ETV Bharat / state

ಪ್ರೀತಿಸಿ ಮದುವೆಯಾದ ಜೋಡಿಗೆ ಜೀವ ಭಯ: ಪೋಷಕರ ವಿರುದ್ದ ದೂರು ನೀಡಿದ ಪ್ರೇಮಿಗಳು

author img

By

Published : Feb 3, 2023, 10:27 AM IST

Updated : Feb 3, 2023, 12:21 PM IST

ಪೋಷಕರ ವಿರೋಧದ ನಡುವೆಯೂ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾದ ನವ ಜೋಡಿ ಇದೀಗ ಭದ್ರತೆ ನೀಡುವಂತೆ ಕೋರಿ ಚಿಕ್ಕಮಗಳೂರು ಎಸ್‍ಪಿ ಕಚೇರಿ ಮೆಟ್ಟಿಲೇರಿದೆ.

married couple
ನವದಂಪತಿ ಹೇಮಂತ್ ಹಾಗೂ ಅನನ್ಯ

ಜೀವ ಭಯ: ಪೋಷಕರ ವಿರುದ್ದ ದೂರು ನೀಡಿದ ಪ್ರೇಮಿಗಳು

ಚಿಕ್ಕಮಗಳೂರು: ಅವರಿಬ್ಬರು ಶಾಲಾ ದಿನಗಳಿಂದ ಪರಸ್ಪರ ಇಷ್ಟಪಟ್ಟವರು. ಅಲ್ಲದೇ ಬರೋಬ್ಬರಿ 10 ವರ್ಷಗಳ ಕಾಲ ಪ್ರೀತಿಸಿದ ಬಳಿಕ ತಮ್ಮ ಸಂಬಂಧಕ್ಕೆ ಮದುವೆ ಅಧಿಕೃತ ಮುದ್ರೆ ಒತ್ತಲು ರೆಡಿಯಾಗಿದ್ದರು. ಆದರೆ, ಹುಡುಗಿಯ ಕುಟುಂಬ ಮಾತ್ರ ಮದುವೆಗೆ ಒಪ್ಪಿರಲಿಲ್ಲ. ‌ಕುಟುಂಬಸ್ಥರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಜೋಡಿಗೆ ಇದೀಗ ಜೀವ ಭಯ ಶುರುವಾಗಿದೆ. ಹಾಗಾಗಿ ನವದಂಪತಿ ಭದ್ರತೆ ನೀಡುವಂತೆ ಕೋರಿ ಚಿಕ್ಕಮಗಳೂರು ಎಸ್‍ಪಿ ಕಚೇರಿ ಮೆಟ್ಟಿಲು ಏರಿದ್ದಾರೆ.

ಶಾಲಾ ಹಂತದಿಂದಲೇ ಅರಳಿದ ಪ್ರೀತಿ: ನವದಂಪತಿ ಹೇಮಂತ್ ಹಾಗೂ ಅನನ್ಯ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ನಿವಾಸಿಗಳು. ಮಲ್ಲೇನಹಳ್ಳಿ ಗ್ರಾಮದ ಹೇಮಂತ್ ಮತ್ತು ಲಕ್ಷ್ಮಿಸಾಗರ ಗ್ರಾಮದ ಅನನ್ಯ ತರೀಕೆರೆ ಪಟ್ಟಣದಲ್ಲಿ ಶಾಲೆಯಲ್ಲಿ ಓದುತ್ತಿರುವಾಗಲೇ ಪರಸ್ಪರ ಪ್ರೀತಿಸಿದ್ದರು. ಶಾಲಾ ದಿನಗಳಲ್ಲಿ ಹೇಮಂತ್ ಮತ್ತು ಅನನ್ಯಳ ನಡುವೆ ಆರಂಭವಾಗಿದ್ದ ಪ್ರೇಮ ಮದ್ವೆಯಾಗುವ ಕನಸು ಮೂಡಿಸಿತ್ತು. ಪರಸ್ಪರ ಪ್ರೀತಿಸುತ್ತಿರುವ ವಿಚಾರವನ್ನು ಪೋಷಕರಿಗೂ ತಿಳಿಸಿದ್ದರು. ಆದರೆ, ಅನನ್ಯ ಪೋಷಕರು ಮಾತ್ರ ಮದುವೆಗೆ ನಿರಾಕರಿಸಿದರು.

ಎರಡೆರಡು ಬಾರಿ ಹಸೆಮಣೆ ಏರಿದ ಜೋಡಿ: ಹೆತ್ತವರ ವಿರೋಧದ ನಡುವೆಯೂ ಅನನ್ಯ ಹಾಗೂ ಹೇಮಂತ್ ಸ್ನೇಹಿತರ ಸಮ್ಮುಖದಲ್ಲಿ ದೇವಾಲಯದಲ್ಲಿ ಹಸೆಮಣೆ ಏರಿದ್ದರು. ವಿಷಯ ತಿಳಿದ ಅನನ್ಯ ಪೋಷಕರು ನಾವೇ ಮದುವೆ ಮಾಡುತ್ತೇವೆ ಎಂದು ಕರೆಸಿಕೊಂಡಿದ್ದರು. ಖುಷಿಯಾಗಿ ಬರ್ತಿದ್ದ ದಂಪತಿಗೆ ರಸ್ತೆ ಮಧ್ಯೆಯೇ ಅಡ್ಡಗಟ್ಟಿ ಹೇಮಂತ್​ಗೆ ಹೊಡೆದು ಮಗಳನ್ನ ಕರೆದುಕೊಂಡು ಹೋಗಿದ್ದರು. ಮೂರು ತಿಂಗಳು ಸುಮ್ಮನಿದ್ದ ಅನನ್ಯ ಮತ್ತೆ ಮನೆ ಬಿಟ್ಟು ಬಂದು ಮತ್ತೊಮ್ಮೆ ಹೇಮಂತ್ ಜೊತೆ ಮದುವೆಯಾಗಿದ್ದಾರೆ. ಮೂರು ತಿಂಗಳ ಅವಧಿಯಲ್ಲಿ ಈ ಜೋಡಿ ಎರಡೆರಡು ಬಾರಿ ಹಸೆಮಣೆ ಏರಿದ್ದಾರೆ.

married couple
ನವದಂಪತಿ ಹೇಮಂತ್ ಹಾಗೂ ಅನನ್ಯ

ಬದುಕಲು ಬಿಡಿ - ಹೆತ್ತವರಿಗೆ ಮನವಿ ಮನೆಯವರಿಂದ ಆಪತ್ತು ಕಾದಿಗೆ ಎಂಬುದು ಗೊತ್ತಾದ ಜೋಡಿ, ತಮ್ಮನ್ನು ರಕ್ಷಣೆ ಮಾಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಗೆ ಪ್ರೇಮಿಗಳು ಆಗಮಿಸಿ "ತಾವು ಇಬ್ಬರೂ ವಯಸ್ಕರಾಗಿದ್ದು, ಒಪ್ಪಿಕೊಂಡು ಮದುವೆಯಾಗಿದ್ದೇವೆ. ತಮಗೆ ಪೋಷಕರಿಂದ ಜೀವಭಯವಿದ್ದು ರಕ್ಷಣೆ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಈಗ ನಮ್ಮ ಪಾಡಿಗೆ ನಮ್ಮ ಬಿಡಿ. ನಾವು ಬದುಕುತ್ತೇವೆ ಎಂದು ಹೆತ್ತವರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಪೋಷಕರ ವಿರುದ್ದ ದೂರು: ಅನನ್ಯ ಪೋಷಕರು ಮತ್ತೊಂದು ಮದುವೆಗೆ ಪ್ಲ್ಯಾನ್ ಮಾಡುತ್ತಿದ್ದಂತೆ ಅನನ್ಯ ಹೇಮಂತ್ ಜೊತೆ ಮನೆ ಬಿಟ್ಟು ಬಂದಿದ್ದಾರೆ. ಮನೆ ಬಿಟ್ಟು ಬಂದಿರುವ ಅನನ್ಯ ಮತ್ತು ಹೇಮಂತನಿಗಾಗಿ ಪೋಷಕರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ಇವರ ಮದುವೆಗೆ ಸಹಾಯ ಮಾಡಿದ ಸ್ನೇಹಿತರಿಗೂ ಕೂಟ ಜೀವ ಭಯ ಕಾಡುತ್ತಿದೆಯಂತೆ. ಏಕೆಂದರೆ, ಇಬ್ಬರು ಮೊದಲ ಬಾರಿ ಮದುವೆಯಾದಾಗ, ಮದುವೆ ಮಾಡಿಸಿದ್ದ ಸ್ನೇಹಿತರಿಗೂ ಅನನ್ಯ ಪೋಷಕರು ಹಿಗ್ಗಾಮುಗ್ಗಾ ಥಳಿಸಿದ್ದರು.

ಹಾಗಾಗಿ, ಇದೀಗ ಅವರಿಗೂ ಭಯ ಶುರುವಾಗಿದೆ. "ನನ್ನ ಗಂಡ ಹಾಗೂ ಆತನ ಸ್ನೇಹಿತರಿಗೆ ನಮ್ಮ ಮನೆಯವರಿಂದಲೇ ಜೀವ ಭಯ ಇದೆ. ನಮಗೆ ರಕ್ಷಣೆ ಕೊಡಿ" ಎಂದು ಅನನ್ಯ ಚಿಕ್ಕಮಗಳೂರು ಎಸ್​ಪಿ ಕಚೇರಿಗೆ ತೆರಳಿ ಪೋಷಕರ ವಿರುದ್ಧವೇ ದೂರು ನೀಡಿದ್ದಾರೆ. ಅಲ್ಲದೇ ಅನನ್ಯಳಿಂದ ದೂರ ಆಗುವಂತೆ ಹೇಮಂತ್‌ಗೆ ನಿರಂತರವಾಗಿ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಅನನ್ಯ ಪೋಷಕರ ವಿರುದ್ಧ ಆರೋಪಿಸಿದ್ದಾರೆ.

ಅನನ್ಯ ಪೋಷಕರಿಂದ ಕ್ಯಾತೆ: ಕಳೆದ 10 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಅನನ್ಯ ಹಾಗೂ ಹೇಮಂತ್​ಗೆ ಜಾತಿ, ಧರ್ಮ ಅಂತಸ್ತು ಯಾವುದೂ ಅಡ್ಡಿಯಾಗಿಲ್ಲ. ಯಾಕೆಂದರೆ ಇಬ್ಬರು ಒಂದೇ ಜಾತಿ. ಇಬ್ಬರು ಮನೆ ಕಡೆ ಚೆನ್ನಾಗಿಯೇ ಇದ್ದಾರೆ. ಹೇಮಂತ್‌ ಪೋಷಕರ ಕಡೆಯಿಂದ ಯಾವುದೇ ತೊಂದರೆ ಇಲ್ಲ. ಆದರೆ ಅನನ್ಯ ಪೋಷಕರು ಮಾತ್ರ ಮದುವೆ ಬಗ್ಗೆ ಕ್ಯಾತೆ ತೆಗೆಯುತ್ತಲೇ ಇದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನು ಓದಿ: ಪ್ರೀತಿಸಿ ಮದುವೆಯಾದ ಪ್ರೇಮಿಗಳು.. ಜಾತಿ ಕಾರಣಕ್ಕೆ ಲವ್​ ಬರ್ಡ್ಸ್​ಗೆ ಪೋಷಕರಿಂದ ಜೀವ ಬೆದರಿಕೆ

Last Updated :Feb 3, 2023, 12:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.