ETV Bharat / state

ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ದಂಪತಿ; ಕೋರ್ಟ್​ಗೆ ಹಾಜರಾಗಲು ಬರುತ್ತಿದ್ದ ಪತ್ನಿ ಮೇಲೆ ಪತಿಯ ಹಲ್ಲೆ

author img

By ETV Bharat Karnataka Team

Published : Nov 22, 2023, 7:05 PM IST

Assault on wife by husband in Chitradurga
Assault on wife by husband in Chitradurga

ಪತಿಯೊಬ್ಬ ಪತ್ನಿ ಮೇಲೆ ಹಲ್ಲೆ ನಡೆಸಿರುವ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ. ವಿಚ್ಛೇದನಕ್ಕಾಗಿ ದಂಪತಿ ಅರ್ಜಿ ಸಲ್ಲಿಸಿದ್ದರು. ತೀರ್ಪಿನ ನಿಮಿತ್ತ ಇಂದು ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದರು. ಈ ವೇಳೆ ಈ ಘಟನೆ ನಡೆದಿದೆ.

ಪತ್ನಿ ಮೇಲೆ ಪತಿಯ ಹಲ್ಲೆ

ಚಿತ್ರದುರ್ಗ: ಪತಿಯೋರ್ವ ಪತ್ನಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಚಳ್ಳಕೆರೆ ಸಾರಿಗೆ ಬಸ್ ನಿಲ್ದಾಣ ಬಳಿ ಬುಧವಾರ ನಡೆದಿದೆ. ಶಿವಕುಮಾರ್ ಎಂಬಾತ ಹಲ್ಲೆ ಮಾಡಿದ ಪತಿ. ಆಶಾ (26) ಹಲ್ಲೆಗೊಳಗಾಗಿರುವ ಪತ್ನಿ. ಶಿವಕುಮಾರ ಎಳೆನೀರು‌ ಕೊಚ್ಚುವ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಂಭೀರ‌ವಾಗಿ ಗಾಯಗೊಂಡ ಪತ್ನಿ ಆಶಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಬಳಿಕ ಆರೋಪಿ ಶಿವಕುಮಾರನನ್ನು ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿಯು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ತೀರ್ಪಿನ ನಿಮಿತ್ತ ಇಂದು ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದರು. ಚಳ್ಳಕೆರೆ ಸಾರಿಗೆ ಬಸ್ ನಿಲ್ದಾಣ ಬಳಿ ಬರುತ್ತಿದ್ದಂತೆ ಪತ್ನಿಯನ್ನು ತಡೆದ ಶಿವಕುಮಾರ್, ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಹಾಸನ: ಪೊಲೀಸ್ ಠಾಣೆಯಲ್ಲೇ ಪತ್ನಿಯ ಕೊಲೆಗೆ ಯತ್ನಿಸಿದ ಪತಿ

ಪೊಲೀಸರೆದುರೇ ಪತ್ನಿಯ ಹತ್ಯೆಗೆ ಯತ್ನ: ಇತ್ತೀಚೆಗೆ ಪೊಲೀಸ್ ಠಾಣೆಯಲ್ಲೇ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೊಲೆಗೆ ಯತ್ನಿಸಿದ ಘಟನೆ ಹಾಸನದಲ್ಲಿ ನಡೆದಿತ್ತು. ಕಿರುಕುಳದಿಂದ ಬೇಸತ್ತು ಪತ್ನಿ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದ ಸಂದರ್ಭದಲ್ಲಿ ಪತಿ ಹರೀಶ್​ (34) ಆಕೆಯ ಮೇಲೆ ಹಲ್ಲೆ ಮಾಡಿದ್ದ. ಪೊಲೀಸರೆದುರೇ ಪತ್ನಿಯ ಹತ್ಯೆಗೆ ಮುಂದಾದಾಗ ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಆತನ ಕೈಯಲ್ಲಿದ್ದ ಚಾಕು ಕಿತ್ತುಕೊಂಡಿದ್ದರು. ಗಾಯಾಳು ಶಿಲ್ಪಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹರೀಶ್‌ ವಿರುದ್ಧ ಹಾಸನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.