ಚಿಕ್ಕಬಳ್ಳಾಪುರ : ನಂದಿ ಬೆಟ್ಟದಲ್ಲಿ ರೋಪ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಆದಷ್ಟು ಬೇಗ ಈ ಯೋಜನೆಗೆ ಚಾಲನೆ ನೀಡಲಾಗುವುದೆಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಇಂದು ನಂದಿ ಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಮಾಹಿತಿ ನೀಡಿದ್ದಾರೆ.
ಪ್ರವಾಸಿ ತಾಣಗಳಲ್ಲಿಹೋಟೆಲ್ ಉದ್ಯಮ ಮಾಡುವವರಿಗೆ ಕ್ಲಸ್ಟರ್ಗಳನ್ನು ಜಾರಿಗೆ ತರಲಾಗುತ್ತಿದೆ. ಇದರ ಮೂಲಕ ಸಬ್ಸಿಡಿ ಕೊಡಲಾಗುತ್ತದೆ. ಪ್ರವಾಸಿಗನಾಗಿ ಎಲ್ಲಾ ಕಡೆ ಭೇಟಿ ನೀಡುತ್ತೇನೆ. ಇನ್ನೂ ನಂದಿ ಬೆಟ್ಟಕ್ಕೆ ಸುಮಾರು 30 ವರ್ಷಗಳ ಹಿಂದೆ ನನ್ನ ಸಂಗಾತಿಯೊಂದಿಗೆ ಭೇಟಿ ನೀಡಿದ್ದೆ.
ನಂದಿ ಬೆಟ್ಟ ಸುಂದರವಾದ ಸ್ಥಳವಾಗಿದ್ದು, ನಂದಿ ಬೆಟ್ಟಕ್ಕೆ ಪ್ರಚಾರದ ಅವಶ್ಯಕತೆ ಇಲ್ಲ. ಇನ್ನೂ ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಲಾಗುವುದು ಎಂದರು.
ಹೊಸದಾಗಿ ದಿನನಿತ್ಯ ಚಟುವಟಿಕೆಗಳಿಗೆ ಹಾಗೂ ಕಲಾ ತಂಡಗಳೊಂದಿಗೆ ಮಾತನಾಡಿ, ಕಲೆಯನ್ನು ಪ್ರದರ್ಶನ ಮಾಡಬೇಕೆಂದು ಯೋಚನೆ ಮಾಡಲಾಗಿದೆ. ಜೊತೆಗೆ ಪಾರ್ಕಿಂಗ್ ತೊಂದರೆ ನಿವಾರಿಸಲು ಡಬಲ್ ಡೆಕ್ಕರ್ ವಾಹನಗಳ ಯೋಜನೆ ಮಾಡಲಾಗುತ್ತಿದೆ.
ರೋಪ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಆದಷ್ಟು ಬೇಗ ಅನುಷ್ಠಾನಕ್ಕೆ ತರಲಾಗುವುದು. ಗಣಿಗಾರಿಕೆಯಿಂದ ಭೂಕುಸಿತ ಉಂಟಾಗಿದ್ದರೆ ಪ್ರವಾಸೋದ್ಯಮ ಇಲಾಖೆಯಿಂದ ನೋಟಿಸ್ ಕೊಟ್ಟು ಮುಚ್ಚಲಾಗುವುದು ಎಂದು ತಿಳಿಸಿದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ನಂದಿ ಬೆಟ್ಟದಲ್ಲಿ ರಾಜಸ್ಥಾನ ಮಾದರಿ ಕಲಾಧಾಮವನ್ನು ಮಾಡಲು ನಿರ್ಧರಿಸಲಾಗಿದೆ. ಬೆಟ್ಟದ ಮೇಲೆ 10 ಸ್ಥಳಗಳನ್ನು ಗುರುತಿಸಲಾಗಿದೆ. ಕಲಾಧಾಮ ಯೋಜನೆ ಅನುಷ್ಠಾನಕ್ಕೆ ತಂದು ಉದ್ಯೋಗ ಸೃಷ್ಟಿ ಮಾಡಲಾಗುವುದು. ಅದೇ ರೀತಿ ಅಂಗವಿಕಲರಿಗೆ, ವಯಸ್ಕರಿಗೆ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಮಾಡಲಾಗುವುದು ಎಂದರು.
![Minister Anand Singh special pooja for nandishwara](https://etvbharatimages.akamaized.net/etvbharat/prod-images/kn-ckb-03-02-anand-singh-avbb-ka10046_02022022154704_0202f_1643797024_838.jpg)
ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದಾಗಿದ್ರೂ ನಂದಿ ಬೆಟ್ಟದಲ್ಲಿ ವಿಕೇಂಡ್ ಕರ್ಫ್ಯೂ ಜಾರಿಯಲ್ಲಿದೆ. ಇದರ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ವಾರದಿಂದ ವೀಕೆಂಡ್ ದಿನಗಳಲ್ಲಿ ಪ್ರವಾಸಿಗರಿಗೆ ಅನುವು ಮಾಡಿಕೊಡಲಾಗುವುದೆಂದು ತಿಳಿಸಿದರು.
ಇದೇ ವೇಳೆ ನಂದಿ ಬೆಟ್ಟವನ್ನು ವೀಕ್ಷಣೆ ಮಾಡಿ ಶ್ರೀ ನಂದೀಶ್ವರನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಸಚಿವರೊಂದಿಗೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ಅಧಿಕಾರಿಗಳು ಭಾಗಿಯಾಗಿದ್ರು.
ಓದಿ: ವಾಹನ ಮಾರಾಟ ಮಾಡಿಕೊಡುವುದಾಗಿ ವಂಚನೆ : ನಕಲಿ ಸಿಸಿಬಿ ಅಧಿಕಾರಿ ಅರೆಸ್ಟ್