ಧಾರವಾಡ: ರೈತರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಇಲ್ಲಿನ ಲೋಕೋಪಯೋಗಿ ಇಲಾಖೆಯ ಕಚೇರಿಯನ್ನು ಜಪ್ತಿ ಮಾಡಲಾಯಿತು.
ಕರ್ನಾಟಕ ಕಲಾ ಮಹಾವಿದ್ಯಾಲಯದ ವೃತ್ತದಲ್ಲಿರುವ ಇಲಾಖೆ ಕಚೇರಿಯನ್ನು ಕೋರ್ಟ್ ಆದೇಶದಂತೆ ಜಪ್ತಿ ಮಾಡಲಾಗಿದೆ. ಈ ವೇಳೆ, ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರ ಎಸ್.ಬಿ. ಚೌಡಣ್ಣವರ ರೈತರು, ವಕೀಲರೊಂದಿಗೆ ಒಂದು ತಿಂಗಳು ಸಮಯಾವಕಾಶ ನೀಡುವಂತೆ ಮೊಂಡುವಾದ ಮಾಡಿದರು. ಕೋರ್ಟ್ ಸಿಬ್ಬಂದಿ ಜಪ್ತಿ ಮಾಡದಂತೆ ಕುರ್ಚಿ ಹಿಡಿದು ಅಧಿಕಾರಿ ಕುಳಿತುಕೊಂಡಿದ್ದರು. ಕೊನೆಗೂ ಅಧಿಕಾರಿ ಸಮೇತ ರೈತರು ಹಾಗೂ ಸಿಬ್ಬಂದಿ ಕುರ್ಚಿ ಎಳೆದರು.
2012 ಕೆಐಡಿಸಿಎಲ್ನಿಂದ ರಸ್ತೆಗಾಗಿ ಭೂಸ್ವಾಧೀನ ನಡೆದಿತ್ತು. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ 19 ಜನ ರೈತರ 3 ಎಕರೆ ಜಮೀನಿಗೆ ಸಂಬಂಧಿಸಿದ ಪರಿಹಾರ ನೀಡಿರಲಿಲ್ಲ. ಪರಿಹಾರ ನೀಡದ ಕಾರಣ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ಒಟ್ಟು 67 ಲಕ್ಷ ರೂ. ಪರಿಹಾರ ನೀಡುವಂತೆ 2017 ರಲ್ಲಿ ಕುಂದಗೋಳದ ಹಿರಿಯ ದಿವಾನಿ ನ್ಯಾಯಾಲಯ ಆದೇಶ ಮಾಡಿತ್ತು.
ಆದರೂ ಪರಿಹಾರ ನೀಡದೆ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಕಚೇರಿ ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶ ಮಾಡಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆ ಸಿಬ್ಬಂದಿ ಜಪ್ತಿ ಮಾಡಿದರು.
ಓದಿ: ಎರಡು ದಿನಗಳ ದೆಹಲಿ ಪ್ರವಾಸ ಮುಗಿಸಿ ಇಂದು ರಾತ್ರಿ ಬೆಂಗಳೂರಿಗೆ ಸಿಎಂ ವಾಪಸ್