ಹರಿಹರ : ಎಲೆಬಳ್ಳಿಯ ಬೇರಿನ ಕೊಳೆ ರೋಗ ಅಥವಾ ಸೊರಗು ರೋಗ ಹತೋಟಿ ಮಾಡಲು ರೈತರು ಸಮಗ್ರ ರೋಗ ನಿರ್ವಹಣೆಯ ಬಗ್ಗೆ ತೋಟಗಾರಿಕೆ ಇಲಾಖೆ ನೀಡುವ ಸಲಹೆಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಜಿ.ಪಿ ರೇಖಾ ಹೇಳಿದ್ದಾರೆ.
ತಾಲೂಕಿನ ಹನಗವಾಡಿ ಗ್ರಾಮದಲ್ಲಿನ ಎಲೆಬಳ್ಳಿ ರೋಗಗಳಿಗೆ ತುತ್ತಾಗಿರುವ ಜಮೀನುಗಳಿಗೆ ಭೇಟಿ ನೀಡಿ, ರೈತರಿಗೆ ಬೆಳೆಗಳ ಬಗ್ಗೆ ಅರಿವು ಮೂಡಿಸಿದ ಅವರು, ಎಲೆಬಳ್ಳಿ ತೋಟಗಳಿಗೆ ಬೇರು ಕೊಳೆರೋಗ ಅಥವಾ ಸೊರಗು ರೋಗ ಕಂಡುಬಂದಿದ್ದು, ತೋಟಗಾರಿಕೆ ಇಲಾಖೆಯಿಂದ ನಮ್ಮ ತಂಡ ಎಲೆಬಳ್ಳಿ ತೋಟಗಳಿಗೆ ಭೇಟಿ ನೀಡಿ ರೈತರಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮಾಹಿತಿ ನೀಡಲಾಗುತ್ತಿದೆ ಎಂದರು.
ರೋಗ ಪೀಡಿತ ಎಲೆಬಳ್ಳಿಗಳ ಎಲೆಗಳು ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗುವುದು ಮತ್ತು ಒಂದೆರಡು ವಾರದಲ್ಲಿ ಕ್ರಮೇಣವಾಗಿ ಎಲೆಬಳ್ಳಿಗಳು ಸಂಪೂರ್ಣ ಒಣಗುತ್ತದೆ. ಅಂತಹ ಗಿಡದ ಬೇರುಗಳನ್ನು ಅಗೆದು ನೋಡಿದರೆ ಕಾಂಡವು ಕಂದು ಬಣ್ಣಕ್ಕೆ ತಿರುಗಿರುವುದು ಮತ್ತು ಕೊಳೆತಿರುವುದನ್ನು ಗಮನಿಸಲಾಯಿತು. ನೆಲದ ಮೇಲ್ಮಟ್ಟದಲ್ಲಿ ಕಾಂಡವು ಸತ್ತುಹೋಗಿರುವುದು ಮತ್ತು ದಾರದಂತೆ ಬಿಡಿ-ಬಿಡಿಯಾಗಿ ನಶಿಸಿರುವುದನ್ನು ಗಮನಿಸಿ, ಔಷಧ ಸಿಂಪಡಿಸುವಂತೆ ತಿಳಿಸಿದರು.
ಕೊಳೆ ರೋಗದ ಹತೋಟಿ ಕ್ರಮಗಳು:
ರೋಗಗ್ರಸ್ಥ ಬಳ್ಳಿಗಳನ್ನು ತೋಟದಿಂದ ತೆಗೆದು ಹಾಕಿ ಸುಟ್ಟು ಹಾಕುವುದು. ಬಳ್ಳಿಗಳನ್ನು ತೆಗೆದ ಜಾಗಕ್ಕೆ ಶೇ.1ರ ಬೋರ್ಡೊ ದ್ರಾವಣ ಅಥವಾ ತಾಮ್ರದ ಆಕ್ಸಿಕ್ಲೋರೈಡ್ ದ್ರಾವಣವನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ. ನಂತೆ ಬೆರೆಸಿ 1 ರಿಂದ 2 ಲೀಟರ್ ದ್ರಾವಣವನ್ನು ಸುರಿಯಬೇಕು. ರೋಗ ರಹಿತ ಬಳ್ಳಿಗಳನ್ನು ಉಪಯೋಗಿಸಬೇಕು ಎಂದು ಸಲಹೆ ನೀಡಿದ್ದಾರೆ.