ETV Bharat / state

ಅಧಿಕಾರ ಶಾಶ್ವತವಲ್ಲ ನಿಮ್ಮ ಹೃದಯದಲ್ಲಿರುವ ಜಾಗ ಶಾಶ್ವತ: ಸಿಎಂ ಭಾವುಕ

author img

By

Published : Apr 6, 2023, 6:52 PM IST

Updated : Apr 6, 2023, 7:26 PM IST

ರಾಜ್ಯ ಪರಿಶಿಷ್ಟ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿ ಮತ್ತು ಒಳ ಮೀಸಲಾತಿ ನೀಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

CM Basavaraja Bommai
ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು

ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಹುಬ್ಬಳ್ಳಿ: ''ಅಧಿಕಾರ ಶಾಶ್ವತವಲ್ಲ ನಿಮ್ಮ ಹೃದಯದಲ್ಲಿರುವ ಜಾಗ ಶಾಶ್ವತವಾಗಿದೆ. ಕೋಟಿಗಟ್ಟಲೆ ನಮ್ಮ ಬಂಧುಗಳಿದ್ದಾರೆ. ನಿಮಗೆ ಒಂದು ಅಳಿಲು ಸೇವೆಯನ್ನು ಸಲ್ಲಿಸಿದ್ದೇನೆ'' ಎಂದು ಸಿಎಂ ಬಸವರಾಜ ಬೊಮ್ಮಾಯಿ ಭಾವುಕವಾಗಿ ಹೇಳಿದರು. ರಾಜ್ಯ ಪರಿಶಿಷ್ಟ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿ ಮತ್ತು ಒಳ ಮೀಸಲಾತಿ ನೀಡಿರುವ ಹಿನ್ನೆಲೆಯಲ್ಲಿ ಇಲ್ಲಿನ ನೆಹರು ಮೈದಾನದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ದೀಪ ಬೆಳಗಿಸಿದ ಬಳಿಕ ಹಲಗೆ ಬಾರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.

ವಂಚನೆ ಮಾಡುವ ಆಟವನ್ನು ಕಾಂಗ್ರೆಸ್ ಆಡಿದೆ - ಸಿಎಂ: ''ಐದು ವರ್ಷ ಬಾವಿಯಲ್ಲಿ ಇಳಿದು ಚುನಾವಣೆ ಬಂದಾಗ ಮಾತ್ರ ಮೇಲೆ ಬರುವುದು. ಚುನಾವಣೆ ಮುಗಿಸಿ ಬಾವಿ ಸೇರುವುದನ್ನು ಕಾಂಗ್ರೆಸ್ ಮಾಡಿದೆ. ವಂಚನೆ ಮಾಡುವ ಆಟವನ್ನು ಕಾಂಗ್ರೆಸ್ ಮಾಡುತ್ತಿದೆ ಈ ಬಗ್ಗೆ ಎಚ್ಚರಿಕೆ ಇರಲಿ. ಸಮಾಜವನ್ನು ಒಡೆದು ಆಳುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ'' ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

''ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾತಿ ಒಡೆಯುವ ಕಾರ್ಯವನ್ನು ಮಾಡಿದ್ದಾರೆ. ಯಾರಿಗೂ ಯಾವುದೇ ಒಂದು ಅವಕಾಶಗಳನ್ನು ನೀಡದೇ ಒಡೆದು ಆಳುವ ನೀತಿಯನ್ನು ಅನುಸರಿಸಿದರು. 2016ರಲ್ಲಿ ನಿರೀಕ್ಷೆಯಿಂದ ನೆಹರು ಮೈದಾನದಲ್ಲಿ ಜನರು ಸೇರಿದ್ದರು. ಆದರೆ, ಸಿದ್ಧರಾಮಯ್ಯ ಅವರು ವೇಗವಾಗಿ ಬಂದು ದೀಪ ಹಚ್ಚಿ ಅದೇ ದಾರಿಯಲ್ಲಿ ಹೋದರು'' ಎಂದು ಗರಂ ಆದರು.

ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ- ಯಡಿಯೂರಪ್ಪ: ''ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ಮುಂದುವರೆಸುತ್ತೇವೆ. ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಅವರ ವೋಟ್ ಬ್ಯಾಂಕ್ ರಾಜಕಾರಣ ಜನರಿಗೆ ಅರ್ಥವಾಗಿದೆ'' ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು‌.

''ಈ ಬಾರಿ ಚುನಾವಣೆಯಲ್ಲಿ ಸುಮಾರು 140 ಸೀಟಿಗಿಂತಲೂ ಹೆಚ್ಚು ಸ್ಥಾನವನ್ನು ಗೆಲ್ಲುತ್ತೇವೆ ಎನ್ನುವ ಭರವಸೆ ವ್ಯಕ್ತಪಡಿಸಿದರು. ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಸಾಕಷ್ಟು ಅವಮಾನ ಮಾಡಿದೆ. ಜಗಜೀವನರಾಮ್ ಅವರಿಗೂ ಕೂಡ ಸಾಕಷ್ಟು ಅವಮಾನ ಮಾಡಿದವರು ಈ ಕಾಂಗ್ರೆಸ್ಸಿಗರು. ಬಂಜಾರ ಸಮುದಾಯದ ಜನರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಸಾಕಷ್ಟು ಕೊಡುಗೆ ನೀಡಿದೆ'' ಎಂದರು. ''ಎಸ್.ಸಿ, ಎಸ್.ಟಿ ಯಾವುದೇ ವರ್ಗದವರೂ ವಸತಿ ರಹಿತರಾಗಿ ಇರಬಾರದು. ಅವರೆಲ್ಲರಿಗೂ ಸೂರನ್ನು ಕಲ್ಪಿಸುವ ಕಾರ್ಯವನ್ನು ಪ್ರಧಾನಮಂತ್ರಿ ಮಾಡುವ ಕನಸನ್ನು ಕಂಡಿದ್ದಾರೆ'' ಎಂದು ಅವರು ಹೇಳಿದರು.

ಕಾಂಗ್ರೆಸ್ ಸುಡುವ ಮನೆಯಲ್ಲಿ ಯಾರು ಹೋಗಬಾರದು- ಜೋಶಿ: ''ಶೋಷಿತ ವರ್ಗಗಳಿಗೆ ಅನ್ಯಾಯ ಮಾಡಿರುವ ಪಕ್ಷ ಅಂದರೆ, ಅದು ಕಾಂಗ್ರೆಸ್ ಪಕ್ಷ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೂ ಕೂಡ ಸಾಕಷ್ಟು ಅಡೆತಡೆಗಳನ್ನು ಉಂಟು ಮಾಡಿರುವುದು ಕಾಂಗ್ರೆಸ್ ಪಕ್ಷ'' ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

''ಕಾಂಗ್ರೆಸ್ ಸುಡುವ ಮನೆಯಲ್ಲಿ ಯಾರು ಕೂಡ ಹೋಗಬಾರದು ಎಂದು ಬಾಬಾಸಾಹೇಬ ಅಂಬೇಡ್ಕರ್ ಅವರು ಹೇಳಿದ್ದಾರೆ. ಹಸಿರು ಕ್ರಾಂತಿ ಹರಿಕಾರ ಜಗಜೀವನರಾಮ್ ಅವರಿಗೆ ಅನ್ಯಾಯ ಮಾಡಿದವರು ಕಾಂಗ್ರೆಸ್ ಪಕ್ಷ. ಮುನಿಯಪ್ಪನವರನ್ನು ಮುಳಿಗಿಸಿದ್ದು, ಕಾಂಗ್ರೆಸ್ ಪಕ್ಷ'' ಎಂದು ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

''ಬಿಜೆಪಿಯವರು ಬಂದರೇ ಮೀಸಲಾತಿ ತೆಗೆದು ಹಾಕುತ್ತಾರೆ ಎಂಬಂತ ಮಾತನ್ನು ಕಾಂಗ್ರೆಸ್ ನಾಯಕರು ಹೇಳಿಕೊಂಡು ಓಡಾಡುತ್ತಿದ್ದರು. ಆದರೆ, ಈಗ ಬೊಮ್ಮಾಯಿ ಸರ್ಕಾರ ಕೀರಿಟ ಇಟ್ಟಂತೆಯೇ ಕಾರ್ಯವನ್ನು ಮಾಡುತ್ತಿದ್ದಾರೆ'' ಎಂದು ಅವರು, ಕಾಂಗ್ರೆಸ್ ಸುಡುವ ಮನೆಯಾಗಿದೆ. ಶೋಷಿತರನ್ನು ಸುಟ್ಟು ರೊಟ್ಟಿ ಮಾಡಿಕೊಂಡು ತಿನ್ನುವವರು ಕಾಂಗ್ರೆಸ್ ಪಕ್ಷದವರು'' ಎಂದು ಕಿಡಿಕಾರಿದರು.

ಜೇನುಗೂಡಿಗೆ ಕೈ ಹಾಕಿ ಬೊಮ್ಮಾಯಿ ನೇತೃತ್ವದ ಸರ್ಕಾರ ಸಿಹಿ ಹಂಚಿದೆ- ಶೆಟ್ಟರ್: ''ನಾವು ಅಧಿಕಾರಕ್ಕೆ ಬರುವ ಮುನ್ನವೇ ಮೀಸಲಾತಿ ಬಗ್ಗೆ ಭರವಸೆ ನೀಡಿದ್ದೆವು. ಅದೇ ರೀತಿಯಲ್ಲಿ ನಾವು ಶೋಷಿತ ವರ್ಗದವರಿಗೆ ಸಮಾನತೆ ನೀಡು ಕಾರ್ಯವನ್ನು ಮಾಡುತ್ತಿದ್ದೇವೆ'' ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ''ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಮಹತ್ವದ ಕಾರ್ಯವನ್ನು ಮಾಡಿದೆ. ಮೀಸಲಾತಿಯ ಜೇನುಗೂಡಿಗೆ ಬೊಮ್ಮಾಯಿಯವರ ಸರ್ಕಾರ ಕೈ ಹಾಕಿ ಎಲ್ಲರಿಗೂ ಸಿಹಿ ಹಂಚುವ ಕಾರ್ಯವನ್ನು ಮಾಡಿದ್ದಾರೆ. ದೇಶದಲ್ಲಿ ದಿನದಲಿತರಿಗೆ ಸೂಕ್ತ ಸಮಾನತೆ ನೀಡಿರುವುದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನಪರ ನಿಲುವನ್ನು ತೋರಿಸುತ್ತದೆ'' ಎಂದರು.

''ಒಳ ಮೀಸಲಾತಿ, ಮೀಸಲಾತಿ ಹೆಚ್ಚಳವನ್ನು ವ್ಯವಸ್ಥಿತವಾಗಿ ಅನುಷ್ಠಾನ ಮಾಡುವ ಮೂಲಕ ನಾವೆಲ್ಲರೂ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೈ ಜೋಡಿಸಬೇಕಿದೆ'' ಎಂದು ಅವರು ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ: ವರುಣಾದಲ್ಲಿ ಸಿದ್ದರಾಮಯ್ಯರನ್ನು ಗೆಲ್ಲಿಸಲು ಬಿಜೆಪಿ, ಕಾಂಗ್ರೆಸ್ ಒಳ ಒಪ್ಪಂದ: ಹೆಚ್​ಡಿಕೆ

Last Updated :Apr 6, 2023, 7:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.