ETV Bharat / state

ಜಲೀಲ್ ಹತ್ಯೆ ಪ್ರಕರಣ.. ಕೂಳೂರು ಮಸೀದಿಯಲ್ಲಿ ಧಪನ್​

author img

By

Published : Dec 25, 2022, 4:29 PM IST

ಮಂಗಳೂರಿನ ಸುರತ್ಕಲ್​ನಲ್ಲಿ ಜಲೀಲ್​ ಹತ್ಯೆ ಪ್ರಕರಣ- ಅಂತಿಮ ಯಾತ್ರೆಗೆ ಹರಿದು ಬಂದ ಜನಸಾಗರ- ಕುಳೂರು ಮಸೀದಿಯಲ್ಲಿ ಮೃತದೇಹ ಧಪನ್​

jalil-murder-case-funeral-of-jalil-at-kuloor-manglore
ಜಲೀಲ್ ಹತ್ಯೆ ಪ್ರಕರಣ..ಕೂಳೂರು ಮಸೀದಿಯಲ್ಲಿ ಧಪನ

ಮಂಗಳೂರು : ಸುರತ್ಕಲ್ ನಲ್ಲಿ ನಿನ್ನೆ ಹತ್ಯೆಯಾದ ಜಲೀಲ್ ಅವರ ಧಪನ ಕಾರ್ಯ ಕೂಳೂರು‌ ಮಸೀದಿಯಲ್ಲಿ ನಡೆಯಿತು. ಶನಿವಾರ ರಾತ್ರಿ ಸುರತ್ಕಲ್ ಕಾಟಿಪಳ್ಳದ ತನ್ನ ಅಂಗಡಿಯಲ್ಲಿದ್ದ ಜಲೀಲ್ ಅವರಿಗೆ ಚೂರಿ ಇರಿದು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.

ಜಲೀಲ್ ಹತ್ಯೆ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ಇಂದು ಭಾರಿ ಜನಸ್ತೋಮ ಸೇರಿತ್ತು. ಎ.ಜೆ ಆಸ್ಪತ್ರೆಯಿಂದ ಇಂದು ಮೃತದೇಹವನ್ನು ಆಂಬ್ಯುಲೆನ್ಸ್ ನಲ್ಲಿ ತಂದು ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆ ಬಳಿಕ ಮೃತದೇಹವನ್ನು ಜಮಾತ್ ಗೆ ಸೇರಿದ ಕೂಳೂರು ಮುಹಿಯ್ಯುದ್ದೀನ್ ಜುಮ್ಮಾ‌ ಮಸೀದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸುವಂತೆ ಪ್ರತಿಭಟನೆ : ಮೃತದೇಹವನ್ನು‌ ಮೆರವಣಿಗೆ ಕೊಂಡೊಯ್ಯುವಾಗ ಸ್ಥಳಕ್ಕೆ ಡಿಸಿ ಆಗಮಿಸಬೇಕೆಂದು ಸ್ಥಳೀಯರು ಪಟ್ಟು ಹಿಡಿದರು. ಜಲೀಲ್ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆಂದು ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ತಡೆದ ಆಕ್ರೋಶಿತ ಗುಂಪು ಧರಣಿ ನಡೆಸಿತು. ಈವರೆಗೆ ಕೊಲೆ ಆರೋಪಿಗಳ ಬಂಧನವಾಗಿಲ್ಲ. ತಕ್ಷಣ ಆರೋಪಿಗಳನ್ನು ಬಂಧಿಸಿ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಜಿಲ್ಲಾಧಿಕಾರಿ ಬರುವವರೆಗೆ ಅಂತ್ಯಸಂಸ್ಕಾರ ನಡೆಸಲ್ಲ ಎಂದು ಧರಣಿನಿರತರು ಪಟ್ಟು ಹಿಡಿದರು. ಪರಿಣಾಮ, ಸ್ಥಳದಲ್ಲಿ ಕೆಲಹೊತ್ತು ಉದ್ವಿಗ್ನ ಪರಿಸ್ಥಿತಿ ಕಂಡುಬಂತು. ತಕ್ಷಣ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಮಧ್ಯಪ್ರವೇಶಿಸಿ ಆಕ್ರೋಶಿತರನ್ನು ಸಮಾಧಾನಪಡಿಸಿದರು. ಬಳಿಕ ಆಕ್ರೋಶಿತ ಗುಂಪು ಧರಣಿಯಿಂದ ಹಿಂದೆ ಸರಿಯಿತು. ಬಳಿಕ ಮಸೀದಿಯಲ್ಲಿ ನಮಾಜ್ ನೆರವೇರಿಸಿ ಧಪನ ಭೂಮಿಯಲ್ಲಿ ಜಲೀಲ್ ಅವರ ಮೃತದೇಹವನ್ನು ಧಪನ ಮಾಡಲಾಯಿತು.

ಘಟನೆ ಹಿನ್ನೆಲೆ : ಶನಿವಾರ ರಾತ್ರಿ ಸುರತ್ಕಲ್​ನಲ್ಲಿ ದುಷ್ಕರ್ಮಿಗಳಿಬ್ಬರು ಕೃಷ್ಣಾಪುರ ನಿವಾಸಿಯಾದ ಜಲೀಲ್ ಎಂಬುವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು. ನೈತಂಗಡಿಯಲ್ಲಿನ ತಮ್ಮ ದಿನಸಿ ಅಂಗಡಿಯಲ್ಲಿದ್ದ ಜಲೀಲ್​ ಮೇಲೆ ಏಕಾಏಕಿ ಆಕ್ರಮಿಸಿದ ಆರೋಪಿಗಳು ಎದೆಯ ಭಾಗಕ್ಕೆ ಚೂರಿಯಿಂದ ಬಲವಾಗಿ ಇರಿದು ಪರಾರಿಯಾಗಿದ್ದರು.

ಚಾಕು ಇರಿತಕ್ಕೊಳಗಾದ ಜಲೀಲ್ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟರು. ಪೋಸ್ಟ್ ಮಾರ್ಟಂ ವ್ಯವಸ್ಥೆಗಾಗಿ ಮೃತದೇಹವನ್ನು ಎ.ಜೆ.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು. ಇಂದು ಬೆಳಗ್ಗೆ ಮೃತದೇಹವನ್ನು ಮನೆಗೆ ತರಲಾಗಿತ್ತು. ಮನೆ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಘಟನೆ ನಡೆದ ಕಾಟಿಪಳ್ಳದಲ್ಲಿ ಬಿಗುವಿನ ವಾತಾವರಣವಿದೆ. ಮುಂಜಾಗ್ರತಾ ಕ್ರಮವಾಗಿ ಸುರತ್ಕಲ್ ವ್ಯಾಪ್ತಿಯಲ್ಲಿ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮುನ್ನೂರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ಕೆಎಸ್ ಆರ್ ಪಿ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರದ ಎಲ್ಲಾ ವ್ಯಾಪಾರ, ವ್ಯವಹಾರ ಸ್ಥಗಿತಗೊಂಡಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಬಸ್ ಸಂಚಾರವೂ ಸ್ಥಗಿತವಾಗಿದೆ.

27ರವರೆಗೆ ನಿಷೇಧಾಜ್ಞೆ : ಜಲೀಲ್ ಹತ್ಯೆಯ ಮುನ್ನೆಚ್ಚರಿಕೆ ಕ್ರಮವಾಗಿ ಸುರತ್ಕಲ್ ಸುತ್ತಮುತ್ತಲಿನ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಂಗಳೂರು ನಗರ ಪೊಲೀಸ್ ‌ಕಮೀಷನರೇಟ್ ವ್ಯಾಪ್ತಿಯ ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಮಂಗಳೂರು ‌ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಆದೇಶಿಸಿದ್ದಾರೆ.

ಇಂದಿನಿಂದ ಡಿಸೆಂಬರ್ 27ರ ಮುಂಜಾನೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಸರ್ಕಾರದಿಂದ ಮತ್ತು ಸರ್ಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭಗಳಿಗಿದು ಅನ್ವಯಿಸುವುದಿಲ್ಲ. ಕ್ರಿಸ್ಮಸ್ ಆಚರಣೆ, ಧಾರ್ಮಿಕ ಕಾರ್ಯಕ್ರಮ ಮತ್ತು ಅಗತ್ಯ ತುರ್ತು ಸೇವೆಗಳಿಗೂ ನಿಯಮ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ : ಜಲೀಲ್ ಮೃತದೇಹದ ಅಂತಿಮ ದರ್ಶನಕ್ಕೆ ಜನಸ್ತೋಮ, ಸ್ಥಳಕ್ಕೆ ಡಿಸಿ ಬರಬೇಕೆಂದು ಪಟ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.