ETV Bharat / state

ಅರಿವಳಿಕೆ ಚುಚ್ಚು ಮದ್ದು ಪಡೆದು ಅರೆ ಮಂಪರಿನಲ್ಲಿದ್ದ ಕಾಡಿನತ್ತ ಓಡಿಹೋದ ಆನೆ

author img

By

Published : Dec 8, 2022, 10:02 PM IST

Updated : Dec 8, 2022, 10:39 PM IST

wild elephant
ಕಾಡಾನೆ

ಕುಂದೂರು ಕೆಂಜಿಗೆ ಭಾಗದ ಪ್ರದೇಶದಲ್ಲಿ ಗುರುವಾರ ಅರಣ್ಯ ಇಲಾಖೆ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವಿಫಲಗೊಂಡಿದೆ. ಅರೆ ಮಂಪರಿನಲ್ಲಿದ್ದ ಆನೆ ಮತ್ತೆ ತಪ್ಪಿಸಿಕೊಂಡಿದೆ.

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಕೆಂಜಿಗೆ ವ್ಯಾಪ್ತಿ ಪ್ರದೇಶದಲ್ಲಿ ಆಗಮಿಸಿದ್ದ ಕಾಡಾನೆಗಳ ಸೆರೆ ಕಾರ್ಯಾಚರಣೆ ಇಂದು ವಿಫಲವಾಗಿದೆ. ಅರಿವಳಿಕೆ ಚುಚ್ಚು ಮದ್ದು ನೀಡಿದ್ದ ಕಾಡಾನೆಯೂ ಸಾವರಿಸಿಕೊಂಡು ಎದ್ದು ಓಡಿತು.

ಮೂರು ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಈಗಾಗಲೇ ಎರಡು ಆನೆಗಳನ್ನು ಯಶಸ್ವಿಯಾಗಿ ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಸಾಗಿಸಲಾಗಿದೆ. ಮೂರನೇ ಆನೆ ಹಿಡಿಯುವ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರಿಸಲಾಗಿದೆ. ಇಂದು ಬೆಳಗ್ಗೆ ಕೆಂಜಿಗೆ ಸಮೀಪದ ಕತ್ಲೆಖಾನ್ ಎಸ್ಟೇಟ್ ಬಳಿ ಎರಡು ಆನೆಗಳಿವೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅಲ್ಲಿಗೆ ಕಾರ್ಯಾಚರಣೆ ತಂಡ ಆಗಮಿಸಿತ್ತು.

ಆನೆಗಳನ್ನು ಅಟ್ಟಿಸಿಕೊಂಡು ಬರುವ ಆಯಕಟ್ಟಿನ ಜಾಗದಲ್ಲಿ ನಿಂತಿದ್ದ ಅರಿವಳಿಕೆ ತಜ್ಞರು ದೊಡ್ಡ ಆನೆಗೆ ಯಶಸ್ವಿಯಾಗಿ ಅರವಳಿಕೆ ಚುಚ್ಚುಮದ್ದು ಪ್ರಯೋಗಿಸಿದ್ದಾರೆ. ಚುಚ್ಚು ಮದ್ದು ಪ್ರಯೋಗಿಸಿದ ನಂತರ ಆನೆ ಸುಮಾರು ಎರಡು ಕಿಲೋ ಮೀಟರ್ ದೂರ ಸಾಗಿ ದಟ್ಟ ಅರಣ್ಯ ಪ್ರದೇಶದ ಕಡಿದಾದ ಜಾಗದಲ್ಲಿ ಮಂಪರು ಬಂದು ಬಿದ್ದಿದೆ.

ಚಿಕ್ಕಮಗಳೂರಿನಲ್ಲಿ ಕಾಡಾನೆ ಹಾವಳಿ

ಅಷ್ಟರಲ್ಲಿ ಸ್ಥಳಕ್ಕೆ ಬಂದಿರುವ ಕಾರ್ಯಾಚರಣೆ ತಂಡ ಆನೆಗೆ ಹಗ್ಗ ಬಿಗಿಯಲು ಸಜ್ಜಾಗುತ್ತಿದ್ದಂತೆ ಆನೆಗೆ ಪ್ರಜ್ಞೆ ಮರುಕಳಿಸಲು ಪ್ರಾರಂಭವಾಗಿದೆ. ವೈದ್ಯರು ನೀಡಿದ ಸಲಹೆ ಮೇರೆಗೆ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಕೆಲ ಸಮಯದ ನಂತರ ಅರೆ ಮಂಪರಿನಲ್ಲಿದ್ದ ಆನೆ ಅಲ್ಲಿಂದ ಎದ್ದು ಓಡಿಹೋಗಿದೆ.

ಅರಣ್ಯ ಇಲಾಖೆ ಸ್ಪಷ್ಟನೆ: ಆನೆಗೆ ಒಮ್ಮೆ ಅರಿವಳಿಕೆ ಔಷಧ ನೀಡಿದ ಮೇಲೆ ಕನಿಷ್ಠ 20 ಗಂಟೆಯವರೆಗೆ ಮತ್ತೆ ಅರಿವಳಿಕೆ ಚುಚ್ಚು ಮದ್ದು ಪ್ರಯೋಗಿಸುವ ಹಾಗಿಲ್ಲ. ನಾಳೆ ಕೂಂಬಿಂಗ್ ಮುಂದುವರಿಸುತ್ತೇವೆ. ಈಗ ಅರಿವಳಿಕೆ ಚುಚ್ಚು ಮದ್ದು ಪ್ರಯೋಗಿಸಿರುವ ಆನೆಯನ್ನು ಪ್ರಥಮ ಆದ್ಯತೆಯಲ್ಲಿ ಗುರಿಯಾಗಿಸಿ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತೇವೆ ಎಂದು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಇದನ್ನೂಓದಿ:ಕರ್ನಾಟಕ ಸೇರಲು ಮತದಾನ ಬಹಿಷ್ಕರಿಸಿದ ಮಹಾರಾಷ್ಟ್ರದ ಗಡಿ ಗ್ರಾಮ

Last Updated :Dec 8, 2022, 10:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.