ETV Bharat / state

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅವಾಂತರ: ಭೂಕುಸಿತದಿಂದ ಮಹಿಳೆ ಸಾವು - 80 ಮನೆ ಜಲಾವೃತ!

author img

By

Published : Jul 7, 2023, 10:51 AM IST

Updated : Jul 7, 2023, 12:31 PM IST

bantwala rain effects
ದಕ್ಷಿಣ ಕನ್ನಡ ಮಳೆ ಅವಾಂತರ

ಭಾರಿ ಮಳೆಯಿಂದಾಗಿ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಭೂಕುಸಿತ ಸಂಭವಿಸಿತು.

80 ಮನೆ ಜಲಾವೃತ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಸೋಮವಾರದಿಂದ ಸುರಿದ ಭಾರಿ ಮಳೆಗೆ ಇಂದು ಕೊಂಚ ಬ್ರೇಕ್​ ಬಿದ್ದಿದೆ. ನಿನ್ನೆ ರಾತ್ರಿಯ ಬಳಿಕ ಮಳೆ ಕೊಂಚ ಕಡಿಮೆಯಾಗಿದ್ದರೂ, ಇಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಜಿಲ್ಲೆಯಲ್ಲಿ ಶಾಲೆ, ಪ್ರೌಢಶಾಲೆ ಹಾಗೂ ಪಿಯು ತರಗತಿಗಳಿಗೆ ರಜೆ ನೀಡಲಾಗಿದೆ. ಮಳೆ ಪರಿಣಾಮವಾಗಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಓರ್ವ ವ್ಯಕ್ತಿ ನೀರುಪಾಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.

bantwala rain effects
ದಕ್ಷಿಣ ಕನ್ನಡ ಮಳೆ ಅವಾಂತರ

ಇಂದು ಬೆಳಗಿನ ಜಾವ ಬಂಟ್ವಾಳ ತಾಲೂಕಿನ ನಂದಾವರ ಎಂಬಲ್ಲಿ ಭೂಕುಸಿತ ಸಂಭವಿಸಿತು. ಮಣ್ಣು ಬಿದ್ದು ಮನೆ ಹಾನಿಗೊಳಗಾಗಿದೆ. ಮನೆಯೊಳಗೆ ಸಿಲುಕಿದ್ದವರ ಪೈಕಿ ಗಂಭೀರವಾಗಿ ಗಾಯಗೊಂಡ ಝರೀನಾ (49) ಎಂಬವರನ್ನು ರಕ್ಷಿಸಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದರು ಬಂಟ್ವಾಳ ತಹಶೀಲ್ದಾರ್ ಎಸ್.ಬಿ. ಕೂಡಲಗಿ ಮಾಹಿತಿ ನೀಡಿದ್ದಾರೆ.

ಸಂಪೂರ್ಣ ವಿವರ: ಬೆಳಗ್ಗೆ 6 ಗಂಟೆ ವೇಳೆಗೆ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ನಂದಾವರ ಗುಂಪುಮನೆ ಎಂಬಲ್ಲಿ ವಾಸ್ತವ್ಯವಿರುವ ಮಹಮ್ಮದ್ ಎಂಬವರ ಮನೆ ಮೇಲೆ ಗುಡ್ಡ ಜರಿದುಬಿದ್ದಿದೆ. ಮಣ್ಣಿನಡಿ ಮಹಮ್ಮದ್, ಪತ್ನಿ ಝರೀನಾ ಮತ್ತು ಮಗಳು ಸಫಾ ಸಿಲುಕಿದ್ದರು. ಕೂಡಲೇ ಪಕ್ಕದ ಮನೆಯವರು ಸಂಬಂಧಪಟ್ಟವರಿಗೆ ತಿಳಿಸಿದ್ದು, ರಕ್ಷಣಾ ಕಾರ್ಯ ಕೈಗೊಳ್ಳಲಾಗಿತ್ತು.

ಸ್ಥಳಕ್ಕೆ ಎನ್.ಡಿ.ಆರ್.ಎಫ್, ಪೊಲೀಸ್, ಸಿ.ಆರ್.ಎಫ್, ಅಗ್ನಿಶಾಮಕ ತಂಡ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಆರೋಗ್ಯ ಇಲಾಖೆ ಸಿಬಂದಿ, ಆ್ಯಂಬುಲೆನ್ಸ್ ಜೊತೆಗೆ ಆಗಮಿಸಿ ಪೂರಕ ವ್ಯವಸ್ಥೆ ಕಲ್ಪಿಸಿದರು. ಬೆಳಗ್ಗೆ 8 ಗಂಟೆಯವರೆಗೆ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಇವರಲ್ಲಿ ಮಹಮ್ಮದ್ ಮತ್ತು ಸಫಾ ಅವರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಆದರೆ ಝರೀನಾ ಮಣ್ಣಿನಡಿ ಸಿಲುಕಿದ್ದರು. ಅವರನ್ನೂ ಕೂಡ ಹೊರಕ್ಕೆ ತಂದು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮಣ್ಣಿನಡಿ ಸಿಲುಕಿದ ವೇಳೆಯೇ ಪ್ರಾಣ ಹೋಗಿರಬಹುದು ಎಂದು ಹೇಳಲಾಗಿದೆ.

ತೋಟಬೆಂಗ್ರೆ ಜಲಾವೃತ: ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮಂಗಳೂರು ನಗರದ ತೋಟಬೆಂಗ್ರೆಯಲ್ಲಿ 15 ವರ್ಷಗಳ ಬಳಿಕ ನೀರುನುಗ್ಗಿ ಸಂಪೂರ್ಣ ಜಲಾವೃತಗೊಂಡಿದೆ. ಪರಿಣಾಮ ಸುಮಾರು 80 ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಇದನ್ನೂ ಓದಿ: Rishab Shetty Birthday: ಅಭಿಮಾನಿಗಳೊಂದಿಗೆ ಇಂದು 'ಕಾಡುಬೆಟ್ಟು ಶಿವ'ನ ಜನ್ಮದಿನ - ಡಿವೈನ್​ ಸ್ಟಾರ್ ರಿಷಬ್‌ ಶೆಟ್ಟಿ ಮುಂದಿನ ಸಿನಿಮಾಗಳಿವು..

ನೀರು ನುಗ್ಗಿದ ಮನೆಯಲ್ಲಿದ್ದ ವಸ್ತುಗಳು ನೀರಿನಿಂದ ತೊಯ್ದು ತೊಪ್ಪೆಯಾಗಿದೆ. ಆದರೆ ತಕ್ಷಣಕ್ಕೆ ಮೋಟಾರು ಮೂಲಕ ಮನೆಯೊಳಗಿನ ನೀರನ್ನು ಖಾಲಿ ಮಾಡಿಸುವ ವ್ಯವಸ್ಥೆ‌ ಮಾಡಲಾಗಿದೆ. ಮನೆಯವರಿಗೆ ಗಂಜಿ ಕೇಂದ್ರದ ವ್ಯವಸ್ಥೆ ಮಾಡಿದ್ದರೂ, ಕೆಲವರು ನೀರು ಖಾಲಿ ಮಾಡಿದ ಬಳಿಕ ತಮ್ಮ‌ ಮನೆಯಲ್ಲಿಯೇ ಉಳಿದಿದ್ದಾರೆ. ಮತ್ತೆ ಕೆಲವರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ. ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಒಸರಿನ ಒರತೆ ಹೆಚ್ಚಾಗಿ ಏಕಾಏಕಿ ನೀರು ನುಗ್ಗಿ ತೋಟಬೆಂಗ್ರೆಯಲ್ಲಿ ಈ ಅವಾಂತರ ಸೃಷ್ಟಿಯಾಗಿದೆ. ‌ಮೋಟಾರು ಪಂಪ್ ಮೂಲಕ ನೀರನ್ನು ಸಮುದ್ರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿ, ನೀರು ಬಾರದಂತೆ ಮಣ್ಣಿನ ತಡೆಗೋಡೆ ಮಾಡಿದರೂ ಒಸರು ಜಿನುಗುತ್ತಿದ್ದರಿಂದ ನುಗ್ಗಿರುನ ನೀರಿನ ಮಟ್ಟ ಮಾತ್ರ ಕಡಿಮೆಯಾಗುತ್ತಿಲ್ಲ.

ಇದನ್ನೂ ಓದಿ: ಕರಾವಳಿಯಲ್ಲಿ ಮುಂದುವರಿದ ವರ್ಷಧಾರೆ: ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಭರ್ತಿಯಾದ ತುಂಬೆ ಡ್ಯಾಂ: ತುಂಬೆ ಡ್ಯಾಂನಲ್ಲಿ ಗುರುವಾರ ಬೆಳಗ್ಗೆ 3.4 ಮೀ. ಅಡಿ ನೀರಿದ್ದರೆ, ಸಂಜೆ 3.7 ಮೀಟರ್ ಇತ್ತು. ಇಂದು ಬೆಳಿಗ್ಗೆ 4.7 ಮೀಟರ್​ಗೆ ಏರಿಕೆಯಾಗಿದೆ. ತುಂಬೆ ಡ್ಯಾಂನ 30 ಗೇಟ್​​ನಲ್ಲಿ 25 ಅನ್ನು ತೆರೆಯಲಾಗಿದೆ. ಇಲ್ಲಿ ಅಪಾಯದ ಮಟ್ಟ 8.5 ಮೀಟರ್. ಜೂನ್ ಮಧ್ಯಭಾಗದವರೆಗೂ ಸಂಪೂರ್ಣ ಬತ್ತಿದ್ದ ನೇತ್ರಾವತಿ ಈಗ ಬದಲಾಗಿದೆ. ಕಳೆದ 3 ದಿನಗಳಿಂದ ಉಗಮ ಪ್ರದೇಶದಲ್ಲಿ ಹರಿವಿನ ಪ್ರಮಾಣ ಹೆಚ್ಚಿದೆ. ಉಪ್ಪಿನಂಗಡಿಯಲ್ಲಿ ಕೆಲವೇ ದಿನಗಳ ಮೊದಲು ಸಂಗಮ ಕ್ಷೇತ್ರದಲ್ಲಿ ನೇತ್ರಾವತಿಯಲ್ಲಿ ಮರಳಿನ ದಿಣ್ಣೆ ಕಾಣುತ್ತಿತ್ತು. ಜು.6 ರಿಂದ ನೀರಿನ ಹರಿವು ಹೆಚ್ಚಳಗೊಂಡಿದೆ.

Last Updated :Jul 7, 2023, 12:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.