ETV Bharat / state

ಗ್ರಾಚ್ಯುಟಿ ಹಣಕ್ಕಾಗಿ ಪ್ರಧಾನಿಗೆ ಪತ್ರ ಬರೆದ ನಿವೃತ್ತ ಸಾರಿಗೆ ನೌಕರ

author img

By

Published : Mar 14, 2023, 2:19 PM IST

Retired employee of NWKRTC
ಎನ್‌ಡಬ್ಲ್ಯೂಕೆಆರ್‌ಟಿಸಿ ನಿವೃತ್ತ ನೌಕರ

ಗ್ರಾಚ್ಯುಟಿ ಹಣಕ್ಕಾಗಿ ನಿವೃತ್ತ ನೌಕರರೊಬ್ಬರು ಹುಬ್ಬಳ್ಳಿಯ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ದುಂಬಾಲು ಬೀಳುತ್ತಿದ್ದಾರೆ. ಇದರಿಂದ ಪ್ರಯೋಜನವಾಗದೇ ಇದೀಗ ಪ್ರಧಾನಿ ಮೊರೆ ಹೋಗಿದ್ದಾರೆ.

ಹುಬ್ಬಳ್ಳಿ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ (ಎನ್‌ಡಬ್ಲ್ಯೂಕೆಆರ್‌ಟಿಸಿ) ನಷ್ಟದಿಂದಲೇ ಯಾವಾಗಲೂ ಸುದ್ದಿಯಲ್ಲಿರುವ ಸಂಸ್ಥೆ. ಇದೇ ಸಂಸ್ಥೆ ನಿವೃತ್ತ ಸಿಬ್ಬಂದಿಯೊಬ್ಬರಿಗೆ ಗ್ರಾಚ್ಯುಟಿ ಹಣ ಕೊಡದೆ ಕಿರುಕುಳ ನೀಡುತ್ತಿರುವ ಆರೋಪಕ್ಕೆ ಗುರಿಯಾಗಿದೆ. ಸಾರಿಗೆ ಇಲಾಖೆಯ ನಡವಳಿಕೆಯಿಂದ ಬೇಸತ್ತು ನಿವೃತ್ತ ನೌಕರರೊಬ್ಬರು ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಹುಬ್ಬಳ್ಳಿಯ ಗೋಕುಲ್ ರಸ್ತೆಯ ಕಿರ್ಲೋಸ್ಕರ್ ಲೇಔಟ್​ ನಿವಾಸಿ ಹನಮಂತ ಆರ್.ಅಂಕುಶ್ ಎಂಬವರು ತನಗೆ ಸಿಗಬೇಕಾದ ಗ್ರಾಚ್ಯುಟಿ ಹಣ ನೀಡದ ಸಾರಿಗೆ ಇಲಾಖೆ‌ ಅಧಿಕಾರಿಗಳ ವಿರುದ್ದ ರೋಸಿ ಹೋಗಿದ್ದಾರೆ. 36 ವರ್ಷಗಳಿಂದ ಇಲಾಖೆಯಲ್ಲಿ ಕೆಲಸ ಮಾಡಿ ಕಳೆದ ವರ್ಷ ನಿವೃತ್ತರಾಗಿರುವ ಹನಮಂತ ಅವರಿಗೆ ಇಲಾಖೆಯಿಂದ ಬರಬೇಕಾದ ಗ್ರಾಚ್ಯುಟಿ ಹಾಗೂ ರಜೆ ನಗದೀಕರಣದ ಸೇರಿ ಸುಮಾರು 18 ಲಕ್ಷ ರೂಪಾಯಿ ಬಂದಿಲ್ಲ‌ ಎಂದು ಹೇಳಿದ್ದಾರೆ.

ಹಲವು ಬಾರಿ ಹುಬ್ಬಳ್ಳಿಯ ಸಾರಿಗೆ ಇಲಾಖೆ ಅಧಿಕಾರಿಗಳ ಬಳಿಗೆ ಅಲೆದಾಡಿ‌ ಸುಸ್ತಾಗಿರುವ ಹನಮಂತ ಇದೀಗ ಪ್ರಧಾನಿಗೆ ಪತ್ರ ರವಾನಿಸಿದ್ದಾರೆ. 18 ಲಕ್ಷದಲ್ಲಿ ನನಗೆ 6.5 ಲಕ್ಷ ರೂಪಾಯಿ ಅವಶ್ಯಕತೆ ಇದೆ, ಹಣ ಕೊಡಿ‌ಸಿ ಎಂದು‌ ಮನವಿ ಮಾಡಿದ್ದಾರೆ. ಮಾನವೀಯತೆಯ ಆಧಾರದ ಮೇಲೆ ಹನಮಂತ ತನಗೆ ಸಿಗಬೇಕಾದ ಹಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿಗೂ ಪತ್ರ ಕಳುಹಿಸಿದ್ದಾರೆ. ಹೀಗಿದ್ದರೂ ಇದುವರೆಗೂ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ದುಡಿದ ಹಣ ಕಷ್ಟಕಾಲದಲ್ಲಿ ಸಿಗದೇ ಇರುವುದಕ್ಕೆ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

"ಕಳೆದ 36 ವರ್ಷಗಳಿಂದ ಹುಬ್ಬಳ್ಳಿಯ ಸಾರಿಗೆ ವಿಭಾಗೀಯ ಕಚೇರಿಯಲ್ಲಿ ಕೆಲಸ ಮಾಡಿ ಕಳೆದ ವರ್ಷ ನಿವೃತ್ತನಾಗಿದ್ದೇನೆ. ಇತ್ತ ನೌಕರಿಯೂ ಇಲ್ಲ. ದುಡಿದ ಹಣವೂ ಇಲ್ಲದೇ ಮನೆ ನಡೆಸೋದು ತುಂಬಾ ಕಷ್ಟದ ಕೆಲಸವಾಗಿದೆ. ಒಂದೆಡೆ ನನ್ನ ಆರೋಗ್ಯದಲ್ಲೂ ಸಮಸ್ಯೆ ಇದ್ದು, ಇನ್ನೊಂದೆಡೆ ಮಕ್ಕಳ ಶಿಕ್ಷಣಕ್ಕೆ ಹಣದ ಅವಶ್ಯಕತೆ ಇದೆ ಎಂದು ಗೋಗರೆದರೂ ಅಧಿಕಾರಿಗಳು ಹಣ ಕೊಡುತ್ತಿಲ್ಲ."

"ಇದು ನನ್ನ ಒಬ್ಬನ ಕಥೆ ಅಂದುಕೊಳ್ಳಬೇಡಿ. ಎನ್‌ಡಬ್ಲ್ಯೂಕೆಆರ್‌ಟಿಸಿ ವ್ಯಾಪ್ತಿಯ ಒಟ್ಟು 1764 ಜನ ನಿವೃತ್ತ ನೌಕರರಿಗೆ ಸಾರಿಗೆ ಇಲಾಖೆ ಹಣ ನೀಡಬೇಕಿದೆ. 2021 ರಿಂದ 2023 ರ ವರೆಗೂ ಸುಮಾರು 240 ಕೋಟಿಗೂ ಅಧಿಕ ಹಣ ಸಾರಿಗೆ ಇಲಾಖೆ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಎನ್‌ಡಬ್ಲ್ಯೂಕೆಆರ್‌ಟಿಸಿ ವ್ಯಾಪ್ತಿಯ 1764 ನಿವೃತ್ತ ನೌಕರರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ" ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಎನ್‌ಡಬ್ಲ್ಯೂಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಭರತ, "ಸಂಸ್ಥೆಯ ಆರ್ಥಿಕ ಸ್ಥಿತಿ ಸರಿ ಇಲ್ಲದ ಕಾರಣ ಬಹಳ ಜನರಿಗೆ ಗ್ರಾಚ್ಯುಟಿ ಹಣ ಕೊಟ್ಟಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೂ ತರಲಾಗಿದೆ. ಸರ್ಕಾರ ಹಣ ಬಿಡುಗಡೆ ಮಾಡಿದರೆ ಕೂಡಲೇ ಸಮಸ್ಯೆ ಇತ್ಯರ್ಥಪಡಿಸುತ್ತೇನೆ" ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಎನ್‌ಡಬ್ಲ್ಯೂಕೆಆರ್‌ಟಿಸಿ ಕಾರ್ಯಾಗಾರದಲ್ಲಿ ಅಗ್ನಿ ಅವಘಡ: ತನಿಖೆಗೆ ಆದೇಶಿಸಿದ ಎಂಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.