ETV Bharat / state

ಎಸ್‌ಜೆಎಂ ವಿದ್ಯಾಪೀಠದ ಅಧಿಕಾರ ಹಸ್ತಾಂತರಿಸಿದ ಮುರುಘಾ ಶರಣರು

author img

By

Published : Oct 15, 2022, 9:09 PM IST

murugha-shree-handed-over-the-power-of-sjm-vidyapeetha-to-retired-justice-sb-vastramath
ನಿವೃತ್ತ ನ್ಯಾ.ವಸ್ತ್ರಮಠ ಅವರಿಗೆ ಎಸ್‌ಜೆಎಂ ವಿದ್ಯಾಪೀಠದ ಅಧಿಕಾರ ಹಸ್ತಾಂತರಿಸಿದ ಮುರುಘಾ ಶರಣರು

ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಗೆ ಅಧಿಕಾರ ಪತ್ರ (ಪವರ್ ಆಫ್ ಅಟಾರ್ನಿ) ನೀಡಬೇಕು ಎಂಬ ನಿಯಮ ಇದೆ. ಈ ಪ್ರಕ್ರಿಯೆಯನ್ನು ಹೈಕೋರ್ಟ್‌ ಆದೇಶಕ್ಕೆ ಅನುಗುಣವಾಗಿ ಪೂರ್ಣಗೊಳಿಸಲಾಗಿದೆ. ಕಾರಾಗೃಹದಲ್ಲಿ ನ್ಯಾಯಬದ್ಧವಾಗಿ ಪ್ರಕ್ರಿಯೆ ನಡೆದಿದೆ ಎಂದು ಎಸ್​ಬಿ ವಸ್ತ್ರಮಠ ತಿಳಿಸಿದ್ದಾರೆ.

ಚಿತ್ರದುರ್ಗ: ಮುರುಘಾ ಮಠದ ಅಧೀನದಲ್ಲಿರುವ ಎಸ್‌ಜೆಎಂ ವಿದ್ಯಾಪೀಠದ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕಾರಾಗೃಹದಲ್ಲಿರುವ ಶಿವಮೂರ್ತಿ ಮುರುಘಾ ಶರಣರು ನಿವೃತ್ತ ನ್ಯಾಯಾಧೀಶ ಎಸ್​ಬಿ ವಸ್ತ್ರಮಠ ಅವರಿಗೆ ಹಸ್ತಾಂತರಿಸಿದ್ದಾರೆ.

ಹೈಕೋರ್ಟ್‌ ಅನುಮತಿ ಪಡೆದು ಅಧಿಕಾರ ಪತ್ರ ಹಸ್ತಾಂತರ ಪ್ರಕ್ರಿಯೆಯನ್ನು ಕಾರಾಗೃಹದಲ್ಲಿ ಪೂರ್ಣಗೊಳಿಸಲಾಗಿದೆ. ವಿದ್ಯಾಪೀಠದ ಶಿಕ್ಷಣ ಸಂಸ್ಥೆಗಳ ಆಡಳಿತಾತ್ಮಕ ನಿರ್ಧಾರ, ಚೆಕ್‌ಗಳಿಗೆ ಸಹಿ ಹಾಕುವ ಅಧಿಕಾರವನ್ನು ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯೂ ಆಗಿರುವ ವಸ್ತ್ರಮಠ ಕಾನೂನಾತ್ಮಕವಾಗಿ ಪಡೆದಿದ್ದಾರೆ.

ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಗೆ ಅಧಿಕಾರ ಪತ್ರ (ಪವರ್ ಆಫ್ ಅಟಾರ್ನಿ) ನೀಡಬೇಕು ಎಂಬ ನಿಯಮ ಇದೆ. ಈ ಪ್ರಕ್ರಿಯೆಯನ್ನು ಹೈಕೋರ್ಟ್‌ ಆದೇಶಕ್ಕೆ ಅನುಗುಣವಾಗಿ ಪೂರ್ಣಗೊಳಿಸಲಾಗಿದೆ. ಕಾರಾಗೃಹದಲ್ಲಿ ನ್ಯಾಯಬದ್ಧವಾಗಿ ಪ್ರಕ್ರಿಯೆ ನಡೆದಿದೆ ಎಂದು ಎಸ್​ಬಿ ವಸ್ತ್ರಮಠ ತಿಳಿಸಿದ್ದಾರೆ.

ಇನ್ಮುಂದೆ ಆಡಳಿತ ಸುಲಲಿತ: ಶಿವಮೂರ್ತಿ ಮುರುಘಾ ಶರಣರು ವಿದ್ಯಾಪೀಠದ ಅಧ್ಯಕ್ಷರಾಗಿದ್ದಾರೆ. ಅಧಿಕಾರ ಅವರಲ್ಲಿದ್ದ ಕಾರಣಕ್ಕೆ ವೇತನ ಹಾಗೂ ಇತರ ಆಡಳಿತಾತ್ಮಕ ವಿಚಾರಕ್ಕೆ ತೊಂದರೆ ಉಂಟಾಗಿತ್ತು. ಅವರೇ ಸ್ವ ಇಚ್ಛೆಯಿಂದ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ. ಇನ್ಮುಂದೆ ಆಡಳಿತ ಸುಲಲಿತವಾಗಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಮುರುಘಾ ಶರಣರಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ

ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಶಿವಮೂರ್ತಿ ಮುರುಘಾ ಶರಣರು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದರಿಂದ ವಿದ್ಯಾಪೀಠದ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯ ವೇತನಕ್ಕೆ ತೊಂದರೆ ಉಂಟಾಗಿತ್ತು. ನೌಕರರ ವೇತನದ ಉದ್ದೇಶಕ್ಕೆ ಕಾರಾಗೃಹದಲ್ಲಿ ಚೆಕ್‌ಗಳಿಗೆ ಸಹಿ ಹಾಕಲು ಒಮ್ಮೆ ಮಾತ್ರ ನ್ಯಾಯಾಲಯ ಅವಕಾಶ ಕಲ್ಪಿಸಿತ್ತು. ಪರ್ಯಾಯ ಮತ್ತು ತಾತ್ಕಾಲಿಕ ವ್ಯವಸ್ಥೆ ರೂಪಿಸಿಕೊಳ್ಳಲು 'ಪವರ್ ಆಫ್ ಅಟಾರ್ನಿ' ಚಲಾಯಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಮಾನ್ಯ ಮಾಡಿತ್ತು.

ಪೀಠ ತ್ಯಾಗದ ಪ್ರಶ್ನೆಯೇ ಉದ್ಭವಿಸಿಲ್ಲ: ಶಿವಮೂರ್ತಿ ಮುರುಘಾ ಶರಣರು ಪೀಠ ತ್ಯಾಗ ಮಾಡುವ ಪ್ರಶ್ನೆಯೇ ಉದ್ಭವಿಸಿಲ್ಲ. ಚಿನ್ಮುಲಾದ್ರಿ ಶ್ರೀಜಗದ್ಗುರು ಮುರುಘರಾಜೇಂದ್ರ ಟ್ರಸ್ಟ್‌ಗೆ ಅವರೇ ಅಧ್ಯಕ್ಷರಾಗಿದ್ದು, ಪೀಠಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಎಸ್‌ಬಿ ವಸ್ತ್ರಮಠ ಇದೇ ವೇಳೆ ಸ್ಪಷ್ಟನೆ ನೀಡಿದ್ದಾರೆ.

ಮಠ ಹಾಗೂ ವಿದ್ಯಾಪೀಠ ಎರಡೂ ಪ್ರತ್ಯೇಕವಾಗಿವೆ. ವಿದ್ಯಾಪೀಠದ ಆಡಳಿತಾತ್ಮಕ ವಿಚಾರಕ್ಕೆ ಸಂಬಂಧಿಸಿದ ಅಧಿಕಾರವನ್ನು ಮಾತ್ರ ಹಸ್ತಾಂತರಿಸಲಾಗಿದೆ. ಮಠದ ವಿಚಾರದಲ್ಲಿ ಹಬ್ಬಿರುವ ವದಂತಿಗಳಿಗೆ ಭಕ್ತರು ಕಿವಿಗೊಡುವ ಅಗತ್ಯವಿಲ್ಲ. ಪೀಠಾಧ್ಯಕ್ಷರಾಗಿ ಶರಣರೇ ಮುಂದುವರೆಯಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ : ಆರೋಪಿ ಮರಿಸ್ವಾಮಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.