ETV Bharat / state

ದಾವಣಗೆರೆ: ₹7 ಲಕ್ಷ ಮೌಲ್ಯದ ಅಡುಗೆ ಸಲಕರಣೆ ವಶಕ್ಕೆ

author img

By

Published : Mar 29, 2023, 9:33 AM IST

Kitchen equipment seized in Davanagere
ವಶಕ್ಕೆ ಪಡೆಯಲಾದ ಅಡುಗೆ ಸಲಕರಣೆ

ದಾವಣಗೆರೆ ಜಿಲ್ಲೆಯ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತದಾರರಿಗೆ ಹಂಚಲು ತಂದಿದ್ದರು ಎನ್ನಲಾದ 7.19 ಲಕ್ಷ ರೂ. ಮೌಲ್ಯದ ಅಡುಗೆ ಸಲಕರಣೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ದಾವಣಗೆರೆ: ನಗರದ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ತಂದಿದ್ದರು ಎಂದು ಹೇಳಲಾದ 7.19 ಲಕ್ಷ ರೂಪಾಯಿ ಮೌಲ್ಯದ ಅಡುಗೆ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ. ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ . ಸಲಕರಣೆಗಳ ಮೇಲೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಫೋಟೋಗಳನ್ನು ಅಂಟಿಸಲಾಗಿದೆ.

ಕಳೆದ ರಾತ್ರಿ ಬೊಲೆರೋ ವಾಹನದಲ್ಲಿ ಕುಕ್ಕರ್ ಸೇರಿದಂತೆ‌ ವಿವಿಧ ಅಡುಗೆ ವಸ್ತುಗಳನ್ನು ಹಂಚಿಕೆ ಮಾಡಲಾಗುತ್ತಿತ್ತು. ದಾವಣಗೆರೆ ಭಗತ್ ಸಿಂಗ್ ನಗರದ ವಿವಿಧ ಕಡೆ ಹಂಚುವಾಗ ಕೆಟಿಜೆ ನಗರ ಠಾಣೆಯ ಪೊಲೀಸರು ದಾಳಿ ಮಾಡಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕಾಡಜ್ಜಿ ಹನಮಂತಪ್ಪ ಎಂಬುವರ ವಿರುದ್ಧ ದೂರು ದಾಖಲಾಗಿದೆ.

ಕುಕ್ಕರ್​ಗಳು ವಶಕ್ಕೆ: ಈ ಹಿಂದೆ ದಾವಣಗೆರೆ ಉತ್ತರ ಮತಕ್ಷೇತ್ರದಲ್ಲಿ ಮತದಾರರಿಗೆ ಕುಕ್ಕರ್​​ಗಳನ್ನು ಹಂಚಿಕೆ ಮಾಡಲಾಗುತ್ತಿತ್ತು. ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ಬಿಜೆಪಿಯ ಮುಖಂಡ ಯಶವಂತ ರಾವ್​ ಜಾಧವ್ ಪೊಲೀಸರಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಇಡೀ ಗೋದಮನ್ನು ಸೀಜ್ ಮಾಡಲಾಗಿತ್ತು.‌ ಆ ಕುಕ್ಕರ್ ಬಾಕ್ಸ್ ಮೇಲೂ ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ ರವರ ಫೋಟೋ ಇರುವುದು ಕಂಡು ಬಂದಿತ್ತು. ಇದೀಗ ಅಡುಗೆ ಸಲಕರಣೆಗಳನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇಸ್ತ್ರಿ ಪೆಟ್ಟಿಗೆ ಜಪ್ತಿ: ಲಕ್ಷಾಂತರ ಮೌಲ್ಯದ ಇಸ್ತ್ರಿ ಪೆಟ್ಟಿಗೆಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹನವನ್ನು ಬಾಗಲಕೋಟೆ ಎಸ್.ಪಿ ಜಯಪ್ರಕಾಶ್ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದೆ. ಮಾ. 26ರಂದು ನಗರದ ಹೊರವಲಯದ ಮಹಾರುದ್ರಪ್ಪನ ಹಳ್ಳದ ಬಳಿ ಜಿಲ್ಲೆಯ ಪ್ರತಿಷ್ಠಿತ ರಾಜಕೀಯ ನಾಯಕರಿಗೆ ಸೇರಿದ ಇಸ್ತ್ರಿ ಪೆಟ್ಟಿಗೆಗಳು ಇರಬಹುದೆಂಬ ಶಂಕೆ ಬಂದ ಹಿನ್ನೆಲೆಯಲ್ಲಿ ಕ್ಯಾಂಟರ್ ವಾಹನ ಮೇಲೆ ಬಾಗಲಕೋಟೆ ನಗರದ ಪೊಲೀಸರು ದಾಳಿ ಮಾಡಿದ್ದು, 6798 ಇಸ್ತ್ರಿ ಪೆಟ್ಟಿಗೆಗಳನ್ನು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಚುನಾವಣೆ ಆಮಿಷ.. ಅಕ್ರಮವಾಗಿ ಸಾಗಿಸುತ್ತಿದ್ದ 60 ಲಕ್ಷ ಮೌಲ್ಯದ ಇಸ್ತ್ರಿ ಪೆಟ್ಟಿಗೆಗಳು ಜಪ್ತಿ

9 ಲಕ್ಷ ಹಣ ವಶಕ್ಕೆ: ಸೂಕ್ತ ದಾಖಲೆ‌ ಇಲ್ಲದೇ ಸಾಗಾಟ ಮಾಡುತ್ತಿದ್ದ 9 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮಾ.25 ರಂದು ಆಲಮೇಲ ತಾಲೂಕಿನ ದೇವಣಗಾಂವ್ ಚೆಕ್​ಪೋಸ್ಟ್ ಬಳಿ ನಡೆದಿದೆ. ಚೆಕ್​ಪೋಸ್ಟ್​ಗಳಲ್ಲಿ ಪೊಲೀಸರು ವಾಹನಗಳ ತಪಾಸಣೆ ಕೈಗೊಂಡ ವೇಳೆ ಕೇರಳ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಸಮೀರ್ ಅಲಿ ವಲಕ್ಕಿನ್ ಎಂಬಾತ‌ ಬಳಿ ಒಟ್ಟು 9 ಲಕ್ಷ ರೂಪಾಯಿ ಹಣ ದೊರೆತಿದೆ. ಈ ಹಣವನ್ನು ಕೇರಳದಿಂದ ಅಫ್ಜಲಪುರಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಹಣ ಮತ್ತು ಕಾರನ್ನು ಸೀಜ್​ ಮಾಡಿದ್ದು, ಆಲಮೇಲ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.‌

ಇದನ್ನೂ ಓದಿ: ವಿಜಯಪುರ : ದೇವಣಗಾಂವ್ ಚೆಕ್​ಪೋಸ್ಟ್ ಬಳಿ ದಾಖಲೆ ಇಲ್ಲದ 9 ಲಕ್ಷ ಹಣದ ಜೊತೆ ಸೀರೆ, ಬಟ್ಟೆ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.