ಚಿತ್ರದುರ್ಗ: ವಿಷ ಸೇವಿಸಿದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಸಂಬಂಧಿಕರು, ಗ್ರಾಮಸ್ಥರು ಆರೋಪಿಸಿದ್ದಾರೆ.
ಜಿಲ್ಲೆಯ ಹಿರಿಯೂರು ತಾಲೂಕಿನ ತಳವರಹಟ್ಟಿ ಗ್ರಾಮದ ವಿದ್ಯಾರ್ಥಿನಿ ಕಮಲ ನಿನ್ನೆ ಮಧ್ಯಾಹ್ನ ಕ್ಷುಲಕ ಕಾರಣಕ್ಕೆ ಮನೊಂದು ವಿಷ ಸೇವಿಸಿದ್ದಳು. ಇದನ್ನು ಅರಿತ ಸ್ಥಳೀಯರು ತಕ್ಷಣವೇ ವಿದ್ಯಾರ್ಥಿಯನ್ನು ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಿದ್ದರು.
ಸೂಕ್ತ ಸಮಯಕ್ಕೆ ಸರಿಯಾಗಿ ವೈದ್ಯರು ಚಿಕಿತ್ಸೆ ನೀಡಿದ್ದರೆ ಕಮಲ ಬದುಕುಳಿಯುತ್ತಿದ್ದಳು. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಕೊನೆಯುಸಿರೆಳದಿದ್ದಾಳೆ ಎಂದು ಕುಟುಂಬಸ್ಥರು ದೂರಿದರು.
ಸರ್ಕಾರಿ ಆಸ್ಪತ್ರೆಯಾಗಿದ್ದರೂ ಕೂಡ ಬ್ಲೆಡ್ ಟಿಸ್ಟ್, ಆ ಟೆಸ್ಟ್ ಈ ಟೆಸ್ಟ್ ಅಂತಾ ಹೊರಗಡೆ ಚೀಟಿ ಬರೆದು ಮೂರ್ನಾಲ್ಕು ಸಾವಿರ ಬಿಲ್ ಬರೆದರು. ಎಲ್ಲವನ್ನು ಸೂಕ್ತ ಕಾಲಕ್ಕೆ ಮಾಡಿಸಿದರೂ ತಮ್ಮ ಮಗಳು ಬದುಕಲಿಲ್ಲ ಎಂದು ವೈದ್ಯರ ವಿರುದ್ಧ ದೂರಿದರು. ಈ ವಿಷಯವಾಗಿ ಗ್ರಾಮಸ್ಥರು ಹಾಗೂ ವೈದ್ಯರ ಮಧ್ಯೆ ವಾಗ್ವಾದ ನಡೆಯಿತು.
ಇನ್ನೂ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸರ್ಕಾರಿ ವೈದ್ಯ ಆನಂದ್ ಮಾತನಾಡಿ, ನಮ್ಮ ವೈದ್ಯರು ಮತ್ತು ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದರು.
ಈ ಮಧ್ಯೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ಅಲ್ಲಿದ್ದ ಬೇರೆ ರೋಗಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೋಡಿಕೊಂಡರು.