ETV Bharat / state

ವಿಮಾನದಲ್ಲಿ ಬಂದು ರೈಲಿನಲ್ಲಿ ಕಳವು: ಉತ್ತರಪ್ರದೇಶದ ಇಬ್ಬರು ಆರೋಪಿಗಳ ಬಂಧನ

author img

By ETV Bharat Karnataka Team

Published : Oct 5, 2023, 12:19 PM IST

ಕಳವು ಪ್ರಕರಣ
ಕಳವು ಪ್ರಕರಣ

ರಾತ್ರಿ ವೇಳೆ ಸಹ ಪ್ರಯಾಣಿಕರ ಚಿನ್ನಾಭರಣ ಕದಿಯುತ್ತಿದ್ದ ಆರೋಪಿಗಳಿಬ್ಬರನ್ನು ಆರ್‌ಪಿಎಫ್​ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು: ಉತ್ತರ ಪ್ರದೇಶದಿಂದ ವಿಮಾನದಲ್ಲಿ ಬಂದು, ರೈಲುಗಳಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಆರ್​ಪಿಎಫ್​ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರದ ಧೋರುಪುರದ ಅಭಯ್‌ರಾಜ್​ ಸಿಂಗ್ (26) ಮತ್ತು ರಾಜ್‌ಪುರದ ಹರಿಶಂಕರ್​ ಗಿರಿ (25) ಬಂಧಿತ ಆರೋಪಿಗಳು.

ರಾತ್ರಿ ವೇಳೆ ಪ್ರಯಾಣಿಸಿ ಸಹ ಪ್ರಯಾಣಿಕರ ಚಿನ್ನಾಭರಣ ಕದಿಯುತ್ತಿದ್ದ ಆರೋಪಿಗಳಿಬ್ಬರನ್ನು ರೈಲು ಸಂರಕ್ಷಣಾ ಪಡೆಯ (ಆರ್‌ಪಿಎಫ್) ಪೊಲೀಸರ ವಿಶೇಷ ತಂಡವು ಬಂಧಿಸಿದೆ. ಮಂಗಳೂರು ಮತ್ತು ಸುರತ್ಕಲ್​ ನಡುವೆ ಸೆ. 28ರಂದು ಸಂಚರಿಸಿದ್ದ ರೈಲಿನಲ್ಲಿ ಪ್ರಯಾಣಿಕರೊಬ್ಬರ ಚಿನ್ನಾಭರಣ ಕಳವಾಗಿತ್ತು. ಇಬ್ಬರು ಯುವಕರ ವರ್ತನೆ ಬಗ್ಗೆ ಸಂದೇಹ ಮೂಡಿದ್ದರಿಂದ ಅವರನ್ನು ಆರ್​ಪಿಎಫ್ ಪೊಲೀಸರು ಅ.2ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ರೈಲಿನಲ್ಲಿ ಚಿನ್ನಾಭರಣ ಕಳವು ಮಾಡಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದರು. ಆರ್​ಪಿಎಫ್​ನವರು ಆರೋಪಿಗಳನ್ನು ಮಂಗಳೂರು ರೈಲ್ವೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಆರೋಪಿಗಳು ಉತ್ತರ ಪ್ರದೇಶದಿಂದ ವಿಮಾನದಲ್ಲಿ ಬಂದು ರಾತ್ರಿ ವೇಳೆ ಸಂಚರಿಸುವ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದರು. ಚಿನ್ನಾಭರಣ ಧರಿಸಿರುವ ವೃದ್ಧರು ಹಾಗೂ ಮಹಿಳಾ ಪ್ರಯಾಣಿಕರನ್ನು ಗುರುತಿಸುತ್ತಿದ್ದರು. ರೈಲಿನ ವೇಗವು ಕಡಿಮೆ ಆದ ಸಂದರ್ಭದಲ್ಲಿ ಅವರ ಚಿನ್ನಾಭರಣಗಳನ್ನು ಕಿತ್ತುಕೊಂಡು, ಬೋಗಿಗಳಿಂದ ಹೊರಗೆ ಜಿಗಿದು ಪರಾರಿಯಾಗುತ್ತಿದ್ದರು. ಕೃತ್ಯಕ್ಕೆ ವಾರಾಂತ್ಯದಲ್ಲಿ ಚಲಿಸುವ ರೈಲುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು.

ಈ ಆರೋಪಿಗಳು ಉತ್ತರ ಪ್ರದೇಶದಿಂದ ಗೋವಾಕ್ಕೆ ಸೆ. 21ರಂದು ಬಂದಿದ್ದರು. ಅಲ್ಲಿಂದ ತಿರುವನಂತಪುರಕ್ಕೆ ಹೋಗುವ ರೈಲು ಹತ್ತಿದ್ದರು. ಗೋವಾದ ಕುಳೆಂನಲ್ಲಿ ರೈಲು ವೇಗ ಕಡಿಮೆಯಾದಾಗ ಮಹಿಳೆಯೊಬ್ಬರ ಚಿನ್ನಾಭರಣ ಕದ್ದು ರೈಲಿನಿಂದ ಜಿಗಿಯುತ್ತಿದ್ದರು. ಬೇರೊಂದು ರೈಲನ್ನು ಹಿಡಿದು ಇದೇ ಮಾದರಿಯಲ್ಲಿ ಕೃತ್ಯ ಮುಂದುವರಿಸಿದ್ದರು.

125 ಗ್ರಾಂ ಚಿನ್ನಾಭರಣ ವಶಕ್ಕೆ: ಆರೋಪಿಗಳು ರೈಲ್ವೆಯ ಪಾಲಕ್ಕಾಡ್, ತಿರುವನಂತಪುರ ವಲಯಗಳಲ್ಲಿ ಹಾಗೂ ಕೊಂಕಣ ರೈಲ್ವೆಯ ವ್ಯಾಪ್ತಿಯಲ್ಲಿ ಸಂಚರಿಸುವ ರೈಲುಗಳಲ್ಲಿ ಸಹಪ್ರಯಾಣಿಕರಿಂದ ಕದ್ದಿರುವ ಚಿನ್ನಾಭರಣಗಳು ಸೇರಿ ಒಟ್ಟು 125 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನು ಮೊನ್ನೆ ತಾನೇ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ತನ್ನ ಸಂಬಂಧಿಕರ ಮನೆಯಿಂದಾನೇ ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪೊಲೀಸರ ಕೈಯಲ್ಲಿ ಬಂಧಿಯಾಗಿದ್ದ. ಮೊಹಮ್ಮದ್​ ರಫೀಕ್​ ಎನ್ನುವಾತ ನಕಲಿ ಕೀ ಬಳಸಿ ತನ್ನ ಸಂಬಂಧಿಕರ ಮನೆಯಿಂದ 1.10 ಕೋಟಿ ಮೌಲ್ಯದ ಚಿನ್ನಾಭರಣವನ್ನು ಮನೆ ಸದಸ್ಯರೆಲ್ಲ ಮದುವೆಗೆ ತೆರಳಿದ್ದ ವೇಳೆ ಲೂಟಿ ಹೊಡೆದಿದ್ದ. ದೂರಿನ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ತಿಲಕ್ ನಗರ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಕಳ್ಳನ್ನನು ಪತ್ತೆ ಹಚ್ಚಿದ್ದರು.

ಇದನ್ನೂ ಓದಿ: 9 ಭಾಷೆ ಮಾತನಾಡುವ ಚತುರ.. ಬೆಳ್ತಂಗಡಿಯಲ್ಲಿ ಸಿಕ್ಕಿಬಿದ್ದ ಈ ಕುಖ್ಯಾತ ಅಂತಾರಾಜ್ಯ ಕಳ್ಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.