ETV Bharat / state

ಪೊಲೀಸ್ ಹುತಾತ್ಮರ ದಿನಾಚರಣೆ: ಗೌರವ ಸಲ್ಲಿಕೆ ವೇಳೆ ಕಣ್ಣೀರು ಹಾಕಿದ ಮೃತ ಪೊಲೀಸ್ ತಾಯಿ

author img

By ETV Bharat Karnataka Team

Published : Oct 21, 2023, 4:48 PM IST

Updated : Oct 21, 2023, 6:48 PM IST

ಪೊಲೀಸ್ ಹುತಾತ್ಮ ದಿನಾಚರಣೆ
ಪೊಲೀಸ್ ಹುತಾತ್ಮ ದಿನಾಚರಣೆ

ಇಂದು ಪೊಲೀಸ್ ಹುತಾತ್ಮರ ದಿನಾಚರಣೆ ಹಿನ್ನೆಲೆ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು.

ಪೊಲೀಸ್ ಹುತಾತ್ಮರ ದಿನಾಚರಣೆ

ಧಾರವಾಡ: ಇಂದು ಪೊಲೀಸ್ ಹುತಾತ್ಮರ ದಿನಾಚರಣೆ ನಿಮಿತ್ತ ಧಾರವಾಡ ಜಿಲ್ಲಾ ಡಿಎಆರ್ ಮೈದಾನದಲ್ಲಿ ಪೊಲೀಸ್​ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ, ಹುತಾತ್ಮ ಪೊಲೀಸ್​ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸುವಾಗ ಮೃತ ಹುತಾತ್ಮ ಪೊಲೀಸ್​ ಕಾನ್ಸ್​ಟೇಬಲ್ ಹುಚ್ಚಪ್ಪ ಮಲ್ಲಣ್ಣನವರ್​ ಕುಟುಂಬಸ್ಥರು ಕಣ್ಣೀರು ಹಾಕಿದರು‌.

ಗೌರವ ನಮನ ಸಲ್ಲಿಸುವ ವೇಳೆ ಮೃತ ಪೊಲೀಸ್ ತಾಯಿ ನೀಲವ್ವ, ತಂದೆ ಹನುಮಪ್ಪ, ತಂಗಿ, ಅಕ್ಕ, ಮಾವ ಮತ್ತು ತಮ್ಮ ಮಲ್ಲಿಕಾರ್ಜುನ ಮೃತ ಹುಚ್ಚಪ್ಪನನ್ನು ನೆನೆದು ಭಾವುಕರಾದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಹಾಗೂ ಗಣ್ಯರು ಮಲ್ಲಣ್ಣನವರ್​ ಕುಟುಂಬ ಸದಸ್ಯರನ್ನು ಸಂತೈಸಿದರು. ಗಣೇಶೋತ್ಸವ ಆಚರಣೆ ವೇಳೆ ಧಾರವಾಡದ ಯರಿಕೊಪ್ಪ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಚ್ಚಪ್ಪ ಮಲ್ಲಣ್ಣನವರು ಮೃತಪಟ್ಟಿದ್ದರು. ಧಾರವಾಡದ ಗರಗ ಪೊಲೀಸ್ ಠಾಣೆಯಲ್ಲಿ ಕಾನ್ಸ್​​​ಟೇಬಲ್ ಆಗಿ ಹುಚ್ಚಪ್ಪ ಕೆಲಸ ಮಾಡುತ್ತಿದ್ದರು.

ಮಾನವೀಯತೆ ಮೆರೆದ ಗರಗ ಠಾಣೆ ಪೊಲೀಸ್ ಸಿಬ್ಬಂದಿ: ಗರಗ ಪೊಲೀಸ್ ಠಾಣೆ ಹಾಗೂ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿರುವ ಹುಚ್ಚಪ್ಪನ ಸಹೋದ್ಯೋಗಿಗಳು ಪಿಎಸ್ಐ ಎಫ್.ಎಮ್.ಮಂಟೂರ ನೇತೃತ್ವದಲ್ಲಿ ಸುಮಾರು 1 ಲಕ್ಷ ಐದು ಸಾವಿರ ರೂ.ಗಳನ್ನು ಆರ್ಥಿಕ ಸಹಾಯಧನವಾಗಿ ಇಂದಿನ ಕಾರ್ಯಕ್ರಮದಲ್ಲಿ ಎಸ್.ಪಿ.ಡಾ.ಗೋಪಾಲ ಬ್ಯಾಕೋಡ ಅವರ ಮೂಲಕ ಹುಚ್ಚಪ್ಪನ ಕುಡುಂಬಕ್ಕೆ ನೀಡಿದರು. ಪೊಲೀಸ್ ಇಲಾಖೆ ಮತ್ತು ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ಹಾಗೂ ಆರ್ಥಿಕ ನೆರವನ್ನು ಮೃತ ಹುಚ್ಚಪ್ಪನ ಕುಟುಂಬಕ್ಕೆ ತಲುಪಿಸಲು ಎಲ್ಲ ಸಹಾಯ, ನೆರವು ನೀಡಲಾಗುವುದು ಎಂದು ಎಸ್.ಪಿ ತಿಳಿಸಿದರು.

ಗಣ್ಯರಿಂದ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಅರ್ಪಣೆ: ನಗರದ ಕಾರವಾರ ರಸ್ತೆಯ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಆಯುಕ್ತಾಲಯ ಹುಬ್ಬಳ್ಳಿ ಧಾರವಾಡ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ನಿಮಿತ್ತ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಅರ್ಪಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು. ಈ ವೇಳೆ, ಪ್ರತಿ ವರ್ಷ ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. ಆ ಮೂಲಕ ಅವರ ತ್ಯಾಗ ನೆನೆಯಲಾಗುವುದು. ನಿತ್ಯದಲ್ಲಿ ಪೊಲೀಸರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ‌. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದರು.

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಕೆ. ಸುಕುಮಾರ ಮಾತನಾಡಿ, 1959ರಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆಯ ಎಸ್‌ಐ ಕರಂ ಸಿಂಗ್‌ ನೇತೃತ್ವದ ತಂಡ ಕೇವಲ ರೈಫಲ್‌ನೊಂದಿಗೆ ಲಡಾಖ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿತ್ತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಚೀನಾ ಪಡೆ ಭಾರತೀಯ ಪೊಲೀಸರ ಮೇಲೆ ಏಕಾಏಕಿ ದಾಳಿ ನಡೆಸಿದಾಗ ವೀರಾವೇಷದಿಂದ ಹೋರಾಡಿ ಪ್ರಾಣಾರ್ಪಣೆ ಮಾಡಿದರು.

ಇವರ ಪ್ರಾಣತ್ಯಾಗದ ನೆನಪಿನಲ್ಲಿ ರಾಷ್ಟ್ರಾದ್ಯಂತ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ. ಕರ್ತವ್ಯನಿರತ ಪೊಲೀಸರು ಪ್ರಾಣ ತ್ಯಾಗ ಮಾಡಿದ ಅಧಿಕಾರಿ, ಸಿಬ್ಬಂದಿಯನ್ನು ಗೌರವ ಪೂರ್ವಕವಾಗಿ ಸ್ಮರಿಸಲಾಗುತ್ತದೆ. ಲಡಾಖ್ ನಲ್ಲಿ 16 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ಹುತಾತ್ಮರ ಸ್ಮಾರಕ ನಿರ್ಮಿಸಲಾಗಿದೆ. ಈ ವರ್ಷದಲ್ಲಿ ದೇಶದಲ್ಲಿ 189 ಪೊಲೀಸರು ಕರ್ತವ್ಯದಲ್ಲಿದ್ದಾಗ ಹುತಾತ್ಮರಾಗಿದ್ದಾರೆ.
ಕರ್ನಾಟಕದಲ್ಲಿ 16 ಪೊಲೀಸರು ಕರ್ತವ್ಯದಲ್ಲಿದ್ದಾಗ ಕೊನೆಯುಸಿರೆಳೆದಿದ್ದಾರೆ. ಇವರೆಲ್ಲರ ತ್ಯಾಗವನ್ನು ಸ್ಮರಿಸುವ ಮೂಲಕ ಗೌರವ ಸಮರ್ಪಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಆಂತರಿಕ ಭದ್ರತಾ ವಿಭಾಗದ ಐಜಿ ವಿಪುಲಕುಮಾರ, ಡಿಸಿಪಿಗಳಾದ ರವೀಶ್ ಸಿ.ಆರ್, ರಾಜೀವ್ ಎಂ., ಮಾಜಿ ಸಂಸದರಾದ ಐ.ಜಿ.ಸನದಿ, ಉದ್ಯಮಿಗಳಾದ ವಿ.ಎಸ್.ವಿ. ಪ್ರಸಾದ್, ಮಹೇಂದ್ರ ಸಿಂಘಿ, ಮಾಜಿ ಮೇಯರ್ ಡಿ.ಕೆ. ಚವ್ಹಾಣ, ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಕುಟುಂಬ ವರ್ಗದವರು, ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ಚಾಮರಾಜನಗರದಲ್ಲಿ ಅಗಲಿದ ಆರಕ್ಷಕರಿಗೆ ಪುಷ್ಪ ನಮನ: ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಂದು ನಗರದ ಕವಾಯತು ಮೈದಾನದಲ್ಲಿ ಪೊಲೀಸ್ ಹುತಾತ್ಮ ದಿನ ಆಚರಣೆ ಮಾಡಲಾಯಿತು. ಜಿಲ್ಲಾಧಿಕಾರಿ ಶಿಲ್ಪಾನಾಗ್, ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಅಗಲಿದ ಆರಕ್ಷಕ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಲಾಯಿತು.

ಹುತಾತ್ಮ ಪೊಲೀಸರಿಗೆ 21 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಗೌರವಿಸಲಾಯಿತು. ಈ ವೇಳೆ, ಡಿಸಿ ಶಿಲ್ಪಾನಾಗ್ ಮಾತನಾಡಿ, ಪೊಲೀಸ್ ವೃತ್ತಿ ಶ್ರೇಷ್ಠ ವೃತ್ತಿಯಾಗಿದೆ, ಗಡಿಯಲ್ಲಿ ಸೈನಿಕರು ಎಷ್ಟು ಮುಖ್ಯವೋ ನಾಡಿನಲ್ಲಿ ಪೊಲೀಸರು ಅಷ್ಟೇ ಮುಖ್ಯ, ಇಂದು ಪೊಲೀಸರ ಗೌರವವಂದನೆಯನ್ನು ಸ್ವೀಕರಿಸಲು ಬಹಳಷ್ಟು ಹೆಮ್ಮೆ ತಂದಿದೆ ಎಂದರು.

ಇದನ್ನೂ ಓದಿ: ರಾಜ್ಯದ ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆಗೆ ನೇರ ಸಂಬಂಧವಿದೆ: ಸಿಎಂ ಸಿದ್ದರಾಮಯ್ಯ

Last Updated :Oct 21, 2023, 6:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.