ETV Bharat / state

ಓದಿದ್ದು ಬಿಇ, ಕನ್ನಡದಲ್ಲಿ ಯುಪಿಎಸ್​ಸಿ ಪರೀಕ್ಷೆ ಪಾಸ್ ಮಾಡಿದ ಹುಬ್ಬಳ್ಳಿ ಯುವಕ

author img

By

Published : Sep 26, 2021, 1:50 PM IST

UPSC exam
ಯುಪಿಎಸ್​ಸಿ ಪರೀಕ್ಷೆ

ಅಮೆರಿಕದಲ್ಲಿ ಫೈನಾನ್ಸ್ ಮ್ಯಾನೇಜ್​ಮೆಂಟ್ ಕೋರ್ಸ್ ಪೂರೈಸಿ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ಯುವಕನೋರ್ವ ಯುಪಿಎಸ್​ಸಿಯಲ್ಲಿ ಸಾಧನೆ ಮಾಡಬೇಕೆಂಬ ಹಠದೊಂದಿಗೆ ತಾಯ್ನಾಡಿಗೆ ಮರಳಿ, ಇದೀಗ 235ನೇ ರ್‍ಯಾಂಕ್ ಪಡೆದಿದ್ದಾನೆ.

ಹುಬ್ಬಳ್ಳಿ: ಈತ ಓದಿದ್ದು ಇಂಜಿನಿಯರಿಂಗ್ ಪದವಿ. ಆದ್ರೆ ಯುಪಿಎಸ್​ಸಿ ಪರೀಕ್ಷೆ (UPSC) ಬರೆದಿದ್ದು ಮಾತ್ರ ಕನ್ನಡದಲ್ಲಿ. ಆಂಗ್ಲ ಮಾಧ್ಯಮದಲ್ಲಿ ಓದಿದ್ರೂ ಕೂಡ ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿಸಿಕೊಂಡು ಐದನೇ ಪ್ರಯತ್ನದಲ್ಲಿ ಹುಬ್ಬಳ್ಳಿಯ ಶ್ರೀನಿವಾಸ್ ಎಂ.ಪಿ 235ನೇ ರ್‍ಯಾಂಕ್ ಪಡೆದಿದ್ದಾರೆ.

ಮೂಲತಃ ದಾವಣಗೆರೆ ಜಿಲ್ಲೆಯ ಮಲೆಬೆನ್ನೂರಿನ ನಿವಾಸಿಯಾಗಿರುವ ಶ್ರೀನಿವಾಸ್ ಪೋಷಕರು ಹಲವು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಅಷ್ಟೇ ಅಲ್ಲದೆ, ಅಮೆರಿಕದಲ್ಲಿ ಲಕ್ಷಾಂತರ ರೂ. ಸಂಬಳ ಬರುವ ನೌಕರಿ ಬಿಟ್ಟು ಬಂದು ಸಾಧನೆ ಮಾಡುವ ಮೂಲಕ ಶ್ರೀನಿವಾಸ್ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.

ಯುಪಿಎಸ್​ಸಿ ಪರೀಕ್ಷೆ ಪಾಸ್ ಮಾಡಿದ ಹುಬ್ಬಳ್ಳಿಯ ಶ್ರೀನಿವಾಸ್

ಐಚ್ಛಿಕ ವಿಷಯವಾಗಿ ಕನ್ನಡ ಆಯ್ಕೆ:

ಇಂಜಿನಿಯರಿಂಗ್ ಓದಿದ್ದ ಶ್ರೀನಿವಾಸ್ ಕನ್ನಡವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಯುಪಿಎಸ್​ಸಿಯಲ್ಲಿ ತೇರ್ಗಡೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಮೊದಲು ಗಣಿತ ವಿಷಯವನ್ನು ಐಚ್ಛಿಕವಾಗಿ ತೆಗೆದುಕೊಂಡಿದ್ದ ಶ್ರೀನಿವಾಸ್, ನಿರೀಕ್ಷಿತ ಫಲಿತಾಂಶ ಬಾರದ ಹಿನ್ನಲೆಯಲ್ಲಿ ಕನ್ನಡವನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಕೊನೆಗೂ ಮಾತೃಭಾಷೆ ಆಯ್ಕೆ ಮಾಡಿಕೊಳ್ಳುವ ಮೂಲಕ ಯುಪಿಎಸ್‌ಸಿಯಲ್ಲಿ ತೇರ್ಗಡೆಯಾಗಿದ್ದಾರೆ.

ಅಮೆರಿಕದಲ್ಲಿ ಸಿಕ್ಕ ನೌಕರಿ ಬಿಟ್ಟು ಹುಟ್ಟೂರಿನಲ್ಲಿ ಸಾಧನೆ :

ಶ್ರೀನಿವಾಸ್ ತಂದೆ ಪ್ರಸನ್ನ, ನೈರುತ್ಯ ರೈಲ್ವೆ ವಿಭಾಗದಲ್ಲಿ ರೈಲ್ವೆ ಎಕ್ಸ್​ಪ್ರೆಸ್ ಗಾರ್ಡ್ ಆಗಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಬ್ಬಳ್ಳಿಯ ಚಿನ್ಮಯಿ ವಿದ್ಯಾಲಯದಲ್ಲಿ ಪೂರೈಸಿದ್ದ ಶ್ರೀನಿವಾಸ್, ಹೈದರಾಬಾದ್​ನಲ್ಲಿ ಪಿಯುಸಿ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿದರು. ನಂತರ ಅಮೆರಿಕದಲ್ಲಿ ಫೈನಾನ್ಸ್ ಮ್ಯಾನೇಜ್​ಮೆಂಟ್ ಕೋರ್ಸ್ ಪೂರೈಸಿ, ಖಾಸಗಿ ಕಂಪನಿಯೊಂದರಲ್ಲಿ ಒಂದು ವರ್ಷ ಕೆಲಸ ಮಾಡಿದ್ದಾರೆ. ಆದರೆ ಯುಪಿಎಸ್​ಸಿಯಲ್ಲಿ ಸಾಧನೆ ಮಾಡಬೇಕೆಂಬ ಹಠದೊಂದಿಗೆ ತಾಯ್ನಾಡಿಗೆ ಮರಳಿದ ಶ್ರೀನಿವಾಸ್, 2016 ರಲ್ಲಿ ಪ್ರಥಮ ಬಾರಿಗೆ ಪರೀಕ್ಷೆ ಬರೆದಿದ್ದರು.

ಐದನೇ ಪ್ರಯತ್ನದಲ್ಲಿ ಜಯ:

ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್ ಸಹ ಪಾಸಾಗಿರಲಿಲ್ಲ. ನಿರಾಸೆಗೊಳ್ಳದೆ 2017 ರಲ್ಲಿ ಪರೀಕ್ಷೆ ಬರೆದಿದ್ದನಾದರೂ ಮೇನ್ಸ್ ಎಕ್ಸಾಂನಲ್ಲಿ ಅನುತ್ತೀರ್ಣನಾಗಿದ್ದ. 2019 ರಲ್ಲಿ ಕನ್ನಡ ಐಚ್ಛಿಕ ವಿಷಯ ತೆಗೆದುಕೊಂಡು ಸಂದರ್ಶನದ ಹಂತಕ್ಕೂ ಹೋಗಿದ್ದರು. ಇದೀಗ 2020ರ ಪರೀಕ್ಷೆಯಲ್ಲಿ ಶ್ರೀನಿವಾಸ್ 235 ನೇ ರ್‍ಯಾಂಕ್ ಗಳಿಸಿ ಉತ್ತಮ ಸಾಧನೆ ಮಾಡಿದ್ದಾನೆ.

ಫಲಿತಾಂಶ ಪ್ರಕಟಗೊಂಡ ನಂತರ ಶ್ರೀನಿವಾಸ್​ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಸಿಹಿ ತಿನ್ನಿಸುವ ಮೂಲಕ ತಾಯಿ ಸಂಧ್ಯಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಶ್ರೀನಿವಾಸ್ ಸಾಧನೆಗೆ ಮೆಚ್ಚುಗೆ:

ಶ್ರೀನಿವಾಸ್ ಸಾಧನೆ ಕುರಿತು ಮಾತನಾಡಿರುವ ತಾಯಿ ಸಂಧ್ಯಾ, ಮಗನ ಮೇಲೆ ನಂಬಿಕೆ ಇತ್ತು. ಮಗ ಖಂಡಿತ ಸಾಧಿಸುತ್ತಾನೆ ಅನ್ನೋ ವಿಶ್ವಾಸವಿತ್ತು. ಕೊನೆಗೂ ಯುಪಿಎಸ್​ಸಿ ಯಲ್ಲಿ ಉತ್ತಮ ಱಂಕ್​ ಆಗುವ ಮೂಲಕ ನಮ್ಮೆಲ್ಲರಿಗೂ ಹೆಮ್ಮೆ ತಂದಿದ್ದಾನೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಶ್ರೀನಿವಾಸ್​ ಸಾಧನೆಗೆ ಹುಬ್ಬಳ್ಳಿ ಮಾತ್ರವಲ್ಲದೇ, ಉತ್ತರ ಕರ್ನಾಟಕದ ಜನತೆಯೂ ಮೆಚ್ಚುಗೆ ವ್ಯಕ್ತಪಡಿಸಿ, ಶುಭಾಶಯ ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.