ETV Bharat / state

ನೂತನ ರಾಷ್ಟ್ರೀಯ ನೀತಿ ಜಾರಿ : ಕವಿವಿಯಲ್ಲಿ ಸಾಹಿತಿಗಳ ಜೊತೆ ಉನ್ನತ ಶಿಕ್ಷಣ ಸಚಿವರ ಸಂವಾದ

author img

By

Published : Aug 21, 2021, 10:01 PM IST

education-ministers-conversation-with-literature-in-kud
ಸಿ ಎನ್ ಅಶ್ವತ್ಥನಾರಾಯಣ

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನೆಲೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಸಭೆ ನಡೆಸಿ, ಶಿಕ್ಷಣ ನೀತಿಯಲ್ಲಿ ಅಡಕವಾಗಿರುವ ಅಂಶಗಳ ಬಗ್ಗೆ ಸಾಹಿತಿಗಳಿಗೆ ವಿವರಿಸಿದ ಸಚಿವರು, ಅವರಲ್ಲಿದ್ದ ಸಂಶಯಗಳನ್ನು ನಿವಾರಿಸಿದರು. ಅಲ್ಲದೆ, ಶಿಕ್ಷಣ ನೀತಿಯಲ್ಲಿರುವ ಕ್ರಾಂತಿಕಾರಕ ಅಂಶಗಳ ಬಗ್ಗೆ ಇದೇ ವೇಳೆ ಸಾಹಿತಿಗಳು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು..

ಧಾರವಾಡ : ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಅವರು ಸಾಹಿತ್ಯ ವಲಯದ ಪ್ರಮುಖರ ಜತೆ ಮಹತ್ವದ ಸಂವಾದ ನಡೆಸಿದರು.

Education Minister's Conversation with Literature in kud
ಸಾಹಿತಿಗಳ ಜೊತೆ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಸಂವಾದ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಸಭೆ ನಡೆಸಿ, ಶಿಕ್ಷಣ ನೀತಿಯಲ್ಲಿ ಅಡಕವಾಗಿರುವ ಅಂಶಗಳ ಬಗ್ಗೆ ಸಾಹಿತಿಗಳಿಗೆ ವಿವರಿಸಿದ ಸಚಿವರು, ಅವರಲ್ಲಿದ್ದ ಸಂಶಯಗಳನ್ನು ನಿವಾರಿಸಿದರು. ಅಲ್ಲದೆ, ಶಿಕ್ಷಣ ನೀತಿಯಲ್ಲಿರುವ ಕ್ರಾಂತಿಕಾರಕ ಅಂಶಗಳ ಬಗ್ಗೆ ಇದೇ ವೇಳೆ ಸಾಹಿತಿಗಳು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

education-ministers-conversation-with-literature-in-kud
ಸಾಹಿತಿಗಳ ಜೊತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಂವಾದ

ಈ ವರ್ಷದಿಂದಲೇ ಜಾರಿ ಆಗುತ್ತಿರುವ ಈ ನೀತಿಯಲ್ಲಿ ಮಾತೃಭಾಷಾ ಕಲಿಕೆಗೆ ಇರುವ ಮಹತ್ವವನ್ನು ಸಾಹಿತಿಗಳಿಗೆ ಮನವರಿಕೆ ಮಾಡಿಕೊಟ್ಟ ಸಚಿವರು, ಬಹುಶಿಸ್ತೀಯ ಹಾಗೂ ಬಹು ಆಯ್ಕೆಯ ಕಲಿಕೆಯಿಂದ ಆಗುವ ಬದಲಾವಣೆಗಳ ಬಗ್ಗೆಯೂ ವಿವರವಾಗಿ ತಿಳಿಸಿದರು.

Education Minister's Conversation with Literature in kud
ಸಾಹಿತಿಗಳ ಜೊತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಸಂವಾದ

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶೈಕ್ಷಣಿಕ ವ್ಯವಸ್ಥೆ ಉನ್ನತೀಕರಿಸುವ ಹಾಗೂ ವಿದ್ಯಾರ್ಥಿಗಳ ಹಿತವನ್ನು ಎತ್ತಿಹಿಡಿಯುವ ಧ್ಯೇಯವೊಂದನ್ನು ಹೊರತುಪಡಿಸಿ ಬೇರಾವ ಅಜೆಂಡಾವು ಇಲ್ಲವೆಂದು ಸ್ಪಷ್ಟವಾಗಿ ತಿಳಿಸಿದ ಸಚಿವರು, ಸಂವಾದದಲ್ಲಿ ಪಾಲ್ಗೊಂಡಿದ್ದ ಪ್ರತಿ ಸಾಹಿತಿ ಅಭಿಪ್ರಾಯವನ್ನು ಆಲಿಸಿದರು.

ಎರಡು ವರ್ಷ ಮಾತೃಭಾಷೆ ಕಲಿಕೆ : ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರತಿ ವಿದ್ಯಾರ್ಥಿ ಒಂದಲ್ಲ ಎರಡು ವರ್ಷ ತನ್ನ ಮಾತೃ ಭಾಷೆಯಲ್ಲಿ ಕಡ್ಡಾಯವಾಗಿ ಕಲಿಯಬೇಕು. ಈ ಮೂಲಕ ಮಾತೃ ಭಾಷಾ ಕಲಿಕೆಗೆ ಅತ್ಯುನ್ನತ ಮಹತ್ವ ಕೊಡಲಾಗುತ್ತದೆ. ಇಷ್ಟೇ ಅಲ್ಲದೆ, ಕನ್ನಡ ಭಾಷೆಯಲ್ಲೇ ತಾಂತ್ರಿಕ ಶಿಕ್ಷಣ ನೀಡುತ್ತಿದ್ದೇವೆ. ಇದರಲ್ಲಿ ಕಲಿತವರಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣ ನೀಡುವಲ್ಲಿ ರಿಯಾಯಿತಿ ಇಲ್ಲವೇ, ಮೀಸಲು ಕೊಡಲಾಗುವುದು ಎಂದು ಸಚಿವರು ಹೇಳಿದರು.

Education Minister's Conversation with Literature in kud
ಸಾಹಿತಿಗಳ ಜೊತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಂವಾದ

ಸ್ಥಳೀಯ ಭಾಷೆಯಲ್ಲಿ ತಾಂತ್ರಿಕ ಶಿಕ್ಷಣ ಕೊಡಬೇಕಾದರೆ ಬಂಡವಾಳ ಹೆಚ್ಚು ಹೂಡಬೇಕು. ಇದಕ್ಕೆ ತಂತ್ರಜ್ಞಾನದ ನೆರವು ಬೇಕು. ಕೋಡಿಂಗ್ ಮತ್ತಿತರರ ಕೆಲಸ ಆಗಬೇಕಾಗುತ್ತದೆ. ಇದಕ್ಕೂ ಅವಕಾಶ ಕಲ್ಪಿಸುವ ವ್ಯವಸ್ಥೆ ಆಗಲಿದೆ ಎಂದರು.

ಹತ್ತು ವರ್ಷಕ್ಕೊಮ್ಮೆ ಶಿಕ್ಷಣ ನೀತಿ ಬದಲಾಗಲಿ : ಮಾಲತಿ ಪಟ್ಟಣಶೆಟ್ಟಿ

ಸಂವಾದದಲ್ಲಿ ಮಾತನಾಡಿ ಲೇಖಕಿ ಮಾಲತಿ ಪಟ್ಟಣಶೆಟ್ಟಿ ಅವರು, ಶಿಕ್ಷಣ ನೀತಿ ಕನಿಷ್ಠ ಹತ್ತು ವರ್ಷಕ್ಕಾದರೂ ಬದಲಾಗಬೇಕು. 35 ವರ್ಷದವರೆಗೂ ನೀತಿ ಬದಲಾಗಿಲ್ಲ‌ ಎನ್ನುವುದನ್ನ ಊಹೆ ಮಾಡಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಆಗಾಗ್ಗೆ ಆಗಬೇಕು ಎಂದರು.

ಮಾಲತಿ ಪಟ್ಟಣಶೆಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಬದಲಾವಣೆಯ ತಳಹದಿಯ ಮೇಲೆಯೇ ಹೊಸ ಶಿಕ್ಷಣ ನೀತಿಯನ್ನು ತರಲಾಗಿದೆ. ಅಗತ್ಯಬಿದ್ದಾಗ ಬದಲಾವಣೆ ಮಾಡಿಕೊಳ್ಳುವ ಎಲ್ಲ ಸಾಧ್ಯತೆಗಳನ್ನು ಮುಕ್ತವಾಗಿ ಇರಿಸಲಾಗಿದೆ. ಇನ್ನು ಮುಂದೆ ಶಿಕ್ಷಣ ನೀತಿ ಬದಲಾವಣೆಗೆ ದಶಕಗಳ ಕಾಲ ಕಾಯುತ್ತಾ ಕೂರಬೇಕಿಲ್ಲ ಎಂದರು.

Education Minister's Conversation with Literature in kud
ಸಾಹಿತಿಗಳ ಜೊತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಸಂವಾದ

ಮುಖ್ಯವಾಗಿ ಈ ಶಿಕ್ಷಣ ನೀತಿಯಲ್ಲಿ ಉದ್ಯೋಗ ಕೌಶಲ್ಯದ ತರಬೇತಿ ಪಠ್ಯದ ಕ್ರಮ ಅಳವಡಿಸಲಾಗಿದೆ. ಅಧ್ಯಯನ ಮತ್ತು ಸಂಶೋಧನೆಗೆ ಬಹಳ ಅವಕಾಶ ಇದೆ. ಭವಿಷ್ಯದ ದಿನಗಳಲ್ಲಿ ಉನ್ನತ ಶಿಕ್ಷಣ ಹಾಗೂ ಸಂಶೋಧನೆಗಾಗಿ ವಿದೇಶಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗಲಿದೆ. ಮುಖ್ಯವಾಗಿ ಪದವಿ, ಪಿಜಿ‌ ಮಟ್ಟದಲ್ಲೇ ಸಂಶೋಧನೆಗೆ ಒತ್ತು‌ ಕೊಡಲಾಗುವುದು ಎಂದು ಡಾ.ಅಶ್ವತ್ಥ್ ನಾರಾಯಣ ತಿಳಿಸಿದರು.

ಮೌಲ್ಯಮಾಪನ, ಸಾಮರ್ಥ್ಯದ ಬಗ್ಗೆ ನಿಗಾ : ಸಾಹಿತಿ ಪ್ರೊ. ಹರ್ಷ

ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸಾಹಿತಿ ಪ್ರೊ. ಹರ್ಷ ಡಂಬಳ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ಬೋಧಕರ ಸಾಮರ್ಥ್ಯ ಮತ್ತು ಮೌಲ್ಯಮಾಪನದ ಬಗ್ಗೆ ನಿರಂತರ ನಿಗಾ ಇಡುವ ವ್ಯವಸ್ಥೆ ಸಾಧ್ಯವೇ ಎಂಬ ಡಂಬಳ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಬೋಧಕರ ಮೌಲ್ಯಮಾಪನ ಎನ್ನುವುದು ನಿರಂತರವಾಗಿ ಆಗುತ್ತದೆ.

ಗುಣಮಟ್ಟಕ್ಕೆ ತಕ್ಕಂತೆ ಅವರು ಅಪ್ಡೇಟ್ ಆಗಲೇಬೇಕು. ಜತೆಗೆ, ಅವರು ಶಿಕ್ಷಣ ನೀತಿಯಲ್ಲಿ ನಿಗದಿ ಮಾಡಿರುವ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಈ ಬಗ್ಗೆ ಯಾವುದೇ ರಾಜಿ ಇಲ್ಲ. ಇದಲ್ಲದೆ, ಶಿಕ್ಷಣ ವ್ಯವಸ್ಥೆಯ ನಿರ್ವಹಣೆ ಹಾಗೂ ಸರಕಾರಿ ವ್ಯವಸ್ಥೆಯಲ್ಲೂ ಆಮೂಲಾಗ್ರ ಸುಧಾರಣೆ ತರಲಾಗುತ್ತಿದೆ ಎಂದರು.

Education Minister's Conversation with Literature in kud
ಸಾಹಿತಿಗಳ ಜೊತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಸಂವಾದ

ಶಿಕ್ಷಣಕ್ಕೆ ರಾಜ್ಯದ ಒಟ್ಟು ದೇಶೀಯ ಉತ್ಪನ್ನದಲ್ಲಿ 6% ಮೀಸಲಿಡಬೇಕು : ಪ್ರೊ. ಪ್ರಕಾಶ್​ ಗರೂಡ

ಪ್ರೊ. ಪ್ರಕಾಶ ಗರೂಡ ಅವರು ಮಾತನಾಡಿ, ಶಿಕ್ಷಣಕ್ಕೆ ರಾಜ್ಯದ ಒಟ್ಟು ದೇಶೀಯ ಉತ್ಪನ್ನದಲ್ಲಿ 6% ಮೀಸಲಿಡಬೇಕು ಎಂದು ಶಿಕ್ಷಣ ನೀತಿ ಹೇಳುತ್ತದೆ. ಆದರೆ, ಅಷ್ಟು ಮೊತ್ತದ ಹಣಕಾಸು ಮೀಸಲಿಡಲು ಸಾಧ್ಯವೇ? ಈಗ ತುಂಬಾ ಕಡಿಮೆ ಹಣವನ್ನು ಶಿಕ್ಷಣಕ್ಕೆ ಒದಗಿಸಲಾಗುತ್ತಿದೆ ಎಂದರು.

ಈ ಪ್ರಶ್ನೆಗೆ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವರು : ಈಗಾಗಲೇ ಈ ವಿಷಯವನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಬಜೆಟ್ ಸಭೆಗಳಲ್ಲೂ ಚರ್ಚೆ ನಡೆಸಲಾಗಿದೆ. ಹೆಚ್ಚು ಅನುದಾನ ಕೇಳಲಾಗಿದೆ. ಹೊಸ ಶಿಕ್ಷಣ ನೀತಿ ಜಾರಿ ನಂತರ ಸಂಪನ್ಮೂಲದ ಅಗತ್ಯ ಹೆಚ್ಚಿರುತ್ತದೆ. ಈ ಬಗ್ಗೆ ನಾನು ಮತ್ತೊಮ್ಮೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಮಾತನಾಡುತ್ತೇನೆ ಎಂದರು.

ಸಮುದಾಯದ ಸಹಭಾಗಿತ್ವಬೇಕೆಂದ ಸಚಿವರು : ಸಾಮಾನ್ಯವಾಗಿ ಒಮ್ಮೆ ಶಿಕ್ಷಣ ನೀತಿ ಬದಲಾಗುತ್ತದೆ ಎಂದರೆ ಅದಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಂಬಲ, ಸಹಕಾರ ಬೇಕಾಗುತ್ತದೆ. ಉತ್ತಮ ಶಿಕ್ಷಣ ಎನ್ನುವುದು ವೈಯಕ್ತಿಕವಾಗಿ ಎಲ್ಲರಿಗೂ ಬೇಕು. ಅದೇ ಇಡೀ ಸಮಾಜದ ದೃಷ್ಟಿಕೋನ ಬಂದಾಗ ಅನೇಕರು ನಿಂತ ಜಾಗದಲ್ಲೇ ನಿಂತು ಬಿಡುತ್ತಾರೆ.

ಯಾಕೆಂದರೆ, ಸದ್ಯದ ಸ್ಥಿತಿಯಲ್ಲಿ ಗುಣಮಟ್ಟದ ಶಿಕ್ಷಣ ಎನ್ನುವುದು ಹಣವಂತರ ಮಕ್ಕಳಿಗೆ ಮಾತ್ರ ಸಿಗುತ್ತಿದೆ. ಬಡವರ ಮಕ್ಕಳು ಕಲಿಯುವ ಸರಕಾರಿ ಶಾಲೆಗಳಲ್ಲಿ ಸೌಲಭ್ಯಗಳಿಲ್ಲ, ಅಗತ್ಯ ಮೂಲಸೌಕರ್ಯಗಳೇ ಇಲ್ಲ ಎಂದರು.

ಶಿಕ್ಷಣದಲ್ಲಿ ಸಮಾನತೆ ತರುವ ಉದ್ದೇಶದಿಂದ ರೂಪಿತವಾದುದೇ ಶಿಕ್ಷಣ. ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಒಂದೇ ರಾಜಮಾರ್ಗ. ಇದುವರೆಗೂ ಅನೇಕರು ಶಿಕ್ಷಣ ಹಾಗಿರಬೇಕು, ಹೀಗಿರಬೇಕು ಎಂದು ಹೇಳುತ್ತಲೇ ಇದ್ದಾರೆ. ಅವರು ಹೇಳಿದ್ದೆಲ್ಲ ಈ ಶಿಕ್ಷಣ ನೀತಿಯಲ್ಲಿದೆ ಎಂದು ಸಚಿವರು ಹೇಳಿದರು. ಎಲ್ಲ ಸಾಹಿತಿಗಳು ಶಿಕ್ಷಣ ನೀತಿಯ ಬಗ್ಗೆ ಮುಕ್ತಕಂಠದ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಈ ಬಗ್ಗೆ ತಾವೂ ಸಮಾಜದಲ್ಲಿ ಮಾತನಾಡುವುದಾಗಿ ಸಚಿವರಿಗೆ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.