ETV Bharat / state

ಕಾಂಗ್ರೆಸ್​ನವರು ಐಸಿಯುನಿಂದ ಹೊರಗೆ ಬರಬೇಕು: ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಟಾಂಗ್

author img

By

Published : Jan 20, 2023, 3:55 PM IST

ಮಾಜಿ ಸಿಎಂ ಜಗದೀಶ್​ ಶೆಟ್ಟರ್
ಮಾಜಿ ಸಿಎಂ ಜಗದೀಶ್​ ಶೆಟ್ಟರ್

ಬಿಜೆಪಿ ಮುಸ್ಲಿಂ ವಿರೋಧಿ ಎಂದು ಯಾವತ್ತೂ ಬಿಂಬಿಸಿಕೊಂಡಿಲ್ಲ. ಆರ್​ಎಸ್ಎಸ್ ಹಿಂದೂಗಳ ಸಂಘಟನೆ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಅವರು ಮಾತನಾಡಿದರು

ಹುಬ್ಬಳ್ಳಿ : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ನೋಡಿದರೆ ಒಂದು ಸಣ್ಣ ಹುಡುಗ ಕೂಡಾ ಭಯ ಪಡುವುದಿಲ್ಲ. ಅದರಲ್ಲಿ ವಿಶ್ವದ ನಂಬರ್ ಒನ್ ನಾಯಕ ನರೇಂದ್ರ ಮೋದಿ ಅವರು ಭಯ ಪಡುತ್ತಾರೆಂದರೆ ಇದು ಈ ವರ್ಷದ ಜೋಕ್ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ನೋಡಿದ್ರೆ ನರೇಂದ್ರ ಮೋದಿ ಹಾಗೂ ಆರ್.ಎಸ್.ಎಸ್ ಅವರಿಗೆ ಭಯ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನರೇಂದ್ರ ಮೋದಿ ಅವರು ಯಾಕೆ ಭಯಪಡಬೇಕು. ಇದೀಗ ಜಗತ್ತು ಮೋದಿ ಅವರನ್ನು ಮೆಚ್ಚುತ್ತಿದೆ. ಅವರೊಬ್ಬ ಜಗತ್ತಿನ ನಂಬರ್ ಒನ್ ನಾಯಕ. ಹೀಗಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಈ ರೀತಿಯ ಹೇಳಿಕೆ ಕೊಡುವ ಮ‌ೂಲಕ ಅವರ ವ್ಯಕ್ತಿತ್ವ ಬೆಳವಣಿಗೆ ಆಗೋದಿಲ್ಲ, ರಾಜಕೀಯವಾಗಿಯೂ ಬೆಳೆಯುವುದಿಲ್ಲ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಬಿಜೆಪಿ ಅವರ ಭ್ರಷ್ಟಚಾರದ ಬಗ್ಗೆ ಮಾತನಾಡುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಸೆಂಬ್ಲಿಯಲ್ಲಿ ಈವರೆಗೆ ಯಾವುದಾದರೂ ಒಂದು ಪ್ರಕರಣವನ್ನು ತಾರ್ಕಿಕ ಅಂತ್ಯ ಮುಟ್ಟಿಸಿದ್ದಾರೆಯೇ?. ಮೊನ್ನೆ ಬೆಳಗಾವಿಯ ಅದಿವೇಶನದಲ್ಲಿ ಹಾಗೂ ಬೆಂಗಳೂರಿನ ಅದಿವೇಶನದಲ್ಲಿಯಾಗಲಿ ಒಂದಾದರೂ ಪ್ರಕರಣದ ತಾರ್ಕಿಕ ಅಂತ್ಯ ಮುಟ್ಟಿಸಿದ್ದಾರೆಯೇ? ಎಂದು ಪ್ರಶ್ನಿಸಿದರು.

ಆರ್​ಎಸ್​ಎಸ್​ನವರ ವ್ಯಕ್ತಿತ್ವ ಏನೂ ಕಡಿಮೆಯಾಗುವುದಿಲ್ಲ: ಸಿದ್ದರಾಮಯ್ಯ ಆರ್​ಎಸ್​ಎಸ್​ ಬಗ್ಗೆ ಮಾತನಾಡಲಿ, ಯಾರು ಬೇಡ ಅಂತಾರೆ. ಜನ ಅದಕ್ಕೆ ಉತ್ತರ ಕೊಡುತ್ತಾರೆ. ಆರ್​ಎಸ್​ಎಸ್ ಒಂದು ದೇಶಭಕ್ತಿ ಸಂಘಟನೆ. ಜನ ಹಾಗೂ ದೇಶವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತದೆ. ಅಂತಹ ಸಂಘಟನೆಯ ಬಗ್ಗೆ ನೀವು ಮಾತನಾಡುತ್ತೀರಿ ಅಂದರೆ ನಿಮ್ಮ ಗೌರವ ಕಡಿಮೆಯಾಗುತ್ತದೆ ಅಷ್ಟೇ. ನಿಮ್ಮ ವ್ಯಕ್ತಿತ್ವ ಕಡಿಮೆಯಾಗುತ್ತದೆಯೇ ಹೊರತು ಆರ್​ಎಸ್​ಎಸ್​ನವರ ವ್ಯಕ್ತಿತ್ವ ಏನೂ ಕಡಿಮೆಯಾಗುವುದಿಲ್ಲ ಎಂದರು.

ಜನರ ಮೈಂಡ್​ನ್ನು ಡೈವರ್ಟ್​ ಮಾಡುವ ಸಲುವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ: ಎಲೆಕ್ಷನ್ ಸಮಯವಾಗಿರುವುದರಿಂದ ಬೆಳಗಿನಿಂದ ಸಂಜೆಯವರೆಗೆ ಆಪಾದನೆ ಮಾಡುವುದು ನಡೆಯುತ್ತಾ ಇದೆ. ಅಭಿವೃದ್ಧಿ ಕೆಲಸ ಮತ್ತೊಂದು ಇವತ್ತು ಎಲ್ಲಾ ಕಡೆ ನಡೆದಿವೆ. ಈ ರೀತಿಯ ಅಭಿವೃದ್ಧಿ ಕೆಲಸಗಳು ನಡೆದಾಗ ಕಾಂಗ್ರೆಸ್​ನವರು ಜನರ ಮೈಂಡ್ ಅ​ನ್ನು ಡೈವರ್ಟ್​ ಮಾಡುವ ಸಲುವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ.

ಕಾಂಗ್ರೆಸ್​ನವರು ಐಸಿಯುನಲ್ಲಿದ್ದಾರೆ. ಹೀಗಾಗಿ, ಜೀವ ಉಳಿಸಿಕೊಳ್ಳಲು ಏನೆನೋ ಒಂದಷ್ಟು ಆರೋಪಗಳನ್ನು ಮಾಡುತ್ತಿದ್ದಾರೆ. ಅದು ಯಾವುದೂ ಪ್ರಯೋಜನವಾಗುತ್ತಿಲ್ಲ. ಜನರೂ ಕೂಡಾ ಲೈಕ್ ಮಾಡುತ್ತಿಲ್ಲ. ಹೀಗಾಗಿ ಕಾಂಗ್ರೆಸ್​ನವರು ಬಹಳ ಕೀಳುಮಟ್ಟದ ಪ್ರಚಾರಕ್ಕೆ ಹೊರಟಿದ್ದಾರೆ. ಐಸಿಯುನಲ್ಲಿದ್ದಾಗ ಒದ್ದಾಟಕ್ಕೆ ಇಳಿದಿದ್ದರು. ಈಗ ಕೀಳುಮಟ್ಟದ ಪ್ರಚಾರಕ್ಕೆ ತೊಡಗಿದಾಗ ಒಂದಷ್ಟು ಜೀವ ಬರಲಿದೆ ಎಂದು ತಿಳಿದುಕೊಂಡಿದ್ದಾರೆ. ಆ ಜೀವವೂ ಹೋಗಲಿದೆ ಎಂದರು.

ಕಾಂಗ್ರೆಸ್ ಮುಸ್ಲಿಂ ಸಮುದಾಯವನ್ನು ತನ್ನ ಮತಬ್ಯಾಂಕ್ ಆಗಿ ಬಳಕೆ ಮಾಡಿಕೊಂಡು ಬರುತ್ತಿದೆ: ಬಿಜೆಪಿ ಮುಸ್ಲಿಂ ವಿರೋಧಿ ಎಂದು ಯಾವತ್ತೂ ಬಿಂಬಿಸಿಕೊಂಡಿಲ್ಲ. ಆರ್ ಎಸ್ ಎಸ್ ಹಿಂದೂಗಳ ಸಂಘಟನೆ ಮಾಡುತ್ತದೆ. ಬಿಜೆಪಿ ನಿಜವಾದ ಸೆಕ್ಯೂಲರ್ ಬಗ್ಗೆ ಹೇಳುತ್ತದೆ. ಆದರೆ, ಕಾಂಗ್ರೆಸ್ ಮುಸ್ಲಿಂ ಸಮುದಾಯವನ್ನು ತನ್ನ ಮತಬ್ಯಾಂಕ್ ಆಗಿ ಬಳಕೆ ಮಾಡಿಕೊಂಡು ಬರುತ್ತಿದೆ. ಮುಸ್ಲಿಂ ಸಮುದಾಯದ ಜನರು ಭಾರತ ದೇಶದ ನಾಗರಿಕರಾಗಿ ಬದುಕಬೇಕು. ಎಲ್ಲರೂ ಸಹೋದರತ್ವದಿಂದ ಬಾಳಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಮೋದಿ ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ ಎಂದಿದ್ದಾರೆ: ಬಿಜೆಪಿ ಯಾವತ್ತೂ ಮುಸ್ಲಿಮರನ್ನು ದೇಶದಿಂದ ಹೊರ ಹಾಕಬೇಕು, ವಿರೋಧ ಮಾಡಬೇಕು ಎಂದು ಹೇಳಿಲ್ಲ. ಆ ರೀತಿಯ ಬಿಂಬನೆ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ ಎಂದು ಹೇಳಿದರು.

ಓದಿ : ರಾಷ್ಟ್ರೀಯ ಯುವ ಜನೋತ್ಸವ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ : ಮಾಜಿ ಸಿಎಂ ಶೆಟ್ಟರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.