ಬಂಟ್ವಾಳ (ದಕ್ಷಿಣ ಕನ್ನಡ) : ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಲಸಿಕೆ ಕುರಿತು ಹೆಚ್ಚಿನ ಉತ್ಸಾಹವಿದೆ. ಸಮೀಪದ ಆರೋಗ್ಯ ಕೇಂದ್ರಗಳಿಗೆ 45 ವರ್ಷಕ್ಕೆ ಮೇಲ್ಪಟ್ಟವರು ತೆರಳಿ ಚುಚ್ಚು ಮದ್ದು ಹಾಕಿಸಿಕೊಂಡು ಬರುತ್ತಿದ್ದಾರೆ. ಇವರಿಗೆ ಪ್ರೋತ್ಸಾಹದಾಯಕವಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘ ನಡೆಸುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಿಂದ ಉಚಿತ ಬಸ್ ನೀಡಲಾಗಿದೆ.
ಸ್ಥಳೀಯ ಆಶಾ ಕಾರ್ಯಕರ್ತೆಯರ ನೆರವಿನಿಂದ ವಿದ್ಯಾಕೇಂದ್ರವಿರುವ ಹಾಗೂ ಸುತ್ತಮುತ್ತಲಿನ ಬಾಳ್ತಿಲ, ಗೋಳ್ತಮಜಲು, ಅಮ್ಟೂರು ಗ್ರಾಮಗಳಿಂದ ನೀರಪಾದೆಯಲ್ಲಿ ಇರುವ ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳುವವರ ಮಾಹಿತಿ ಸಂಗ್ರಹಿಸಿ, ಯಾರಿಗೆ ತೆರಳಲು ಅನಾನುಕೂಲವಾಗುತ್ತದೆಯೋ ಅವರಿಗೆ ಶಿಕ್ಷಣ ಸಂಸ್ಥೆಯಿಂದ ಉಚಿತ ಬಸ್ ಒದಗಿಸಲಾಗಿದೆ.
48 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯದ ಬಸ್ನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಹಾಗೂ ಕೊರೊನಾದ ಎಲ್ಲಾ ನಿಯಮಗಳನ್ನು ಪಾಲಿಸಿ, ಈ ಗ್ರಾಮಗಳಿಂದ ನಿರ್ದಿಷ್ಟ ಸಮಯದಲ್ಲಿ ಅವರನ್ನು ಕರೆದುಕೊಂಡು ನೀರಪಾದೆಯ ಆರೋಗ್ಯ ಕೇಂದ್ರಕ್ಕೆ ತೆರಳಿ, ಲಸಿಕೆ ಹಾಕಿದ ಬಳಿಕ ಅವರನ್ನು ಮನೆಯವರೆಗೆ ಬಿಡಲಾಗುತ್ತಿದೆ. ಹೀಗೆ, ಸುಮಾರು 6 ಟ್ರಿಪ್ಗಳನ್ನು ಮಾಡಲಾಗಿದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆಯೂ ಇದೆ.
ಈಗಾಗಲೇ ಕಲ್ಲಡ್ಕ ಸಂಸ್ಥೆಯ ಬಸ್ನಲ್ಲಿ ತೆರಳಿದ ಸುಮಾರು 400ರಷ್ಟು ಮಂದಿ ಬಾಳ್ತಿಲದಲ್ಲಿ ಲಸಿಕೆ ಪಡೆದಿದ್ದಾರೆ. ಇದನ್ನು ಗಮನಿಸಿಕೊಂಡು ಸ್ಥಳೀಯ ಉತ್ಸಾಹಿ ಸ್ವಯಂ ಸೇವಾ ಸಂಸ್ಥೆಗಳವರು ಕೂಡ ಉಚಿತ ವಾಹನಗಳನ್ನು ಒದಗಿಸುವ ಮೂಲಕ ಮಾದರಿಯಾಗುತ್ತಿದ್ದಾರೆ.
ತರಗತಿಯ ಕೊಠಡಿಯೊಳಗೆ ಪಾಠವನ್ನು ಕಲಿಸುವುದರ ಜತೆಗೆ ಸಮಾಜಕ್ಕೆ ನಮ್ಮಿಂದೇನಾದರೂ ಕೊಡುಗೆ ನೀಡಬೇಕು ಎಂಬ ಪರಿಕಲ್ಪನೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾಸಂಸ್ಥೆ ನಮ್ಮದು. ಕೋವಿಡ್ ನಿರ್ಮೂಲನೆಗೊಳಿಸುವ ಭಾಗವಾಗಿ ಲಸಿಕೆ ನೀಡಲು ಆರೋಗ್ಯ ಕೇಂದ್ರಕ್ಕೆ ತೆರಳಲು ಅನಾನುಕೂಲವಾಗುವ ಬಡವರಿಗಾಗಿ ವಿದ್ಯಾಸಂಸ್ಥೆಯಿಂದ ಉಚಿತ ಬಸ್ ಸೇವೆ ನೀಡಲಾಗಿದೆ. ಇದರಿಂದ ಸುತ್ತಮುತ್ತಲಿನ ಮೂರು ಗ್ರಾಮಗಳ ಜನರಿಗೆ ಪ್ರಯೋಜನವಾಗಿದೆ ಅಂತಾರೆ ವಿವೇಕಾನಂದ ವಿದ್ಯಾವರ್ಧಕ ಸಂಸ್ಥೆ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್.