ETV Bharat / state

ನೈತಿಕ ಪೊಲೀಸ್ ಗಿರಿ ಪ್ರಕರಣ: ಮಂಗಳೂರಿನ ಮೂವರಿಗೆ ಗಡಿಪಾರು ನೋಟಿಸ್​

author img

By

Published : Jul 21, 2023, 3:29 PM IST

Updated : Jul 21, 2023, 8:15 PM IST

ಮಂಗಳೂರು
ಮಂಗಳೂರು

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್​ ನೀಡಲಾಗಿದೆ.

ಮಂಗಳೂರು: ಮಂಗಳೂರಿನಲ್ಲಿ ನಡೆದ ಎರಡು ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮೂವರು ಬಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ನೀಡಲಾಗಿದೆ. ಬಾಲು ಅತ್ತಾವರ, ಗಣೇಶ್ ಅತ್ತಾವರ, ಜಯಪ್ರಶಾಂತ್ ಶಕ್ತಿನಗರ ಎಂಬ ಮೂವರು ಬಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ನೀಡಲಾಗಿದೆ.

ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿ ನೋಟಿಸ್​ ನೀಡಲಾಗಿದ್ದು, ಇಂದು ಕಾ‌ನೂನು ಸುವ್ಯವಸ್ಥೆ ಡಿಸಿಪಿ ಎದುರು ಹಾಜರಾಗಲು ಸೂಚನೆ ನೀಡಲಾಗಿದೆ. ಬಳಿಕ ಮೂವರನ್ನು ಅಧಿಕೃತವಾಗಿ ಒಂದು ವರ್ಷಗಳ ಕಾಲ ಗಡಿಪಾರು ಆದೇಶ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ಎರಡು ನೈತಿಕ ಪೊಲೀಸ್​ ಗಿರಿ ಕೇಸ್​ನಲ್ಲಿ ಮೂವರು ಭಾಗಿಯಾಗಿದ್ದರು. ಸುಲ್ತಾನ್ ಜ್ಯುವೆಲ್ಲರಿ ಹಾಗೂ ಮರೋಳಿ ಹೋಳಿ ಆಚರಣೆ ವೇಳೆ ನೈತಿಕ ಪೊಲೀಸ್ ಗಿರಿ ನಡೆಸಿದ್ದರು. ಹೀಗಾಗಿ ಸ್ಥಳೀಯ ಠಾಣೆಗಳ ಇನ್ಸ್‌ಪೆಕ್ಟರ್​ಗಳಿಂದ ಗಡಿಪಾರಿಗೆ ವರದಿ ನೀಡಲಾಗಿದೆ.

ಹೀಗಾಗಿ, ಅಧಿಕೃತವಾಗಿ ಕಾನೂನು ಪ್ರಕಾರ ಗಡಿಪಾರು ಅಸ್ತ್ರ ಪ್ರಯೋಗ ಮಾಡಲಾಗಿದ್ದು, ಇದೀಗ ನೋಟಿಸ್​ ನೀಡಿ ಗಡಿಪಾರು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಅವರು, ರಿಪಿಟೆಡ್ ಕ್ರೈಂ ಮಾಡುತ್ತಿರುವ ಅಪರಾಧಿಗಳಿಗೆ ಗಡಿಪಾರು ಮಾಡುವ ಪ್ರಕ್ರಿಯೆ ಮಾಡಲಾಗುತ್ತಿದೆ. ಈಗಾಗಲೇ 60 ಮಂದಿಯನ್ನು ಗಡಿಪಾರು ಮಾಡಲಾಗಿದೆ. ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಮೂವರಿಗೆ ನೋಟಿಸ್ ನೀಡಲಾಗಿದ್ದು, ಗಡಿಪಾರು ಪ್ರಕ್ರಿಯೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವರದಿ ಸಲ್ಲಿಸಿದ ಪೊಲೀಸ್​ ನಿರೀಕ್ಷಕರು: ಆದುದರಿಂದ ಸಮಾಜದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಎದುರುದಾರನನ್ನು ಕಾನೂನಿನ ಚೌಕಟ್ಟಿನೊಳಗೆ ಹದ್ದು ಬಸ್ತಿನಲ್ಲಿಡಬೇಕಾಗಿದೆ. ಹೀಗಾಗಿ ಎದುರುದಾರನನ್ನು ಆತನ ಅಪರಾಧಿಕ ಚಟುವಟಿಕೆಗಳ ತಾಣದಿಂದ ಮತ್ತು ಅಪರಾಧ ಹಿನ್ನಲೆಯುಳ್ಳ ಆತನ ಸಹಚರರಿಂದ ದೂರ ಇಟ್ಟು, ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರ ಜಿಲ್ಲೆಗೆ ಗಡಿಪಾರು ಮಾಡುವುದು ಸೂಕ್ತ ಹಾಗೂ ಅನಿವಾರ್ಯವಾಗಿರುತ್ತದೆ ಎಂದು ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ವರದಿ ಸಲ್ಲಿಸಿದ್ದಾರೆ.

ಅರ್ಜಿದಾರರು ಸಲ್ಲಿಸಿರುವ ವರದಿಯ ಸಾರಾಂಶ ಮತ್ತು ದಾಖಲಾತಿಗಳನ್ನು ಪರಿಶೀಲಿಸಿದಾಗ, ಎದುರುದಾರ ಎಸಗಿರುವ ಅಪರಾಧ ಕೃತ್ಯಗಳು ಅರ್ಜಿದಾರರು ಸಲ್ಲಿಸಿರುವ ವರದಿಗೆ ಪೂರಕವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಎದುರುದಾರರ ಮೇಲೆ ಮಾಡಿರುವ ಆಪಾದನೆಗಳ ಆಧಾರದ ಮೇಲೆ ನಿಮ್ಮ ವಿರುದ್ಧ ವಿಚಾರಣೆ ಕೈಗೊಂಡು ನಿಮ್ಮನ್ನು ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರ ಜಿಲ್ಲೆಗೆ ಒಂದು ವರ್ಷದ ಅವಧಿಗೆ ಏಕೆ ಗಡಿಪಾರು ಮಾಡಬಾರದು? ಎಂದು ಕಾರಣ ಕೇಳಿ ನೋಟಿಸ್​ ನೀಡಲಾಗಿದೆ.

ಅರ್ಜಿದಾರರು ನಿಮ್ಮ ಮೇಲೆ ಆಪಾದಿಸಿರುವ ಮೇಲ್ಕಂಡ ಆರೋಪಗಳಿಗೆ ಹೊರಡಿಸಿರುವ ಈ ಕಾರಣ ಕೇಳುವ ಆದೇಶಕ್ಕೆ ನೀವು ದಿನಾಂಕ: 21-07-2023 ರಂದು ಅಥವಾ ಅದರ ಒಳಗಾಗಿ ಈ ನ್ಯಾಯಾಲಯಕ್ಕೆ ಹಾಜರಾಗಿ, ವಿವರಣೆಯನ್ನು ನೀಡಬೇಕು ಎಂದು ಮೂವರಿಗೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಮತ್ತು ಉಪ ಪೊಲೀಸ್​ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ಮಂಗಳೂರು ನಗರ, ಅಂಶುಕುಮಾರ್ ಈ ನೋಟಿಸ್​ ಕಳುಹಿಸಿದ್ದಾರೆ.

ಮುಚ್ಚಳಿಕೆ ಅವಧಿಯಲ್ಲಿರುವಾಗ ಎರಡು ಅಪರಾಧ ಕೃತ್ಯಗಳಲ್ಲಿ ಭಾಗಿ: ಬಾಲಚಂದ್ರ ಮತ್ತು ಗಣೇಶ್ ಅತ್ತಾವರ ಅವರ ಮೇಲೆ ತಲಾ 5 ಪ್ರಕರಣಗಳು ಮತ್ತು ಜಯಪ್ರಶಾಂತ್ ಈತನ ಮೇಲೆ 7 ಪ್ರಕರಣಗಳು ದಾಖಲಾಗಿದೆ. ಇವರುಗಳು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದರಿಂದ ಯಾವುದೇ ಅಪರಾಧ ಚಟುವಟಕೆಗಳಲ್ಲಿ ಭಾಗಿಯಾಗದಂತೆ ಷರತ್ತು ಬದ್ಧ ಮುಚ್ಚಳಿಕೆ ಪಡೆದುಕೊಂಡಿದ್ದರೂ, ಇವರುಗಳು ಮುಚ್ಚಳಿಕೆ ಅವಧಿಯಲ್ಲಿರುವಾಗ ಎರಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು.

ಮುಚ್ಚಳಿಕೆ ಷರತ್ತುಗಳನ್ನು ಉಲ್ಲಂಘಿಸಿರುವುದರಿಂದ ಇವರುಗಳ ಮುಚ್ಚಳಿಕೆಯನ್ನು ಮುಟ್ಟುಗೋಲು ಹಾಕಿಕೊಂಡು ಇವರುಗಳಿಗೆ ದಂಡ ವಿಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ. ಇವರುಗಳು ಪುನಃ ಇದೇ ರೀತಿ ಅಪರಾಧ ಕೃತ್ಯಗಳನ್ನು ನಡೆಸಿ ಸಾರ್ವಜನಿಕ ಶಾಂತಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆ ಬಗ್ಗೆ ಸಾಕಷ್ಟು ಗುಪ್ತ ಮಾಹಿತಿ ಲಭ್ಯವಾಗಿರುವುದರಿಂದ ಮುಂಜಾಗ್ರತ ಕ್ರಮಕ್ಕಾಗಿ ಇವರುಗಳನ್ನು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಿಂದ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರ ಜಿಲ್ಲೆಗೆ ಗಡಿಪಾರು ಮಾಡುವಂತೆ ಸಂಬಂಧಪಟ್ಟ ಪೊಲೀಸ್ ಠಾಣಾಧಿಕಾರಿಯವರು ವರದಿ ಸಲ್ಲಿಸಿದ್ದು, ಅದರಂತೆ ಇವರುಗಳ ಮೇಲೆ ಕಾನೂನು ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.

ಗಡಿಪಾರು ಮಾಡಿ ಆದೇಶ: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿರುವ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಆರೋಪಿಗಳನ್ನು ಗುರುತಿಸಿ ಈಗಾಗಲೇ ಒಟ್ಟು 62 ರೌಡಿ ಶೀಟರ್​ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಅಲ್ಲದೆ ಪ್ರಸ್ತುತ ವರ್ಷದಲ್ಲಿ 987 ವ್ಯಕ್ತಿಗಳಿಂದ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ದಂಡ ಪ್ರಕ್ರಿಯೆ ಸಂಹಿತೆಯನ್ವಯ ಷರತ್ತು ಬದ್ಧ ಮುಚ್ಚಳಿಕೆಯನ್ನು ಪಡೆದುಕೊಳ್ಳಲಾಗಿದೆ.

ಅಲ್ಲದೆ ಮುಚ್ಚಳಿಕೆಯ ಷರತ್ತುಗಳನ್ನು ಉಲ್ಲಂಘಿಸಿದವರ ವಿರುದ್ಧ ಪ್ರಸ್ತುತ ವರ್ಷದಲ್ಲಿ 12 ಜನರ ಮುಚ್ಚಳಿಕೆಯನ್ನು ಮುಟ್ಟುಗೋಲು ಹಾಕಿಕೊಂಡು ದಂಡದ ಜೊತೆಗೆ ನ್ಯಾಯಾಂಗ ಬಂಧನವನ್ನೂ ವಿಧಿಸಲಾಗಿರುತ್ತದೆ. ಹಾಗೂ ಪದೇ ಪದೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾ ಪೊಲೀಸರ ಆದೇಶಗಳನ್ನು ಪಾಲಿಸದ ರೌಡಿ ಶೀಟರ್​​ಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಉದ್ದೇಶದಿಂದ ಗಡಿಪಾರು/ಗೂಂಡಾ ಕಾಯ್ದೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಕಾನೂನು ಕ್ರಮಗಳ ಪ್ರಕ್ರಿಯೆಯಲ್ಲಿ ಆರೋಪಿಗಳ ಅಪರಾಧ ಹಿನ್ನಲೆ ಮತ್ತು ಚಟುವಟಿಕೆಯನ್ನು ಮಾತ್ರ ಪರಿಗಣಿಸುತ್ತಿದೆ. ಹೊರತುಪಡಿಸಿ ಯಾವುದೇ ಧರ್ಮ, ಜಾತಿ, ಸಂಘಟನೆ ಅಥವಾ ಪಕ್ಷ ಆಧಾರಿತವಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಈ ಕಾನೂನು ಪ್ರಕ್ರಿಯೆಯು ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯ ಸದುದ್ದೇಶದಿಂದ ನಡೆಸಲಾಗುತ್ತಿದೆ. ಯಾರು ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರಿಸುತ್ತಾರೊ ಅವರ ವಿರುದ್ಧ ಈ ಕಾನೂನು ಪ್ರಕ್ರಿಯೆಯು ನಿರಂತರವಾಗಿ ಮುಂದುವರಿಯತ್ತದೆ.

ಇದನ್ನೂ ಓದಿ: ನೈತಿಕ ಪೊಲೀಸ್ ಗಿರಿ: ಪ್ರಕರಣ ದಾಖಲಾಗುತ್ತಿದ್ದಂತೆ ಇಬ್ಬರನ್ನ ಬಂಧಿಸಿದ ದಾವಣಗೆರೆ ಪೊಲೀಸರು.. "ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೇವೆ" ಎಂದ ಎಸ್​ಪಿ

Last Updated :Jul 21, 2023, 8:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.