ETV Bharat / state

ಕುಮಾರ ಪರ್ವತದ ತುತ್ತ ತುದಿಯಲ್ಲಿರುವ ಕುಮಾರ ಪಾದಗಳಿಗೆ ವಿಶೇಷ ಪೂಜೆ

author img

By ETV Bharat Karnataka Team

Published : Jan 2, 2024, 11:01 PM IST

ಕುಮಾರ ಪರ್ವತ
ಕುಮಾರ ಪರ್ವತ

ಪೂರ್ವ ಶಿಷ್ಠ ಸಂಪ್ರದಾಯದ ಪ್ರಕಾರವೇ ಕುಮಾರ ಪರ್ವತದಲ್ಲಿ ಪೂಜೆಗಳನ್ನು ನೆರವೇರಿಸಲಾಯಿತು.

ಸುಬ್ರಹ್ಮಣ್ಯ (ದಕ್ಷಿನ ಕನ್ನಡ) : ಕುಮಾರ ಪರ್ವತದ ತುತ್ತ ತುದಿಯಲ್ಲಿರುವ ಕುಮಾರ ಪಾದಕ್ಕೆ ಮತ್ತು ಸಮೀಪದಲ್ಲಿರುವ ವಾಸುಕಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಮಾರ್ಗಶಿರ ಬಹುಳ ಷಷ್ಠಿಯ ದಿನವಾದ ಇಂದು ಮಂಗಳವಾರ ವಿಶೇಷ ಪೂಜೆಯನ್ನು ನೆರವೇರಿಸಿದರು.

ಇಂದು ಮದ್ಯಾಹ್ನ ಸುಮಾರು 12 ಗಂಟೆಯ ಶುಭಮುಹೂರ್ತದಲ್ಲಿ ಸಮುದ್ರ ಮಟ್ಟದಿಂದ ಸುಮಾರು 4000 ಅಡಿಗಳಷ್ಟು ಎತ್ತರವಿರುವ ಕುಮಾರ ಪರ್ವತದ ತುತ್ತ ತುದಿಯಲ್ಲಿರುವ ಕುಮಾರ ಸ್ವಾಮಿ ದೇವರ ಪಾದಗಳಿಗೆ ಪ್ರಧಾನ ಅರ್ಚಕರು ವಿವಿಧ ವೈಧಿಕ ವಿದಿ ವಿಧಾನಗಳ ಮೂಲಕ ಪೂಜೆಯನ್ನು ಸಲ್ಲಿಸಿದರು. ಅಲ್ಲದೆ ಪಾದದ ಬಳಿಯಿರುವ ವಾಸುಕಿಗೂ ಪೂಜೆ ನೆರವೇರಿಸಿದರು.

ಆರಂಭದಲ್ಲಿ ಪ್ರಧಾನ ಅರ್ಚಕರು ಕುಮಾರನ ಪಾದಗಳಿಗೆ ಮತ್ತು ಪಕ್ಕದಲ್ಲಿನ ವಾಸಕಿಗೆ ಅಭಿಷೇಕವನ್ನು ನೆರವೇರಿಸಿದರು. ನಂತರದಲ್ಲಿ ಪುಷ್ಪಾಲಂಕಾರ ಮಾಡಿ ಫಲಸಮರ್ಪಣೆಯನ್ನು ಮಾಡಿ, ನೈವೇದ್ಯವನ್ನು ಸಮರ್ಪಿಸಿದರು. ಬಳಿಕ ವೈಧಿಕರ ಮಂತ್ರೋಚ್ಛಾರಣೆಯ ನಡುವೆ ಪ್ರಧಾನ ಅರ್ಚಕರು ಪೂಜೆಯನ್ನು ನೆರವೇರಿಸಿದರು. ಸಹ ಪುರೋಹಿತರುಗಳು ಸಹಕರಿಸಿದರು. ಬಳಿಕ ಭಕ್ತರಿಗೆ ಪ್ರಸಾದ ವಿತರಣೆಯಾಯಿತು.

ಕುಕ್ಕೆ ಸುಬ್ರಹ್ಮಣ್ಯ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ ಸೇರಿದಂತೆ ಪ್ರಮುಖರು, ಭಕ್ತರು, ಶ್ರೀ ದೇವಳದ ಇತರ ಸಿಬ್ಬಂದಿಗಳು, ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 150ಕ್ಕೂ ಅಧಿಕ ಭಕ್ತರು ಕುಕ್ಕೆಯಿಂದ 18 ಕಿ.ಮಿ ದೂರವಿರುವ ಎತ್ತರದ ಪರ್ವತ ಏರಿ ಪೂಜೆಯಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿದರು.

ಕೆಲವು ಭಕ್ತರು ಸೋಮವಾರವೇ ಯಾತ್ರೆ ಆರಂಭಿಸಿ ಗಿರಿಗದ್ದೆ ಮೂಲಕ ಪ್ರಯಾಣಿಸಿ ಮಂಗಳವಾರ ಕುಮಾರ ಪರ್ವತಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಶ್ರೀ ದೇವಳದ ಆಡಳಿತ ಮಂಡಳಿ, ಶ್ರೀ ದೇವಳದ ಸಿಬ್ಬಂಧಿಗಳು ಮತ್ತು ಭಕ್ತರು ಮಂಗಳವಾರ ಮುಂಜಾನೆ ಕುಕ್ಕೆ ದೇವಳದಿಂದ ವಾಹನಗಳಲ್ಲಿ ಬಿಸಿಲೆ, ಶಾಂತಳ್ಳಿ ಮೂಲಕ ಕುಮಾರಪರ್ವತ ಯಾತ್ರೆಗೆ ತೆರಳಿದರು. ಶಾಂತಳ್ಳಿಯ ದೇವಳದ ಬಳಿ ವಾಹನ ನಿಲ್ಲಿಸಿ ಸುಮಾರು 8 ಕಿ.ಮೀ ದೂರವಿರುವ ಕಡಿದಾದ ಹಾದಿಯಲ್ಲಿ ಪರ್ವತವೇರಿ ಪೂಜೆಯಲ್ಲಿ ಪಾಲ್ಗೊಂಡರು.

ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅನ್ನದಾನಕ್ಕೆ ₹1 ಕೋಟಿ ಹರಕೆ ಪೂರೈಸಿದ ತೆಲಂಗಾಣದ ಸಚಿವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.