ETV Bharat / state

ಗಡಿಯಲ್ಲಿ ಹುತಾತ್ಮರಾದ ಕ್ಯಾ. ಪ್ರಾಂಜಲ್ ಶಾಲಾ ದಿನಗಳಲ್ಲಿ ಶಿಕ್ಷಕರ ನೆಚ್ಚಿನ ವಿದ್ಯಾರ್ಥಿ; ಕಣ್ಣೀರಿಟ್ಟ ಶಿಕ್ಷಕಿ

author img

By ETV Bharat Karnataka Team

Published : Nov 23, 2023, 5:19 PM IST

ಶಿಕ್ಷಕಿ ಕೃಪಾ ಸಂಜೀವ್
ಶಿಕ್ಷಕಿ ಕೃಪಾ ಸಂಜೀವ್

ಕ್ಯಾಪ್ಟನ್ ಎಂ ವಿ ಪ್ರಾಂಜಲ್ ದೇಶಕ್ಕಾಗಿ ಹುತಾತ್ಮರಾಗಿದ್ದು, ಅವರಿಗೆ ಸೆಲ್ಯೂಟ್​ ಮಾಡುತ್ತೇವೆ ಎಂದು ಶಿಕ್ಷಕಿ ಕೃಪಾ ಸಂಜೀವ್ ಗದ್ಗದಿತರಾದರು.

ಶಿಕ್ಷಕಿ ಕೃಪಾ ಸಂಜೀವ್

ಮಂಗಳೂರು : ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸೇನೆ ಹಾಗೂ ಉಗ್ರರ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ದಕ್ಷಿಣ ಕನ್ನಡ ಮೂಲದ 63ನೇ ರಾಷ್ಟ್ರೀಯ ರೈಫಲ್ಸ್ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಹುತಾತ್ಮರಾಗಿದ್ದಾರೆ. ಮಂಗಳೂರಿನ ಎಂಆರ್​ಪಿಎಲ್​ನ ಡೆಲ್ಲಿ ಸ್ಕೂಲ್​ನಲ್ಲಿ ಎಲ್​ಕೆಜಿಯಿಂದ ಎಸ್ಎಸ್ಎಲ್​ಸಿವರೆಗೆ ವಿದ್ಯಾಭ್ಯಾಸ ಪಡೆದ ಬಳಿಕ ಅವರು ನಗರದ ಮಹೇಶ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದರು. ಬಳಿಕ ಮಧ್ಯಪ್ರದೇಶದ ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಷನ್​ನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದು ಸೇನೆಗೆ ಸೇರಿದ್ದರು.

ಹುತಾತ್ಮ ಕ್ಯಾಪ್ಟನ್​ ಎಂ ವಿ ಪ್ರಾಂಜಲ್ ಕುರಿತು ಶಿಕ್ಷಕಿ ಕೃಪಾ ಸಂಜೀವ್ ಮಾತನಾಡಿ, ಅವನು ಶಾಲೆಯಲ್ಲಿದ್ದಾಗಲೇ ಪರ್ಫೆಕ್ಟ್ ಸ್ಟೂಡೆಂಟ್ ಆಗಿದ್ದ. ಆದ್ದರಿಂದ ಎಲ್ಲಾ ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿಯಾಗಿದ್ದ. ಮೊದಲು ಈ ವಿಚಾರ ಕಿವಿಗೆ ಬಿದ್ದಾಗ ಈ ಘಟನೆಯನ್ನು ಅರಗಿಸಲು ಸಾಧ್ಯವಾಗಿಲ್ಲ. ನಮಗೆ ಈ ದುಃಖದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ದೇಶಕ್ಕಾಗಿ ಅವನು ಮಾಡಿರುವ ತ್ಯಾಗಕ್ಕೆ ಸೆಲ್ಯೂಟ್ ಹೇಳುತ್ತೇವೆ ಎಂದರು.

ಪ್ರಾಂಜಲ್ ಎಲ್ಲರ ಸರ್ವಸ್ವ ಆಗಿದ್ದ. ಬಾಲ್ಯದಿಂದಲೇ ಅವನು ಎಲ್ಲರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ. ಮಿಲಿಟರಿಗೆ ಸೇರಿದ ಬಳಿಕವೂ ಪ್ರತಿಬಾರಿ ಊರಿಗೆ ಬಂದಾಗ ಶಾಲೆಗೆ ಭೇಟಿ ನೀಡುತ್ತಿದ್ದ. ಎಲ್ಲಾ ಶಿಕ್ಷಕ - ಶಿಕ್ಷಕಿಯರು ಸೇರಿದಂತೆ ಕಚೇರಿ ಸಿಬ್ಬಂದಿ, ಹೌಸ್ ಕೀಪಿಂಗ್ ಆಫೀಸ್ ಸ್ಟಾಫ್​ಗಳನ್ನೂ ಕಂಡು ಮಾತನಾಡುತ್ತಿದ್ದ. ರಾಷ್ಟ್ರಪತಿ ಸ್ಕೌಟ್ ಆಗಿ ನಾಯಕತ್ವ ಹೊಂದಿದ್ದ. ಆರನೇ ತರಗತಿಯಿಂದಲೇ ಸೇನೆಗೆ ಸೇರಬೇಕೆಂದು ತಯಾರಿ ಮಾಡಿದ್ದ. ಒಂದು ತಿಂಗಳ ಹಿಂದೆಯಷ್ಟೇ ಶಾಲೆಗೆ ಬಂದು ನಮ್ಮನ್ನೆಲ್ಲಾ ಮಾತನಾಡಿಸಿದ್ದ‌. ಇಂದು ನಮ್ಮ ಶಾಲೆಯಲ್ಲಿ ಕ್ರೀಡಾ ದಿನ ಇತ್ತು. ಆದರೆ ಪ್ರಾಂಜಲ್ ಬಲಿದಾನದ ಹಿನ್ನೆಲೆ ಶಾಲೆಗೆ ರಜೆ ಕೊಟ್ಟಿದ್ದೇವೆ ಎಂದು ಹೇಳಿದರು.

63ನೇ ರಾಷ್ಟ್ರೀಯ ರೈಫಲ್ಸ್ ಕ್ಯಾಪ್ಟನ್ ಎಂ ವಿ ಪ್ರಾಂಜಲ್(28) ಮಂಗಳೂರಿನಲ್ಲಿಯೇ ಹುಟ್ಟಿ ಬಾಲ್ಯ ಕಳೆದು ಬಳಿಕ ಭಾರತೀಯ ಸೇನಾಪಡೆ ಸೇರಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಾಂಜಲ್‌ ಮಂಗಳೂರಿನ ಎಂಆರ್​ಪಿಎಲ್ ನಿವೃತ್ತ ಎಂ ಡಿ ವೆಂಕಟೇಶ್ ಹಾಗೂ ಅನುರಾಧ ದಂಪತಿಯ ಏಕೈಕ ಪುತ್ರ. ಇವರೊಂದಿಗೆ 9ಪಿಎಆರ್‌ಎ ಕ್ಯಾಪ್ಟನ್ ಶುಭಂ ಮತ್ತು ಹವಾಲ್ದಾರ್ ಮಜೀದ್ ಹುತಾತ್ಮರಾಗಿದ್ದಾರೆ. ಐದರಿಂದ ಆರು ಮಂದಿಯಿದ್ದ ಉಗ್ರರ ಗುಂಪು ಇವರ ಮೇಲೆ ದಾಳಿ ಮಾಡಿತ್ತು.

ತಂದೆ ವೆಂಕಟೇಶ್ ಮೇ 31ರಂದು ಎಂಆರ್‌ಪಿಎಲ್‌ನ ಎಂಡಿ ಪದವಿಯಿಂದ ನಿವೃತ್ತರಾಗಿದ್ದರು. ಇವರ ನಿವೃತ್ತಿ ಸಮಾರಂಭಕ್ಕೆ ಪ್ರಾಂಜಲ್ ಆಗಮಿಸಿದ್ದರು. ಸದ್ಯ ವೆಂಕಟೇಶ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಎರಡು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದ ಪ್ರಾಂಜಲ್ ಅವರ ಪತ್ನಿ ಚೆನ್ನೈ ಐಐಟಿಯಲ್ಲಿ ಎಂಟೆಕ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಉಗ್ರರ ವಿರುದ್ಧದ ಹೋರಾಟದಲ್ಲಿ ಮಂಗಳೂರಿನ ಯೋಧ ಕ್ಯಾ.ಎಂ.ವಿ.ಪ್ರಾಂಜಲ್ ಹುತಾತ್ಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.