ETV Bharat / state

ನೂತನ ಶಾಸಕರಿಗೆ ಮೂರು ದಿನಗಳ ತರಬೇತಿ ಶಿಬಿರ: ಸ್ಪೀಕರ್ ಯು ಟಿ ಖಾದರ್

author img

By

Published : May 25, 2023, 3:35 PM IST

three-days-training-camp-for-new-mlas-speaker-ut-khader
ಹೊಸ ಶಾಸಕರಿಗೆ ಮೂರು ದಿನಗಳ ತರಬೇತಿ ಶಿಬಿರ: ಸ್ಪೀಕರ್ ಯು.ಟಿ ಖಾದರ್

ಸಭಾಧ್ಯಕ್ಷನಾದರೂ ಕ್ಷೇತ್ರದ ಶಾಸಕನಾಗಿ ಸೇವೆ ಸಲ್ಲಿಸುತ್ತೇನೆ. ಕ್ಷೇತ್ರ ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ನಿಕಟ ಸಂಬಂಧ ಇರಿಸಿಕೊಳ್ಳುತ್ತೇನೆ ಎಂದು ವಿಧಾನಸಭೆ ಸ್ಪೀಕರ್​​ ಯು ಟಿ ಖಾದರ್​ ಹೇಳಿದರು.

ಹೊಸ ಶಾಸಕರಿಗೆ ಮೂರು ದಿನಗಳ ತರಬೇತಿ ಶಿಬಿರ: ಸ್ಪೀಕರ್ ಯು.ಟಿ ಖಾದರ್

ಮಂಗಳೂರು: ರಾಜ್ಯ ವಿಧಾನಸಭೆಗೆ ಆಯ್ಕೆಯಾದ ಹೊಸ ಶಾಸಕರಿಗೆ ಮೂರು ದಿನಗಳ ಕಾಲ ಟ್ರೈನಿಂಗ್ ಕ್ಯಾಂಪ್ ಆಯೋಜಿಸಲಾಗುವುದು ಎಂದು ನೂತನವಾಗಿ ಆಯ್ಕೆಯಾದ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಹೇಳಿದರು.

ವಿಧಾನಸಭಾ ಸ್ಪೀಕರ್ ಆಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶೇ.70ರಷ್ಟು ಹೊಸ ಶಾಸಕರು ಈ ಬಾರಿಯ ಸದನದಲ್ಲಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿನ ನಿಯಮಗಳೇನು?. ಅದನ್ನು ಹೇಗೆ ಪಾಲನೆ ಮಾಡಬೇಕು, ವಿಧಾನಸಭೆಯ ಚರ್ಚೆಯಲ್ಲಿ ಗೌರವ ಹೆಚ್ಚಿಸಿಕೊಂಡು ಜನಸಾಮಾನ್ಯರಿಗೆ ತಮ್ಮ ಬಗ್ಗೆ ಕಾಳಜಿ ಇದೆ ಎಂಬ ಭಾವನೆಯನ್ನು ಹೇಗೆ ಮೂಡಿಸಬೇಕು ಎಂಬ ವಿಚಾರಗಳ ಬಗ್ಗೆ ಮೂರು ದಿನಗಳ ಟ್ರೈನಿಂಗ್ ಕ್ಯಾಂಪ್​​ನ್ನು ನೂತನ ಶಾಸಕರಿಗೆ ಇಡಲಾಗುತ್ತದೆ ಎಂದು ಹೇಳಿದರು.

ಸರಿಯಾದ ಮಾಹಿತಿ ಮತ್ತು ನಿಯಮಗಳು ನೂತನ ಶಾಸಕರು ಅರ್ಥ ಮಾಡಿಕೊಳ್ಳದಿದ್ದರೆ ಅವರ ಭಾಗವಹಿಸುವಿಕೆ ಕಡಿಮೆಯಾಗುತ್ತದೆ ಎಂಬ ಭಾವನೆಯಿದೆ. ನಾನು ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಂಡು ಹೆಚ್ಚಿನ ಅವಕಾಶಗಳನ್ನು ಯುವಕರಿಗೆ ಮತ್ತು ಹೊಸ ಮುಖಗಳಿಗೆ ನೀಡಲು ಪ್ರಯತ್ನ ಮಾಡುತ್ತೇನೆ. ಸಭಾಧ್ಯಕ್ಷನಾದರೂ ಕ್ಷೇತ್ರದ ಶಾಸಕನಾಗಿ ಸೇವೆ ಸಲ್ಲಿಸುತ್ತೇನೆ. ಕ್ಷೇತ್ರ ಮತ್ತು ಪಕ್ಷದ ಕಾರ್ಯಕರ್ತರ ನಿಕಟ ಸಂಬಂಧ ಇರಿಸಿಕೊಳ್ಳುತ್ತೇನೆ. ಸ್ಪೀಕರ್ ಸ್ಥಾನದ ಘನತೆ ಹೆಚ್ಚಿಸಿ ಕ್ಷೇತ್ರವನ್ನು ಮಾದರಿ ಯಾಗಿಸುತ್ತೇನೆ. ಕರ್ನಾಟಕ ರಾಜ್ಯದ ವಿಧಾನಸಭಾ ಸಭಾಧ್ಯಕ್ಷ ಸ್ಥಾನ ಗೌರವ ಇರುವ ಸ್ಥಾನವಾಗಿದ್ದು, ಇದರ ಗೌರವ ಉಳಿಸುವ ಕಾರ್ಯ ಮಾಡುತ್ತೇನೆ ಮತ್ತು ಜಿಲ್ಲೆಗೆ ಗೌರವ ತರುತ್ತೇನೆ ಎಂದರು.

ಹಿಂದೆ ವಿಧಾನಸಭೆಯ ಸ್ಪೀಕರ್ ಆಗಿದ್ದ ಜಿಲ್ಲೆಯ ವೈಕುಂಠ ಬಾಳಿಗ, ಲೋಕಸಭಾ ಸ್ಪೀಕರ್ ಆಗಿದ್ದ ಕೆ ಎಸ್ ಹೆಗ್ಡೆ ಅವರು ಅಧ್ಯಕ್ಷ ಸ್ಥಾನಕ್ಕೆ ಗೌರವ ಕೊಟ್ಟ ರೀತಿಯಲ್ಲಿ ನಾನು ಪಾಲಿಸುತ್ತೇನೆ. ಪ್ರತಿನಿಧಿಗಳ ಪ್ರಜಾಪ್ರಭುತ್ವ ಉಳಿಯಬೇಕಾದರೆ ಸಾಮಾಜಿಕ ಪ್ರಜಾಪ್ರಭುತ್ವ ಅಗತ್ಯ. ಯಾವುದೇ ದ್ವೇಷವಿಲ್ಲದೆ, ಆವೇಶವಿಲ್ಲದೆ ಪ್ರೀತಿ ವಿಶ್ವಾಸ ಮಾಡಿ ಜನಸಾಮಾನ್ಯರ ನೆಮ್ಮದಿ ಬದುಕಿಗೆ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ಯು.ಟಿ ಖಾದರ್​ ಅವರಿಗೆ ಹೂ ಗುಚ್ಚ ನೀಡಿ ಅಭಿನಂದಿಸಿದ ಕಾರ್ಯಕರ್ತರು
ಯು.ಟಿ ಖಾದರ್​ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದ ಕಾರ್ಯಕರ್ತರು

ವಯಸ್ಸಿನಲ್ಲಿ ಕಿರಿಯ-ಅನುಭವದಲ್ಲಿ ಹಿರಿಯ: ಸ್ಪೀಕರ್ ಮಾಡಿರುವ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಹಲವಾರು ಜನರು ಇದ್ದರೂ ನನ್ನನ್ನು ಆಯ್ಕೆ ಮಾಡಿದ್ದಾರೆ. ನಾನು ವಯಸ್ಸಿನಲ್ಲಿ ಕಿರಿಯ ಇರಬಹುದು. ಆದರೆ ಅನುಭವದಲ್ಲಿ ಹಿರಿಯನಿದ್ದೇನೆ. ಚಿಕ್ಕಂದಿನಿಂದಲೇ ಜನರೊಂದಿಗೆ ಒಡನಾಟ ಇದೆ. ನಾನು ಮಂತ್ರಿಯಾಗಿದ್ದರೆ ಒಂದು ಇಲಾಖೆಗೆ ಸೀಮಿತವಾಗಿರುತ್ತಿದ್ದೆ. ಇದೀಗ 32 ಇಲಾಖೆಯ ಮಂತ್ರಿಗಳು ನನ್ನ ವ್ಯಾಪ್ತಿಯಲ್ಲಿ ಬರುತ್ತಾರೆ. ಈ ಕಾರಣದಿಂದ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಯು ಟಿ ಖಾದರ್​ ಹೇಳಿದರು.

ರಾಜ್ಯದಲ್ಲಿ ಎರಡನೇ ಭಾಷೆಯಾಗಿ ತುಳು ಭಾಷೆಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಸಚಿವರು ಜಿಲ್ಲೆಯವರಾಗಿ ಅದನ್ನು ಮಾಡಲು ಆಗಿಲ್ಲ. ಮುಂದೆ ಕನ್ನಡ ಮತ್ತು ಸಂಸ್ಕೃತಿ ಸಚಿವರು ಯಾರು ಆಗುತ್ತಾರೆ ಎಂಬುದನ್ನು ನೋಡಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಅದನ್ನು ಮಾಡಲು ಕ್ರಮ ತೆಗೆದುಕೊಳ್ಳಬಹುದು. ಈ ಸಂದರ್ಭದಲ್ಲಿ ನನ್ನ ಸಹಕಾರ ಕೊಡುತ್ತೇನೆ ಎಂದರು.

ಅಭಿನಂದನೆ ಸ್ಪೀಕರ್ ಆಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಬಂದ ಯು ಟಿ ಖಾದರ್ ಅವರಿಗೆ ಕಾರ್ಯಕರ್ತರು ಅಭಿಮಾನಿಗಳಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು. ಇಂದು ಬೆಳಗ್ಗೆ ಸ್ಪೀಕರ್ ಯು ಟಿ ಖಾದರ್ ಅವರು ಸರ್ಕ್ಯೂಟ್ ಹೌಸ್​​ಗೆ ಬಂದಿದ್ದ ವೇಳೆ ಕಾರ್ಯಕರ್ತರು, ಅಭಿಮಾನಿಗಳು ಮುತ್ತಿಕೊಂಡರು. ಹೂಗುಚ್ಛ ನೀಡಿ, ಮಲ್ಲಿಗೆಯ ಹಾರ, ಶಾಲು ಹಾಕಿ ಅಭಿನಂದಿಸಿದರು.

ಇದನ್ನೂ ಓದಿ: ನಮ್ಮಲ್ಲಿ ಇರುವುದು ಒಂದೇ ಬಣ, ನಾನು ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ: ರಾಮಲಿಂಗಾರೆಡ್ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.