ಬಂಟ್ವಾಳ(ದಕ್ಷಿಣ ಕನ್ನಡ): ದ್ವಿತೀಯ ಪಿಯುಸಿಯಲ್ಲಿ 467 ಅಂಕ ಪಡೆದು ಸಾಧನೆಗೈದ ಬಂಟ್ವಾಳ ತಾಲೂಕು ಕೂರಿಯಾಳ ಗ್ರಾಮದ ದಿವ್ಯಾಂಗ ಬಾಲಕಿ ಭಾಗ್ಯಶ್ರೀಗೆ ಮುಂದಿನ ಪದವಿ ಶಿಕ್ಷಣ ಮುಂದುವರಿಸಲು ನೆರವಿನ ಭರವಸೆ ದೊರೆತಿದೆ. ತಾಲೂಕಿನ ಫರಂಗೀಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಅವರು ಭಾಗ್ಯಶ್ರೀಯನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಪದವಿ ಶಿಕ್ಷಣ ಪೂರೈಸುವಂತೆ ಮನವೊಲಿಸಿದ್ದಾರೆ.
ಮೂರು ವರ್ಷ ಪದವಿ ಶಿಕ್ಷಣಕ್ಕೆ ಬೇಕಾಗುವ ವ್ಯವಸ್ಥೆಯನ್ನು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಮೂಲಕ ಕಲ್ಪಿಸುವ ಭರವಸೆ ನೀಡಿದ್ದಲ್ಲದೆ ಈ ಸಂಬಂಧ ಬಂಟ್ವಾಳ ಎಸ್ವಿಎಸ್ ಕಾಲೇಜಿನ ಪ್ರಾಂಶುಪಾಲರೊಂದಿಗೂ ಕೃಷ್ಣಕುಮಾರ್ ಪೂಂಜಾ ಅವರು ಮಾತುಕತೆ ನಡೆಸಿದ್ದಾರೆ. ಈ ನಡುವೆ ಮುಂಬೈ ಕುಲಾಲ ಸಂಘದ ಅಧ್ಯಕ್ಷ ದೇವದಾಸ ಕುಲಾಲ್ ಸೇರಿ ಇನ್ನೂ ಕೆಲ ದಾನಿಗಳು ನೆರವಾಗುವಂತೆ ಭರವಸೆಯಿತ್ತಿದ್ದಾರೆ ಎಂದು ಭಾಗ್ಯಶ್ರೀಯ ತಂದೆ ಕೇಶವ ಕುಲಾಲ್ ತಿಳಿಸಿದ್ದಾರೆ.
ಭಾಗ್ಯಶ್ರೀ, ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಕೇಶವ ಕುಲಾಲ್ ಮತ್ತು ರಾಜೀವಿ ಅವರ ಪುತ್ರಿ. ತಂದೆ ಕೇಶವ ಕೂಡಾ ಹುಟ್ಟಿನಿಂದಲೇ ಅಂಗವೈಕಲ್ಯಕ್ಕೆ ತುತ್ತಾದವರು. ಮನೆಯ ಪಕ್ಕದಲ್ಲಿ ಒಂದು ಗೂಡಂಗಡಿ ಇಟ್ಟುಕೊಂಡಿದ್ದಾರೆ. ಇವರ ಪತ್ನಿ ಬೀಡಿ ಕಟ್ಟುತ್ತಿದ್ದು ಹೇಗೋ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಹಿರಿಯಾಕೆ ದ್ವಿತೀಯ ಬಿಕಾಂ ಓದುತ್ತಿದ್ದಾಳೆ.
ಎರಡನೆಯವಳು ಭಾಗ್ಯಶ್ರೀ ಹುಟ್ಟು ವಿಕಲಚೇತನೆ. ಸೊಂಟದಿಂದ ಕೆಳಭಾಗದಲ್ಲಿ ಪೂರ್ತಿ ನಿಶಕ್ತಿ ಹೊಂದಿರುವ ಈಕೆಗೆ ಅಮ್ಮನೇ ಆಸರೆ. ಅಮ್ಮನೇ ಈಕೆಯನ್ನು ತನ್ನ ಸೊಂಟದಲ್ಲಿ ಕೂರಿಸಿಕೊಂಡು ಹೋಗಿ ಶಾಲೆಗೆ ಬಿಟ್ಟು ಅಲ್ಲಿಯೇ ಇದ್ದು ಮತ್ತೆ ಸಂಜೆ ಮನೆಗೆ ಕರೆದುಕೊಂಡು ಬರುತ್ತಿದ್ದರು. ಎಸ್ಎಸ್ಎಲ್ಸಿಯಲ್ಲಿ 470 ಅಂಕಗಳನ್ನು ಪಡೆದು ಉತ್ತೀರ್ಣಳಾಗಿದ್ದ ಭಾಗ್ಯಶ್ರೀ ಪಿಯುಸಿಯಲ್ಲಿ 467 ಅಂಕ ಗಳಿಸಿ ಸಾಧನೆ ಗೈದಿದ್ದಾಳೆ.