ETV Bharat / state

ಪುತ್ತೂರು: ಅಪಾಯದ ಸ್ಥಿತಿಯಲ್ಲಿದೆ ಶತಮಾನ ಪೂರೈಸಿದ ಸರಕಾರಿ ಕಾಲೇಜು ಕಟ್ಟಡ

author img

By

Published : Aug 24, 2022, 6:45 PM IST

putturu old government college building is in danger of collapsing
ಅಪಾಯದ ಸ್ಥಿತಿಯಲ್ಲಿ ಶತಮಾನ ಪೂರೈಸಿದ ಸರಕಾರಿ ಕಾಲೇಜು ಕಟ್ಟಡ

ಶಾಲಾ ಕ್ರೀಡಾಂಗಣವನ್ನು ತಾಲೂಕು ಕ್ರೀಡಾಂಗಣವಾಗಿ ಮೇಲ್ದರ್ಜೆಗೇರಿಸಲು 20 ವರ್ಷಗಳ ಹಿಂದೆ ಮಣ್ಣು ತೆಗೆದಿದ್ದು ಈಗ ಶತಮಾನ ಪೂರೈಸಿದ ಪುತ್ತೂರಿನ ಸರಕಾರಿ ಕಾಲೇಜು ಕಟ್ಟಡ ಕುಸಿಯುವ ಭೀತಿ ಎದುರಾಗಿದೆ.

ಪುತ್ತೂರು(ದಕ್ಷಿಣ ಕನ್ನಡ): ನಗರದ ಮಧ್ಯೆ ಇರುವಂತಹ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶತಮಾನದ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಂತಹ ಈ ಕಾಲೇಜು ರಾಜ್ಯದಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಕೆಲವೇ ಸರಕಾರಿ ಶಿಕ್ಷಣ ಸಂಸ್ಥೆಯಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಕಾಲೇಜು ಹಾಗು ಪ್ರೌಢಶಾಲಾ ವಿಭಾಗಗಳನ್ನು ಹೊಂದಿರುವ ಈ ಸರಕಾರಿ ಕಾಲೇಜಿಗೆ ಸರಕಾರದ ಇನ್ನೊಂದು ಇಲಾಖೆ ಮಾಡಿದ ಕಾಮಗಾರಿಯೇ ಮಾರಕವಾಗಿ ಪರಿಣಿಸಿದೆ.

ಕಾಲೇಜಿಗೆ ಸೇರಿದ ಕ್ರೀಡಾಂಗಣವನ್ನು ತಾಲೂಕು ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಸುಮಾರು 20 ವರ್ಷಗಳ ಹಿಂದೆ ಕ್ರೀಡಾಂಗಣವನ್ನು ಯುವಜನ ಮತ್ತು ಕ್ರೀಡಾ ಇಲಾಖೆಗೆ ನೀಡಲಾಗಿತ್ತು. ಕ್ರೀಡಾಂಗಣದ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಜಾಗದ ಸಮತಟ್ಟು ಮಾಡುವ ಸಂದರ್ಭದಲ್ಲಿ ಮೇಲ್ಭಾಗದಲ್ಲಿರುವ ಕಾಲೇಜು ಕಟ್ಟಡಕ್ಕೆ ತಾಗಿಕೊಂಡೇ ಇದ್ದ ಜಾಗದ ಮಣ್ಣನ್ನು ಆ ಸಮಯದಲ್ಲಿ ಅವೈಜ್ಞಾನಿಕವಾಗಿ ಕೊರೆಯಲಾಗಿತ್ತು. ಕಾಮಗಾರಿ ನಡೆಯುತ್ತಿದ್ದ ಸಮಯದಲ್ಲೇ ಕಾಲೇಜಿನ ಅಂದಿನ ಪ್ರಾಂಶುಪಾಲರು ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.

ಆದರೆ ಆ ಸಂದರ್ಭದಲ್ಲಿ ಆಕ್ಷೇಪವನ್ನು ತಿರಸ್ಕರಿಸಿದ ಪರಿಣಾಮವನ್ನು ಇದೀಗ ಕಾಲೇಜು ಎದುರಿಸುವಂತಾಗಿದೆ. ಈಗಾಗಲೇ ಪ್ರೌಢಶಾಲಾ ವಿಭಾಗಕ್ಕೆ ಸೇರಿದ ಮೂರು ತರಗತಿ ಕೊಠಡಿಗಳು ಕುಸಿಯುವ ಭೀತಿಯಲ್ಲಿದೆ. ಅಲ್ಲದೆ ಕಾಲೇಜಿನ ಆವರಣ ಗೋಡೆಯೂ ವಾಲಿಕೊಂಡಿದ್ದು, ಮಳೆ ಹೆಚ್ಚು ಬಂದಲ್ಲಿ ಬೀಳುವ ಸಾಧ್ಯತೆ ಇದೆ.

ಆವರಣ ಗೋಡೆ ಬೀಳುವ ಸಾಧ್ಯತೆಯಿರುವ ಕಾರಣ, ಆ ಭಾಗಕ್ಕೆ ವಿದ್ಯಾರ್ಥಿಗಳು ಹೋಗದಂತೆ ನಿರ್ಬಂಧವನ್ನು ಹೇರಲಾಗಿದೆ. ಕಾಲೇಜಿನ ಈ ಅಪಾಯಕಾರಿ ಸ್ಥಿತಿಯ ಬಗ್ಗೆ ಸ್ಥಳೀಯ ಶಾಸಕರು, ಪುತ್ತೂರು ಸಹಾಯಕ ಆಯುಕ್ತರು, ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕಾಲೇಜಿನ ಮೂರು ಕೊಠಡಿಗಳು ಸಂಪೂರ್ಣ ಹಾನಿಯಾಗಿದ್ದು, ಈ ಹಾನಿಗೊಳಗಾದ ಕಟ್ಟಡವನ್ನು ಲೋಕೋಪಯೋಗಿ ಇಲಾಖೆಯ ಮೂಲಕ ನೆಲಸಮಗೊಳಿಸುವ ಕಾರ್ಯ ಶೀಘ್ರ ನಡೆಯಲಿದೆ. ಅಲ್ಲದೆ ತಾಲೂಕು ಕ್ರೀಡಾಂಗಣಕ್ಕಾಗಿ ಈಗಾಗಲೇ ಬೇರೆ ಜಾಗವನ್ನು ಗುರುತಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ಅನುದಾನಗಳನ್ನು ಬಳಸಿಕೊಂಡು ಆವರಣ ಗೋಡೆ ಹಾಗು‌ ಇತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ‌ ತೊಂದರೆಯಾಗದಂತೆ ನೋಡಿಕೊಳ್ಳಲು ಕಾಲೇಜು ಅಭಿವೃದ್ಧಿ ಸಮಿತಿ ತೀರ್ಮಾನಿಸಿದೆ.

ಅಪಾಯದ ಸ್ಥಿತಿಯಲ್ಲಿ ಶತಮಾನ ಪೂರೈಸಿದ ಸರಕಾರಿ ಕಾಲೇಜು ಕಟ್ಟಡ

ಅವೈಜ್ಞಾನಿಕವಾಗಿ ಮಣ್ಣು ತೆಗೆದ ಕಾರಣ ಕಾಲೇಜಿನ ಕಾಂಪೌಂಡ್​ ಗೋಡೆ ಕುಸಿಯುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಶಾಸಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಅಪಾಯ ಆಗದಂತೆ ಆದಷ್ಟು ಬೇಗ ಕಾಮಗಾರಿ ಮಾಡಬೇಕು. ಕುಸಿಯುತ್ತಿರುವಲ್ಲಿಗೆ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಕಾಲೇಜು ಪ್ರಾಂಶುಪಾಲ ಸುರೇಶ್ ಕುಮಾರ್ ಮನವಿ ಮಾಡಿದರು.

ಶಾಲಾ ಕ್ರೀಡಾಂಗಣಕ್ಕೆ ತಾಲೂಕು ಮಟ್ಟಕ್ಕೆ ಮಾಡಲು ಹತ್ತಿರದ ಮಣ್ಣು ತೆಗೆದು ಈ ಸಮಸ್ಯೆ ಆಗಿದೆ. ಹೀಗಾಗಿ ತಾಲೂಕು ಮೈದಾನಕ್ಕೆ ಬೇರೆಡೆ ಜಾಗ ಗುರುತಿಸಲಾಗಿದೆ. ಕಾಲೇಜಿಗೆ ಹಾನಿ ಆಗದಂತೆ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದು ಕಾರ್ಯಾಧ್ಯಕ್ಷ ಪಿ ಜಿ ಜಗನ್ನಿವಾಸ್ ರಾವ್ ತಿಳಿಸಿದರು.

ಇದನ್ನೂ ಓದಿ: ಸಿದ್ದಾಪುರದ ತಮ್ಮಣ್ಣ ಬೀಗಾರ್​ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.