ETV Bharat / state

ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು: ಪ್ರಮೋದ್ ಮುತಾಲಿಕ್

author img

By

Published : Sep 19, 2022, 10:55 PM IST

Updated : Sep 19, 2022, 11:03 PM IST

pramod-muthalik
ಪ್ರಮೋದ್ ಮುತಾಲಿಕ್

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರಕಾರ ಯಾವುದೇ ರೀತಿಯಲ್ಲಿ ಮೋಸ ಮಾಡಬಾರದು. ಮೋಸ ನಡೆದದ್ದೇ ಆದಲ್ಲಿ ಮುಖ್ಯಮಂತ್ರಿಗೇ ಮಸಿ ಎರಚುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಸುಳ್ಯ(ದಕ್ಷಿಣ ಕನ್ನಡ) : ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಲೇ ಬೇಕು. ಈಗಾಗಲೇ ಮುಖ್ಯಮಂತ್ರಿ ಪ್ರವೀಣ್ ಕುಟುಂಬಕ್ಕೆ ನೀಡಿರುವ ಆಶ್ವಾಸನೆ ಕೂಡಲೇ ಈಡೇರಿಸಬೇಕು. ಯಾವುದೇ ಕಾರಣಕ್ಕೂ ಪ್ರವೀಣ್ ಕುಟುಂಬಕ್ಕೆ ಅನ್ಯಾಯ ಹಾಗೂ ಮೋಸ ಆಗಬಾರದು. ಆ ತರಹ ಏನಾದರೂ ಆದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕುಳಿತು, ಮುಖ್ಯಮಂತ್ರಿಗಳ ಮುಖಕ್ಕೇ ಮಸಿ ಬಳಿಯುತ್ತೇವೆ ಎಂದು ಹಿಂದೂ ಸಂಘಟನಾ ಮುಖಂಡ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಅವರು, ಬೆಳ್ಳಾರೆಯಲ್ಲಿ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ ಮೃತ ಪ್ರವೀಣ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾಧ್ಯಮದೊಂದಿಗೆ ಮಾತನಾಡಿದರು. ಭಾರತದಲ್ಲಿ ಒಟ್ಟಾರೆ ಮುಸ್ಲಿಂ ರಾಕ್ಷಸ ಪ್ರವೃತ್ತಿಯ ಜನರು ಹೆಚ್ಚಾಗುತ್ತಿದ್ದಾರೆ. ಪ್ರವೀಣ್ ಹತ್ಯೆ ನಿಜಕ್ಕೂ ಅತ್ಯಂತ ನೀಚ ಮತ್ತು ಪೈಶಾಚಿಕ ಕೃತ್ಯ. ಯಾವುದೇ ಕಾರಣಕ್ಕೂ ಈ ಆರೋಪಿಗಳಿಗೆ ಜಾಮೀನು ಸಿಗಬಾರದು ಎಂದರು.

ಅನ್ಯಾಯವಾದರೆ ಮಸಿ ಬಳಿಯಲಾಗುವುದು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈಗಾಗಲೇ ಘೋಷಣೆ ಮಾಡಿರುವ ಪ್ರಕಾರ ಪ್ರವೀಣ್ ಪತ್ನಿಗೆ ನೀಡಲು ಉದ್ದೇಶಿಸಿರುವ ಸರಕಾರಿ ಕೆಲಸ ಕೂಡಲೇ ಅವರಿಗೆ ನೀಡಿ ಈ ಕುಟುಂಬಕ್ಕೆ ನೆರವಾಗಬೇಕು. ಯಾವುದೇ ಕಾರಣಕ್ಕೂ ಪ್ರವೀಣ್ ಕುಟುಂಬಕ್ಕೆ ಅನ್ಯಾಯ ಹಾಗೂ ಮೋಸ ಆಗಬಾರದು. ಏನಾದರೂ ಪರೇಶ್ ಮೆಸ್ತಾ, ಶರತ್ ಮಡಿವಾಳ ಕುಟುಂಬಕ್ಕೆ ಮಾಡಿದ ತರಹ ಅನ್ಯಾಯ ಇನ್ನೂ ಮುಂದಕ್ಕೆ ಈ ಕುಟುಂಬಕ್ಕೆ ಸರಕಾರ ಮಾಡಬಾರದು. ಆ ತರಹ ಏನಾದ್ರೂ ಆದಲ್ಲಿ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡಿ ಮುಖ್ಯಮಂತ್ರಿ ಮುಖಕ್ಕೇ ಮಸಿ ಬಳಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು

ಮತಾಂತರ ನಿಷೇಧ ಸ್ವಾಗತಾರ್ಹ : ನೆಟ್ಟಾರು ಮನೆಗೆ ಭೇಟಿ ನಂತರ ಪುತ್ತೂರಿನ ಪತ್ರಿಕಾ ಭವನದಲ್ಲಿ ಮಾತನಾಡಿದ ಮುತಾಲಿಕ್​, ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ಮತಾಂತರ ನಿಷೇಧ ಜಾರಿಗೆ ತರುತ್ತಿರುವುದು ಸ್ವಾಗತಾರ್ಹ. ದೇಶದಲ್ಲಿ ಸುಮಾರು ಆರು ಸಾವಿರ ಅನಧೀಕೃತ ಚರ್ಚ್‍ಗಳಿದ್ದು, ಈ ಮೂಲಕ ಬುಡಕಟ್ಟು ಜನಾಂಗ, ದಲಿತರ ಮತಾಂತರ ಪ್ರಕ್ರಿಯೆಗಳು ನಡೆಯುತ್ತಿದೆ. ತಕ್ಷಣ ಈ ಅನಧಿಕೃತ ಚರ್ಚ್‍ಗಳ ಧ್ವಂಸಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ವಕ್ಫ್ ಬೋರ್ಡ್‍ಗಳನ್ನು ರದ್ದು ಮಾಡಿ : ತಮಿಳುನಾಡಿನಲ್ಲಿ ವಕ್ಫ್ ಬೋರ್ಡ್ ಹಿಂದೂಗಳ ಮಠ ಮಂದಿರ ಜಾಗ, ಮನೆಗಳನ್ನು ತನ್ನ ಜಾಗವೆಂದು ಪ್ರಕಟಣೆ ನೀಡಿದೆ. ಅದು ವಕ್ಫ್ ಬೋರ್ಡ್ ಅಲ್ಲ, ಡೇಂಜರ್ ಬೋರ್ಡ್. ಕೇಂದ್ರ ಸರಕಾರ ಇಡೀ ದೇಶದಲ್ಲಿ ವಕ್ಫ್ ಬೋರ್ಡ್‍ಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಪಿಎಫ್‍ಐ, ಎಸ್‍ಡಿಪಿಐ ಬ್ಯಾನ್​ಗೆ ಆಗ್ರಹ : ಈಗಾಗಲೇ ಪಿಎಫ್‍ಐ, ಎಸ್‍ಡಿಪಿಐ ಬ್ಯಾನ್ ಕುರಿತು ಸರಕಾರ ಚಿಂತನೆ ನಡೆಸಿದ್ದು, ಸರಕಾರದ ಶೀಘ್ರ ಬ್ಯಾನ್ ಮಾಡಬೇಕು. ಇಲ್ಲದಿದ್ದಲ್ಲಿ ಇಡೀ ರಾಜ್ಯದಲ್ಲಿ ಹಿಂದೂ ಸಂಘಟನೆಗಳಿಂದ ಬ್ಯಾನ್ ಆಂದೋಲ ನಡೆಸುತ್ತೇವೆ. ಪಿಎಫ್‍ಐ, ಎಸ್‍ಡಿಪಿಐಯನ್ನು ತನ್ನ ರಾಜಕೀಯ ಲಾಭಕ್ಕೋಸ್ಕರ ಬಿಜೆಪಿ ಪ್ರೋತ್ಸಾಹಿಸುತ್ತಿದ್ದು, ನಿಜವಾಗಿ ಇದು ಕ್ಯಾನ್ಸರ್​ನ್ನು ಬೆಳೆಸಿದಂತೆ. ತಕ್ಷಣ ಬ್ಯಾನ್ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ನುಂಗಿ ಹಾಕುವುದಂತೂ ಗ್ಯಾರಂಟಿ ಎಂದು ಅವರು ಹೇಳಿದರು.

ಇದನ್ನೂ ಓದಿ : ಜನಸ್ಪಂದನ ಕಾರ್ಯಕ್ರಮ.. ಪ್ರವೀಣ್ ನೆಟ್ಟಾರು ಮನೆಯವರಿಗೆ ಉದ್ಯೋಗ: ಬೊಮ್ಮಾಯಿ ಘೋಷಣೆ

Last Updated :Sep 19, 2022, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.