನೇಕಲ್​ನಲ್ಲಿ ನಡೆದಿತ್ತು. ಶಿಕ್ಷಕನ ಮೇಲೆ ಯವಕನೊಬ್ಬ ಲಾಂಗ್​ ಬೀಸಿ ಹಲ್ಲೆ ನಡೆಸಿರುವ ಘಟನೆ ನಗರದ ವಿನಾಯಕನಗರ ಬಡಾವಣೆಯ ಎರಡನೇ ಬೀದಿಯಲ್ಲಿ ನಡೆದಿತ್ತು. ಶಿಕ್ಷಕ ರಾಮಚಂದ್ರ ಎನ್ನುವವರು ಎಸ್​ಎಸ್​ಎಲ್​ಸಿ ಮತ್ತು ಪಿಯು ಮಕ್ಕಳಿಗೆ ಟ್ಯೂಷನ್​ ಹೇಳುತ್ತಿದ್ದರು. ಟ್ಯೂಷನ್​ಗೆ ಬರುತ್ತಿದ್ದ ವಿದ್ಯಾರ್ಥಿನಿಯರಿಗೆ ಸಿದ್ದಾರ್ಥ ಎಂಬಾತ ಚೇಡಿಸುತ್ತಿದ್ದ.

ಇದನ್ನು ಗಮನಿಸಿದ ಶಿಕ್ಷಕ 6 ತಿಂಗಳಗಳ ಹಿಂದೆ ಪೊಲೀಸ್​ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು. ಇದರಿಂದ ಕೋಪಗೊಂಡ ಸಿದ್ದಾರ್ಥ ತನ್ನ ಸ್ನೇಹಿತರೊಂದಿಗೆ ಬೈಕ್​ ಮೇಲೆ ಬಂದು ಶಿಕ್ಷಕನ ಮೇಲೆ ಲಾಂಗ್​ ಬೀಸಿದ್ದಾನೆ. ಇದಿರಂದ ಶಿಕ್ಷಕ ರಾಮಚಂದ್ರ ಅವರ ಕೈಗೆ ಗಾಯವಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ದೃಶ್ಯವಳಿಗಳನ್ನು ಗಮನಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.