ETV Bharat / state

ದಾವಣಗೆರೆಯಲ್ಲಿ ಭೀಕರ ಅಪಘಾತ; ಹಿಟ್​ ಅಂಡ್​​ ರನ್​ಗೆ ಮೂವರು ಯುವಕರು ಬಲಿ

author img

By

Published : Feb 11, 2023, 10:44 AM IST

Updated : Feb 11, 2023, 4:13 PM IST

davanagere
ದಾವಣಗೆರೆಯಲ್ಲಿ ಹಿಟ್​ ಅಂಡ್​​ ರನ್

ದಾವಣಗೆರೆಯಲ್ಲಿ ಹಿಟ್​ ಅಂಡ್​​ ರನ್​ ಪ್ರಕರಣ- ಬೈಕ್​ನಲ್ಲಿ ತೆರಳುತ್ತಿದ್ದ ಮೂವರು ಯುವಕರು ಸಾವು- ದಾವಣಗೆರೆ ಗ್ರಾಮಾಂತರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ

ದಾವಣಗೆರೆಯಲ್ಲಿ ಭೀಕರ ಅಪಘಾತ; ಹಿಟ್​ ಅಂಡ್​​ ರನ್​ಗೆ ಮೂವರು ಯುವಕರು ಬಲಿ

ದಾವಣಗೆರೆ: ರಾಜ್ಯದಲ್ಲಿ ಹಿಟ್​ ಅಂಡ್​ ರನ್​ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ದಾವಣಗೆರೆಯಲ್ಲೂ ಇಂತಹದ್ದೇ ಭೀಕರ ಅಪಘಾತವೊಂದು ಸಂಭವಿಸಿದ್ದು, ಅಪರಿಚಿತ ವಾಹನವೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಆನಗೋಡ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶುಕ್ರವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ.

ದಾವಣಗೆರೆ ನಗರದ ರಾಮನಗರ ನಿವಾಸಿಗಳಾದ ಪರಶುರಾಮ್ (24), ಸಂದೇಶ (23) ಹಾಗೂ ಶಿವು (26) ಮೃತಪಟ್ಟ ಯುವಕರು. ಜಿಲ್ಲೆಯ ಕಾಟಿಹಳ್ಳಿ ಗ್ರಾಮದಲ್ಲಿ ದೇವಿ ಕಾರ್ಯಕ್ಕೆ ತೆರಳಿ ಊಟ ಮುಗಿಸಿಕೊಂಡು ಬೈಕ್​ನಲ್ಲಿ ರಾಮನಗರಕ್ಕೆ ವಾಪಸ್​ ಆಗುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಪರಿಣಾಮ ಒಂದೇ ಬೈಕ್​ನಲ್ಲಿದ್ದ ತೆರಳುತ್ತಿದ್ದ ಮೂರು ಜನ ಯುವಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎದೆ ಎತ್ತರಕ್ಕೆ ಬೆಳೆದಿದ್ದ ಮಕ್ಕಳನ್ನು ಅಪಘಾತದಲ್ಲಿ ಕಳೆದುಕೊಂಡ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಕ್ಕಳು ಮನೆಗೆ ಬರುವಿಕೆಗಾಗಿ ಕಾಯುತ್ತಿದ್ದ ಹೆತ್ತವರಿಗೆ ಸಾವಿನ ಸುದ್ದಿ ಸಿಡಿಲು ಬಡಿದಂತಾಗಿದೆ.‌ ಕೂಲಿ ಕೆಲಸ ಮಾಡುತ್ತ ಬದುಕು ಕಟ್ಟಿಕೊಂಡಿದ್ದ ಯುವಕರು ದುರಂತ ಸಾವು ಕಂಡಿದ್ದಾರೆ. ದೇವಿ ಕಾರ್ಯಕ್ಕೆ ಒಟ್ಟಿಗೆ ಐವರು ಯುವಕರು ತೆರಳಿದ್ದರು ಎನ್ನಲಾಗಿದೆ. ಆದರೆ, ಘಟನೆ ಬಳಿಕ ಮತ್ತೊಂದು ಬೈಕ್​ನಲ್ಲಿದ್ದ ಇಬ್ಬರು ಯುವಕರು ನಾಪತ್ತೆಯಾಗಿರುವುದು ಎನ್ನಲಾಗಿದ್ದು, ಅನುಮಾನ ಮೂಡಿಸಿದೆ.

ಮೃತ ಮಗ ಸಂದೇಶ್​​ ನೋಡಲು ಶವಗಾರಕ್ಕೆ ಬಂದ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ತಾಯಿಯು ಮೃತ ಮಗನ ಹಣೆಗೆ ಮುತ್ತಿಟ್ಟ ದೃಶ್ಯ ಸ್ಥಳದಲ್ಲಿದ್ದ ಜನರ ಕಣ್ಣಲ್ಲಿ ನೀರೂರುವಂತೆ ಮಾಡಿತು. ಮೃತರೆಲ್ಲರೂ ಸಹ ಅವರ ಪೋಷಕರಿಗೆ ಒಬ್ಬೊಬ್ಬರೇ ಮಕ್ಕಳಾಗಿದ್ದರು. ಇದೇ ವೇಳೆ, ಪ್ರತಿಕ್ರಿಯಿಸಿದ ಮೃತ ಶಿವು ಸಹೋದರಿ ರಾತ್ರಿ ಎರಡು ಗಂಟೆಗೆ ದೂರವಾಣಿ ಕರೆ ಬಂದಿತ್ತು. ಸಹೋದರ ಅಪಘಾತದಲ್ಲಿ ಸಾವನಪ್ಪಿದ್ದಾನೆ ಎಂದರು. ನಮ್ಮ ತಂದೆ ಕೂಲಿ ಕೆಲಸ ಮಾಡುತ್ತಾರೆ. ಮೃತರೆಲ್ಲರೂ ಸ್ನೇಹಿತರಾಗಿದ್ದು, ಐವರು ಸೇರಿಕೊಂಡು ದೇವಿ ಕಾರ್ಯಕ್ಕೆ ಹೋಗಿದ್ದರಂತೆ ಎಂದು ಹೇಳಿದರು. ಘಟನಾ ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತವು ತಡರಾತ್ರಿ ಸಂಭವಿಸಿದ ಕಾರಣ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕಲಬುರಗಿ: ವಿವಿಧ ಅಪರಾಧ ಪ್ರಕರಣದಲ್ಲಿ ಮೂವರ ಸಾವು; ಕೊಲೆ ಆರೋಪಿಗೆ ಜೀವವಾಧಿ ಶಿಕ್ಷೆ

ಬೆಂಗಳೂರಿನಲ್ಲಿ ಹಿಟ್​ ಅಂಡ್​ ರನ್​ ಅಪಘಾತ: ಬೆಂಗಳೂರಿನಲ್ಲಿ ಮತ್ತೊಂದು ಹಿಟ್​ ಅಂಡ್​ ರನ್ ಪ್ರಕರಣವು ಫೆಬ್ರವರಿ 6ರಂದು ನಡೆದಿತ್ತು. ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್​ ಕೋರ್ಟ್​ ಮುಂದೆ ಚಲಿಸುತ್ತಿದ್ದ ಬೈಕ್​ಗೆ ವೇಗವಾಗಿ ಬಂದ ಕಾರೊಂದು ಗುದ್ದಿ ಪರಾರಿಯಾಗಿತ್ತು. ಅಪಘಾತದಲ್ಲಿ ಬೈಕ್​ ಸವಾರ ಮಜಿದ್‌ ಖಾನ್ (39) ಎಂಬವರ ತಲೆ ಮೇಲೆ ಕಾರು ಹರಿದ ಪರಿಣಾಮ ಆತ ಸಾವನ್ನಪ್ಪಿದ್ದು, ಮತ್ತೋರ್ವ ರಿಯಾಜ್​ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು.

ಎಚ್​ ಎಸ್​ ಆರ್​ ಲೇಜೌಟ್ ನಿವಾಸಿಯಾಗಿದ್ದ ಮಜೀದ್​ ಮೊಬೈಲ್​ ಅಂಗಡಿ ಇಟ್ಟುಕೊಂಡಿದ್ದರು. ಮಧ್ಯಾಹ್ನ ಮನೆಗೆ ಹೋಗಲು ಬೈಕ್​ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಕಾರು ಗುದ್ದಿತ್ತು. ಈ ಸಂಬಂಧ ಹಿಟ್​ ಅಂಡ್​ ರನ್​ ಮಾಡಿ ಪರಾರಿಯಾಗಿದ್ದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ಪ್ರತ್ಯೇಕ ಅಪಘಾತ: ನಾಲ್ವರು ಸಾವು.. ಬೆಂಗಳೂರಲ್ಲಿ ಕಾರು ಜಖಂಗೊಳಿಸಿದ ರೌಡಿಶೀಟರ್

Last Updated :Feb 11, 2023, 4:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.