ETV Bharat / state

ರಾಜ್ಯದಲ್ಲಿ ಕಾಂಗ್ರೆಸ್​ ಪರ ಅಲೆ, ತಿಂಗಳಾಂತ್ಯದೊಳಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಎಂ ವೀರಪ್ಪ ಮೊಯ್ಲಿ

author img

By

Published : Mar 5, 2023, 9:45 PM IST

ಎಂ ವೀರಪ್ಪ ಮೊಯಿಲಿ
ಎಂ ವೀರಪ್ಪ ಮೊಯಿಲಿ

ರಾಜ್ಯಾದ್ಯಂತ ಕಾಂಗ್ರೆಸ್​ ಪರವಾದ ವಾತಾವರಣವಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ ಎಂ ವೀರಪ್ಪ ಮೊಯ್ಲಿ ಅವರು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಡಾ ಎಂ ವೀರಪ್ಪ ಮೊಯ್ಲಿ

ಮಂಗಳೂರು : ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ತಿಂಗಳಾಂತ್ಯದೊಳಗೆ ಬಿಡುಗಡೆಯಾಗಲಿದೆ ಎಂದು ಎಐಸಿಸಿ ಚುನಾವಣಾ ಸಮಿತಿ ಸದಸ್ಯ, ಮಾಜಿ ಮುಖ್ಯಮಂತ್ರಿ ಡಾ ಎಂ ವೀರಪ್ಪ ಮೊಯ್ಲಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಗೆಲ್ಲುವ ಅಭ್ಯರ್ಥಿಗಳ ಕುರಿತು ಎಐಸಿಸಿ ಮತ್ತು ಕೆಪಿಸಿಸಿ ಹಂತದಲ್ಲಿ ಮೂರ್ನಾಲ್ಕು ಸರ್ವೇ ಪೂರ್ಣಗೊಂಡಿದೆ. ಇದೇ ತಿಂಗಳ 7 ಮತ್ತು 8 ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದೆ. ಬಳಿಕ ಪಟ್ಟಿ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಗೆ ರವಾನೆಯಾಗಲಿದೆ ಎಂದು ತಿಳಿಸಿದರು.

ಅಮಿತ್ ಶಾ ಗುಜರಾತ್​ನಿಂದ ಗಡಿಪಾರು ಆಗಿದ್ದರು- ಮೊಯ್ಲಿ: ರಾಜ್ಯಾದ್ಯಂತ ಕಾಂಗ್ರೆಸ್ ಪರವಾದ ವಾತಾವರಣವಿದೆ. ಬಸವರಾಜ ಬೊಮ್ಮಾಯಿ ರಾಜ್ಯದ ಅತ್ಯಂತ ದುರ್ಬಲ ಮುಖ್ಯಮಂತ್ರಿಯಾಗಿದ್ದಾರೆ. ಪ್ರತಿಯೊಂದಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ಕಡೆ ಕೈ ತೋರಿಸುತ್ತಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಜೈಲು ಸೇರಿ ಇತಿಹಾಸ ನಿರ್ಮಿಸಿದವರಾಗಿದ್ದಾರೆ. ಅವರಿಗೆ ಮಾರ್ಗದರ್ಶನ ನೀಡುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಅವರು ಜೈಲುವಾಸ ಅನುಭವಿಸಿ ಕೆಲಕಾಲ ಗುಜರಾತ್ ರಾಜ್ಯದಿಂದಲೇ ಗಡಿಪಾರು ಶಿಕ್ಷೆ ಅನುಭವಿಸಿದವರಾಗಿದ್ದಾರೆ ಎಂದು ಮೊಯ್ಲಿ ಲೇವಡಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸೈಕ್ಲೋನ್ ಥರ ರಾಜ್ಯಕ್ಕೆ ಪದೇ ಪದೆ ಬರ್ತಾ ಇದಾರೆ. ತಮ್ಮ ಪಕ್ಷದ ಪರ ಪ್ರಚಾರ ಮಾಡಲು ಅವರು ರಾಜ್ಯಕ್ಕೆ ಬರುವುದರಲ್ಲಿ ತಪ್ಪಿಲ್ಲ. ಆದರೆ ಅವರಿಗೆ ರಾಜ್ಯದ ಸಮಸ್ಯೆ ಬಗ್ಗೆ ಅರಿವಿಲ್ಲ. ಪ್ರಧಾನಿ ಮೋದಿಗೆ ಮಾಧ್ಯಮಗೋಷ್ಟಿ ನಡೆಸುವ, ಮಾಧ್ಯಮ ಪ್ರತಿನಿಧಿಗಳನ್ನು ಎದುರಿಸುವ ಧೈರ್ಯವೂ ಇಲ್ಲ. ಈ ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭ ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರೂ ಮಾಧ್ಯಮಗೋಷ್ಟಿ, ಸಂವಾದ ನಡೆಸುತ್ತಿದ್ದರು ಎಂದು ಹೇಳಿದರು.

ಕರ್ನಾಟಕದಲ್ಲಿ ಹಲವು ಮೂಲ ಸೌಕರ್ಯಗಳ ಸಮಸ್ಯೆಗಳಿವೆ. ಕೃಷ್ಣಾ ನದಿ ನೀರು ಹಂಚಿಕೆ ನ್ಯಾಯಪೀಠದಲ್ಲಿ ಇತ್ಯರ್ಥವಾಗಿ ಹಲವು ವರ್ಷಗಳಾಗಿದೆ. ಆದರೆ ಈವರೆಗೆ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸದೆ ಕರ್ನಾಟಕವನ್ನ ಸತಾಯಿಸುತ್ತಲೇ ಇದೆ. ಕಳೆದ ಎಂಟು ವರ್ಷದ ಅವಧಿಯಲ್ಲಿ ನ್ಯಾಯವಾಗಿ ಬರಬೇಕಾದ ಅನುದಾನ ಹೊರತುಪಡಿಸಿ ಯಾವುದೇ ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಒದಗಿಸಿಲ್ಲ. ಜನರು ಮೋದಿ ಮತ್ತು ಅಮಿತ್ ಶಾ ಬಂದಾಗ ಇದನ್ನು ಕೇಳಬೇಕಾಗಿದೆ ಎಂದು ಅವರ ಹೇಳಿದರು.

40 ಶೇ. ಭ್ರಷ್ಟಾಚಾರ ರಾಜ್ಯದ ಬಿಜೆಪಿಯಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಾ ಇದೆ. ಈ ಹಿಂದೆ ಅವಿಭಜಿತ ದಕ್ಷಿಣ ಕನ್ನಡದ ಶಾಸಕರು ಭ್ರಷ್ಟಾಚಾರದಲ್ಲಿ ಗುರುತಿಸಿಕೊಂಡಿರಲಿಲ್ಲ. ಸಾಂಸ್ಕೃತಿಕವಾಗಿ, ಗುಣದಲ್ಲಿ ಮೇಲ್ಪಂಕ್ತಿಯಲ್ಲಿದ್ದರು. ಆದರೆ ಈ ಅವಧಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರೂ ಭ್ರಷ್ಟರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿಯವರು ಕಮೀಷನ್ ವಸೂಲಿಯಲ್ಲಿ ದೇವಾಲಯವನ್ನು ಕೂಡ ಬಿಟ್ಟಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ದೇವಸ್ಥಾನದ ಕೆಲಸಗಳಿಗಾಗಿ ಕ್ಷೇತ್ರದ ಜನರು ಬೆಂಗಳೂರಿಗೆ ತೆರಳಿ 6.5 ಕೋಟಿ ರೂ.ಅನುದಾನಕ್ಕೆ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಆರಂಭದಲ್ಲಿ ಈ ಬೇಡಿಕೆಯನ್ನು ಹಣ ಇಲ್ಲ ಎಂದು ತಿರಸ್ಕರಿಸಲಾಗಿದೆ. ಬಳಿಕ 20 ಶೇ. ಕಮೀಷನ್ ಒದಗಿಸಿದರೆ ಅನುದಾನ ಒದಗಿಸುವ ಭರವಸೆ ದೊರೆತಿದೆ ಎನ್ನುವ ಕುರಿತು ತಮಗೆ ಖಚಿತ ಮಾಹಿತಿ ಬಂದಿರುವುದಾಗಿ ತಿಳಿಸಿದರು.

ಇದನ್ನೂ ಓದಿ : ರಾಜ್ಯಕ್ಕೆ ಅಗೌರವ ತರುವ ಕೆಲಸ ಬಿಜೆಪಿ ಮಾಡಿದೆ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.