ETV Bharat / state

ಯುವಜನೋತ್ಸವ: 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..' ಹಾಡಿದ ಸಚಿವ ಪ್ರಹ್ಲಾದ್​ ಜೋಶಿ

author img

By

Published : Jan 16, 2023, 7:18 AM IST

Updated : Jan 16, 2023, 7:36 AM IST

pralhad joshi
ಪ್ರಹ್ಲಾದ್​ ಜೋಶಿ

ಜನವರಿ 12ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡ ಹುಬ್ಬಳ್ಳಿ-ಧಾರವಾಡ ಯುವಜನೋತ್ಸವ ಇಂದು ಸಂಪನ್ನಗೊಳ್ಳಲಿದೆ.

'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..' ಹಾಡಿದ ಸಚಿವ ಪ್ರಹ್ಲಾದ್​ ಜೋಶಿ

ಧಾರವಾಡ: ರಾಷ್ಟ್ರೀಯ ಯುವಜನೋತ್ಸವದಲ್ಲಿ ಡಾ.ರಾಜ್​ಕುಮಾರ್​ ಅವರ ಜನಪ್ರಿಯ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡಿನ ಎರಡು ಸಾಲುಗಳನ್ನು ಹಾಡುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಭಾನುವಾರ ಗಮನ ಸೆಳೆದರು. ಧಾರವಾಡದ ಕೆಸಿಡಿ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವಜನೋತ್ಸವದಲ್ಲಿ ಆಲ್​ ಒಕೆ ತಂಡಕ್ಕೆ ಜೋಶಿ ನೆನಪಿನ ಕಾಣಿಕೆ‌ ಕೊಡಲು ವೇದಿಕೆ ಮೇಲೆ ಆಗಮಿಸಿದ್ದರು. ಈ ವೇಳೆ ತಂಡದ ಸದಸ್ಯರು ಅವರನ್ನು ಹಾಡಲು ಒತ್ತಾಯಿಸಿದ್ದಾರೆ. 'ನಾನು ವೇದಿಕೆ ಮೇಲೆ ಮೆಮೆಂಟೊ ಕೊಡಲು ಬಂದಿದ್ದೆ. ಆದರೆ ನನಗೆ ಹಾಡಬೇಕೆಂಬ ಪನಿಶ್​ಮೆಂಟ್​ ಕೊಡುತ್ತಿದ್ದಾರೆ' ಎಂದು ಹೇಳಿದ ಜೋಶಿ, ಗಾಯಕರ ಜೊತೆಗೂಡಿ ಹಾಡಿದರು.

ಇಂದು ಯುವಜನೋತ್ಸವ ಸಂಪನ್ನ: ಅದ್ದೂರಿಯಾಗಿ ನಡೆಯುತ್ತಿರುವ ಯುವಜನೋತ್ಸವ ಕಾರ್ಯಕ್ರಮ ಇಂದು ಕೊನೆಗೊಳ್ಳಲಿದೆ. ಬೆಳಗ್ಗೆ 10 ಗಂಟೆಗೆ ಕೆಸಿಡಿ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್​ ಆಗಮಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಹಾಗು ಅನುರಾಗ್ ಸಿಂಗ್ ಠಾಕೂರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆಚಾರ್ ಹಾಲಪ್ಪ ಬಸಪ್ಪ, ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಯುವಜನೋತ್ಸವ: ಜಲಕ್ರೀಡೆಯಲ್ಲಿ ಭಾಗವಹಿಸಿ ಸಂತಸಪಟ್ಟ ಯುವ ಜನರು..

ಸಭಾಂಗಣದ ಒಳಗಡೆ 1,500 ಪ್ರತಿನಿಧಿಗಳಿಗೆ ಕಾರ್ಯಕ್ರಮ ವೀಕ್ಷಿಸಲು ಆಸನ ವ್ಯವಸ್ಥೆ ಮಾಡಲಾಗಿದ್ದು ಉಳಿದ 5,500 ಪ್ರತಿನಿಧಿಗಳು ಸಮಾರೋಪ ಸಮಾರಂಭ ವೀಕ್ಷಿಸಲು ವಿಶ್ವವಿದ್ಯಾಲಯದ ಆವರಣದಲ್ಲಿ ಎಲ್.ಇ.ಡಿ. ಪರದೆ ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ತಿಳಿಸಿದ್ದಾರೆ. ಮಧ್ಯಾಹ್ನದ ಭೋಜನದ ನಂತರ ಧಾರವಾಡ ವಿಶ್ವವಿದ್ಯಾಲಯ ಕಾಲೇಜು ಮೈದಾನದಲ್ಲಿ ವೈಭವದ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಖ್ಯಾತ ಭರತನಾಟ್ಯ ಮತ್ತು ಕಥಕ್ ಕಲಾವಿದೆ ನಿರುಪಮಾ ರಾಜೇಂದ್ರ ಅವರಿಂದ ನೃತ್ಯ ವೈಭವ, ಬಾಲಿವುಡ್ ಗಾಯಕ ಅಮಿತ್ ತ್ರಿವೇದಿ ಅವರಿಂದ ಸಂಗೀತ ರಸಮಂಜರಿ ನಡೆಯಲಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ಯುವಜನೋತ್ಸವ: ಸ್ವಾಮಿ ವಿವೇಕಾನಂದರ ಜನ್ಮದಿನದ ನಿಮಿತ್ತ ರಾಷ್ಟ್ರೀಯ ಯುವಜನೋತ್ಸವ ಪ್ರಪ್ರಥಮ ಬಾರಿಗೆ ಉತ್ತರ ಕರ್ನಾಟಕದ ಭಾಗದಲ್ಲಿ ನಡೆಯುತ್ತಿದೆ. ಹುಬ್ಬಳ್ಳಿ ರೈಲ್ವೆ ಮೈದಾನಕ್ಕೆ ಪ್ರಧಾನಿ ಮೋದಿ ಜನವರಿ 12 ಗುರುವಾರ ರೋಡ್​ ಶೋ ಮೂಲಕ ತೆರಳಿ, ಯುವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು.

ರಂಗೋಲಿಯಲ್ಲಿ ಮೂಡಿಬಂದಿತ್ತು ಮೋದಿ ಚಿತ್ರ: ಹುಬ್ಬಳ್ಳಿಯ ದಿನೇಶ್ ಚಿಲ್ಲಾಳ ಎಂಬ ಕಲಾವಿದ ವಿನೂತನ ರೀತಿಯಲ್ಲಿ ಕಲಾಕೃತಿಯನ್ನು ರಂಗೋಲಿಯಲ್ಲಿ ಬಿಡಿಸಿ ಮೋದಿ ಅವರನ್ನು ವಾಣಿಜ್ಯ ನಗರಿಗೆ ಸ್ವಾಗತಿಸಿದ್ದರು. ಯುವಜನೋತ್ಸವ ಉದ್ಘಾಟನೆಯ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಮೋದಿಯವರ ಭಾವಚಿತ್ರವನ್ನು ರಂಗೋಲಿಯಲ್ಲಿ ಕಲಾವಿದ ಬಿಡಿಸಿದ್ದರು. 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮೋದಿ ಧರಿಸಿದ್ದ ಪೋಷಾಕಿನ ಚಿತ್ರ ಇದಾಗಿತ್ತು.

ಇದನ್ನೂ ಓದಿ: ಧಾರವಾಡ ರಾಷ್ಟ್ರೀಯ ಯುವಜನೋತ್ಸವ: ಕಣ್ಮನ ಸೆಳೆದ ಯುವ ಕಲಾವಿದರ ಕಲಾಕೃತಿಗಳು

Last Updated :Jan 16, 2023, 7:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.