ಹುಬ್ಬಳ್ಳಿ: ಸಿನಿಮಾ ನಟರಿಂದಲೇ ಕೊರೊನಾ ಬರುತ್ತಿದೆ ಎಂಬಂತೆ ಸರ್ಕಾರ ಕಾನೂನು ಜಾರಿ ಮಾಡುತ್ತಿರುವುದು ಸರಿಯಲ್ಲ ಎಂದು ನಟ ದುನಿಯಾ ವಿಜಯ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸಲಗ ಚಿತ್ರತಂಡದಿಂದ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿನಿಮಾ ಥಿಯೇಟರ್ಗಳಿಗೆ ಸಂಬಂಧಿಸಿದಂತೆ ಸರ್ಕಾರದ ಕೋವಿಡ್ ನಿಯಮಗಳ ಬಗ್ಗೆ ಮಾತನಾಡಿದರು. ಕೋವಿಡ್ ನಿಯಮಗಳು ನಮಗೆ ಸಮಾಧಾನ ತಂದಿಲ್ಲ. ಸಿನಿಮಾ ಮಂದಿರಗಳಿಗೆ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ. ಸರ್ಕಾರದ ಮುಂದಿನ ನಿರ್ಧಾರ ನೋಡಿಕೊಂಡು ಸಿನಿಮಾ ರಿಲೀಸ್ ಮಾಡುತ್ತೇವೆ. ಸರ್ಕಾರದ ನಿರ್ಧಾರಕ್ಕೆ ನಮ್ಮ ಒಪ್ಪಿಗೆ ಇಲ್ಲ. ಜಿಮ್ ಮತ್ತು ಸಿನಿಮಾ ಥಿಯೇಟರ್ನಲ್ಲಿ ಮಾತ್ರ ಕೋವಿಡ್ ಬರುತ್ತಾ, ರಾಜಕೀಯ ಸಮಾವೇಶಗಳಲ್ಲಿ ಕೊರೊನಾ ಬರುವುದಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಬಳಿಕ ಮಾತನಾಡಿದ ನಟ ಡಾಲಿ ಧನಂಜಯ್, ಸರ್ಕಾರ ಕಾನೂನು ಮಾಡುವಾಗ ಕೆಳ ಮಟ್ಟದ ಕಾರ್ಮಿಕರನ್ನು ಗಮನದಲ್ಲಿ ಇಟ್ಟುಕೊಂಡು ನಿಯಮ ಜಾರಿಗೊಳಿಸಬೇಕು. ಅಂದಾಗ ಅದು ಪರಿಣಾಮಕಾರಿಯಾಗುತ್ತದೆ. ಸರ್ಕಾರ ಚಿತ್ರಮಂದಿರಗಳಲ್ಲಿ ಸೀಟಿಗೆ ಕಡಿವಾಣ ಹಾಕುವುದು ಸರಿಯಲ್ಲ. ಯುವರತ್ನ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.