ETV Bharat / state

ಮಂಗಳೂರು ಆಟೋ ಸ್ಫೋಟ ಪ್ರಕರಣ: ಬಾಂಬ್ ಸ್ಕ್ವಾಡ್, ಶ್ವಾನದಳದಿಂದ ತನಿಖೆ

author img

By

Published : Nov 20, 2022, 10:26 AM IST

Updated : Nov 20, 2022, 4:49 PM IST

bomb-squad-inspected-in-mangaluru-auto-blast-case-place
ಮಂಗಳೂರು ಆಟೋ ಸ್ಫೋಟ ಪ್ರಕರಣ

ಮಂಗಳೂರಿನ ಗರೋಡಿ ಬಳಿ ಸಂಚರಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಉತ್ತರ ಪ್ರದೇಶ ಮೂಲದ ಕಾರ್ಮಿಕ ಎನ್ನಲಾದ ವ್ಯಕ್ತಿ ನಿನ್ನೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಮಂಗಳೂರು: ಮಂಗಳೂರಿನ ಗರೋಡಿಯಲ್ಲಿ ಶನಿವಾರ ಸಂಜೆ ಉಂಟಾದ ನಿಗೂಢ ಸ್ಫೋಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅನುಮಾನ ಮೂಡಿದೆ. ಘಟನಾ ಸ್ಥಳಕ್ಕೆ ಇಂದು ಬಾಂಬ್ ಸ್ಕ್ವಾಡ್, ಶ್ವಾನದಳ ಆಗಮಿಸಿ ತನಿಖೆ ನಡೆಸಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

ಗರೋಡಿ ಬಳಿ ಸಂಚರಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಉತ್ತರ ಪ್ರದೇಶ ಮೂಲದ ಕಾರ್ಮಿಕ ಎನ್ನಲಾದ ವ್ಯಕ್ತಿ ನಿನ್ನೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿತ್ತು. ಆಟೋದಲ್ಲಿದ್ದ ಪ್ರಯಾಣಿಕ ಹಿಂದಿ ಭಾಷೆ ಮಾತನಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಹುಬ್ಬಳ್ಳಿ ಯುವಕನ ಹೆಸರಿ‌ನ ಆಧಾರ್ ಕಾರ್ಡ್ ಪತ್ತೆಯಾಗಿದೆ. ಆತನಲ್ಲಿದ್ದ ಬಾಕ್ಸ್ ಮತ್ತು ಬ್ಯಾಗ್​ನಿಂದಲೇ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬಾಂಬ್ ಸ್ಕ್ವಾಡ್ ಮತ್ತು ಶ್ವಾನದಳದಿಂದ ತನಿಖೆ

KA 19 AA 8471 ಸಂಖ್ಯೆಯ ದುರ್ಗಾಪರಮೇಶ್ವರಿ ಹೆಸರಿನ ಆಟೋ ರಿಕ್ಷಾದಲ್ಲಿ ಸ್ಪೋಟ ಸಂಭವಿಸಿದೆ. ನಿನ್ನೆ ಸಂಜೆ 4.29ರ ಸುಮಾರಿಗೆ ಘಟನೆ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಭಾರಿ ಪ್ರಮಾಣದಲ್ಲಿ ಹೊಗೆ ಹಬ್ಬಿತ್ತು. ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಬರುತ್ತಿದ್ದ ಆಟೋವನ್ನು‌ ಘಟನಾ ಸ್ಥಳದ 1 ಕಿ.ಮೀ ದೂರದ ನಾಗುರಿ ಬಳಿ ಪ್ರಯಾಣಿಕನೋರ್ವ ಹತ್ತಿದ್ದ. ಸ್ಫೋಟದ ತೀವ್ರತೆಗೆ ಪ್ರಯಾಣಿಕನ ದೇಹದ ಅರ್ಧ ಭಾಗ ಸುಟ್ಟು ಹೋಗಿದೆ. ಆತ ಸದ್ಯ ಗಂಭೀರ ಸ್ಥಿತಿಯಲ್ಲಿದ್ದು, ಚಾಲಕ ಸೇರಿ ಇಬ್ಬರಿಗೂ ಖಾಸಗಿ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ನೀಡಲಾಗುತ್ತಿದೆ.

ಆಟೋ ಪ್ರಯಾಣಿಕನ ವಿಚಾರಣೆಯ ವೇಳೆ ಅಸ್ಪಷ್ಟ ಮಾಹಿತಿ ಸಿಕ್ಕಿದ್ದು, ಈತ ಪೊಲೀಸರ ಎದುರು ಗೊಂದಲಕಾರಿ ಹೇಳಿಕೆ ನೀಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಒಮ್ಮೆ ತಾನು ಮೈಸೂರಿನಿಂದ ಬಂದಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದು, ಅಣ್ಣನಿ​​ಗೆ ಕರೆ ಮಾಡಿ ಅಂತ ನಂಬರ್ ನೀಡಿದ್ದಾನೆ. ಆ ನಂಬರ್​​ಗೆ ಕರೆ ಮಾಡಿದಾಗ ಆತ ತನ್ನ ಸಂಬಂಧಿಕನೇ ಅಲ್ಲ ಎಂದು ಆ ವ್ಯಕ್ತಿ ಉತ್ತರಿಸಿದ್ದಾನೆ. ಆತ ತನ್ನ ರೂಮಿನಲ್ಲಿದ್ದ, ಬೆಂಗಳೂರಿಗೆ ಹೋಗುತ್ತೇನೆಂದು ಹೇಳಿ ಹೋಗಿದ್ದ. ಆತನ ಬಗ್ಗೆ ಬೇರೆ ಏನೂ ಗೊತ್ತಿಲ್ಲ ಎಂದು ಫೋನ್​ನಲ್ಲಿ ಹೇಳಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಫೋಟವಾಗಿದ್ದು ಕುಕ್ಕರ್ ಬಾಂಬ್?: ರಿಕ್ಷಾದೊಳಗೆ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕುಕ್ಕರ್ ಸ್ಪೋಟಗೊಂಡಿರುವುದೇ ಕಾರಣ ಎಂಬ ಅನುಮಾನ ಮೂಡಿದೆ. ಈಗಾಗಲೇ ಉನ್ನತ ಮಟ್ಟದ ತನಿಖೆಗೆ ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದು, ಇಂದು ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಸ್ಫೋಟವಾಗಿದ್ದ ಅಟೋವನ್ನು ಕಂಕನಾಡಿ ನಗರ ಠಾಣೆಗೆ ಕೊಂಡೊಯ್ಯಲಾಗಿತ್ತು. ಇಂದು ಮಂಗಳೂರಿನ ನಾಗುರಿ ಬಳಿಯ ಘಟನಾ ಸ್ಥಳಕ್ಕೆ ತಂದಿದ್ದಾರೆ. ಆಟೋ ಸುತ್ತ ಟೇಪ್ ಕಟ್ಟಿ ಭದ್ರಪಡಿಸಲಾಗಿದೆ.

ಇದನ್ನೂ ಓದಿ: ಮಂಗಳೂರು ಆಟೋ ರಿಕ್ಷಾ ಸ್ಫೋಟ ಭಯೋತ್ಪಾದಕ ಕೃತ್ಯ: ಡಿಜಿಪಿ ಪ್ರವೀಣ್​ ಸೂದ್

Last Updated :Nov 20, 2022, 4:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.