ETV Bharat / state

ದಾವಣಗೆರೆ: ಗರಡಿ ಮನೆಯಲ್ಲೇ ಅಪ್ರಾಪ್ತ ಕುಸ್ತಿಪಟು ಆತ್ಮಹತ್ಯೆ.. ಕಾರಣ ನಿಗೂಢ

author img

By ETV Bharat Karnataka Team

Published : Oct 17, 2023, 11:22 AM IST

wrestler-committed-suicide-in-davanagere
ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಕುಸ್ತಿಪಟು : ಕಾರಣ ನಿಗೂಢ

ಕುಸ್ತಿಪಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ನಡೆದಿದೆ.

ದಾವಣಗೆರೆ : ಅಪ್ರಾಪ್ತ ವಯಸ್ಸಿನ ಕುಸ್ತಿಪಟುವೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹರಿಹರ ಪಟ್ಟಣದ ಶಿಬಾರ ಸರ್ಕಲ್​ ಬಳಿ ಇರುವ ಗರಡಿ ಮನೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಕಾವ್ಯಾ ಪೂಜಾರ್ (13) ಆತ್ಮಹತ್ಯೆಗೆ ಶರಣಾದ ಬಾಲಕಿ.

ಕುಸ್ತಿಯಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದ ಕಾವ್ಯಾ ಧಾರವಾಡ ಕುಸ್ತಿ ಹಾಸ್ಟೆಲ್​ನಲ್ಲಿ ಸೇರಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಬಾಲಕಿಯು ಇಲ್ಲೇ ಇದ್ದು ಕುಸ್ತಿ ತರಬೇತಿಯನ್ನು ಪಡೆಯುತ್ತಿದ್ದಳು. ಎರಡು ದಿನಗಳ ಹಿಂದೆ ಧಾರವಾಡದಿಂದ ಬಾಲಕಿ ಕಾವ್ಯಾ ದಾವಣಗೆರೆ ಜಿಲ್ಲೆಯ ಹರಿಹರಕ್ಕೆ ಬಂದಿದ್ದಳು.

ಇಂದು ಬೆಳಗ್ಗೆ ಗರಡಿ ಮನೆಯಲ್ಲಿ ತರಬೇತಿಗೆ ಹೋದ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ‌ ಎಂದು ತಿಳಿದುಬಂದಿದೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ‌ ಅನ್ನೋದು ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಹರಿಹರ ನಗರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.

ಇತ್ತೀಚಿನ ಘಟನೆಗಳು- ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ : 9ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ಖಾಸಗಿ ಅಪಾರ್ಟ್ಮೆಂಟ್​ನಲ್ಲಿ ಇತ್ತೀಚೆಗೆ ನಡೆದಿತ್ತು. ವಿಜಯಲಕ್ಷ್ಮೀ (17) ಆತ್ಮಹತ್ಯೆಗೆ ಶರಣಾಗಿದ್ದ ವಿದ್ಯಾರ್ಥಿನಿ.

ಖಾಸಗಿ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಓದುತಿದ್ದ ವಿಜಯಲಕ್ಷ್ಮಿ, ಪೋಷಕರ ವಿಚ್ಛೇದನ ಬಳಿಕ ತನ್ನ ತಾಯಿಯೊಂದಿಗೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಜ್ಞಾನಜ್ಯೋತಿ ನಗರದಲ್ಲಿ ವಾಸವಿದ್ದಳು. ಕಳೆದ ಕೆಲವು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಬಳಿಕ ಸೆ.19ರಂದು ಕಾಲೇಜಿಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದ ವಿಜಯಲಕ್ಷ್ಮಿ ಬಳಿಕ ಮನೆಗೆ ವಾಪಸ್​ ಆಗಿರಲಿಲ್ಲ. ಸ್ನೇಹಿತರ ಜತೆಗೆ ಹೋಗಿರಬಹುದು ಎಂದು ಭಾವಿಸಿದ್ದ ತಾಯಿ, ಒಂದು ದಿನ ಕಳೆದ ಬಳಿಕ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದರು. ಜ್ಞಾನಭಾರತಿ ಠಾಣೆಗೆ ತೆರಳಿ ದೂರು ನೀಡಲು ಹೋದಾಗ ಮಗಳ ಸಾವಿನ ಸುದ್ದಿ ಗೊತ್ತಾಗಿದೆ.

ವಿಜಯಲಕ್ಷ್ಮಿ ಸಾಯುವ ಮುನ್ನ ಮಂಗಳೂರಿಗೆ ಹೋಗಿ ಬಂದಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿರಲಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರಾಮನಗರದಲ್ಲಿ ವ್ಯಕ್ತಿ ಆತ್ಮಹತ್ಯೆ: ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದಲ್ಲಿ ಕಳೆದ ಸೆಪ್ಟೆಂಬರ್​ ತಿಂಗಳಲ್ಲಿ ನಡೆದಿತ್ತು. ಮೃತ ವ್ಯಕ್ತಿಯನ್ನು ರವಿಚಂದ್ರ (35) ಎಂದು ಗುರುತಿಸಲಾಗಿತ್ತು. ಈತ ರಸ್ತೆ ಬದಿಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ. ಇತ್ತೀಚೆಗೆ ವ್ಯಾಪಾರದ ವಿಚಾರವಾಗಿ ಬಾಡಿಗೆ ಅಂಗಡಿಯವರಿಗೂ ಹಾಗೂ ರವಿಚಂದ್ರ ನಡುವೆ ಗಲಾಟೆಯಾಗಿತ್ತು. ಇದರಿಂದ ಮನನೊಂದು ರವಿಚಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.

ಇದನ್ನೂ ಓದಿ : ಪ್ರಿಯಕರನೊಂದಿಗೆ ಸೇರಿ ಅತ್ತೆಯ ಹತ್ಯೆ : ಸೊಸೆ ಸಹಿತ ಮೂವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.