ಚಿಕ್ಕಬಳ್ಳಾಪುರ: ಅಕ್ರಮ ಖಾತೆಗಳನ್ನ ಮಾಡಿಕೊಟ್ಟಿರುವ ಅಧಿಕಾರಿಗಳನ್ನ ತಕ್ಷಣ ಅಮಾನತುಗೊಳಿಸಬೇಕು ಎಂದು ಅಂಕತಟ್ಟಿ ಗ್ರಾಮಸ್ಥರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಮಳ್ಳೂರು ಗ್ರಾಮ ಪಂಚಾಯತ್ ಮುಂದೆ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಅಂಕತಟ್ಟಿ ಗ್ರಾಮದ ಮುಖಂಡ ಎಸ್.ವೆಂಕಟರೆಡ್ಡಿ ಮಾತನಾಡಿ, ಅಂಕತಟ್ಟಿ ಗ್ರಾಮದ ಸರ್ವೆ ನಂಬರ್ 7/2 ರಲ್ಲಿ 4.89 ಹೆಕ್ಟೇರ್ (12 ಎಕರೆ 30 ಗುಂಟೆ) ಭೂಮಿ ಇದೆ. ಈ ಭೂಮಿಯನ್ನು ಈವರೆಗೂ ಹೌಸ್ಲಿಸ್ಟ್ ಮಾಡಿಲ್ಲ. 4 ಎಕರೆ ಸರ್ಕಾರಿ ಗ್ರಾಮಠಾಣೆ ಜಾಗಕ್ಕೆ ದಾಖಲೆಗಳೇ ಇಲ್ಲ. ಈ ಜಾಗವನ್ನು ಗ್ರಾಮದ ಪ್ರಭಾವಿಗಳು 2017ರಲ್ಲಿ ಒತ್ತುವರಿ ಮಾಡಲು ಪ್ರಯತ್ನ ಮಾಡಿದ್ದರು. ಕೂಡಲೇ ಎಚ್ಚೆತ್ತ ಗ್ರಾಮಸ್ಥರು, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಜಿಲ್ಲಾಧಿಕಾರಿ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೂ ಸೇರಿ ಎಲ್ಲರಿಗೂ ದೂರು ನೀಡಿದ್ದೆವು. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಇಲಾಖೆಯ ಮೇಲಾಧಿಕಾರಿಗಳು ಆದೇಶ ನೀಡಿದ್ದರು ಎಂದು ತಿಳಿಸಿದರು.
ಮೇಲಾಧಿಕಾರಿಗಳ ಆದೇಶದಂತೆ ಅಂತಕಟ್ಟಿ ಗ್ರಾಮಕ್ಕೆ ಬಂದಿದ್ದ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಸದರಿ ಭೂಮಿಯನ್ನು ಸರ್ವೆ ಮಾಡಿ ಗಡಿ ಗುರುತಿಸಿದ್ದರು. ಸರ್ಕಾರಿ ಗ್ರಾಮಠಾಣಾ ಜಾಗವನ್ನು ಪಂಚಾಯತ್ ವಶಕ್ಕೆ ತೆಗೆದುಕೊಳ್ಳುವಂತೆ, ಅಕ್ರಮವಾಗಿ ಅನುಭವದಲ್ಲಿರುವವರಿಗೆ ನೋಟಿಸ್ ಜಾರಿ ಮಾಡುವಂತೆ ಆದೇಶ ಮಾಡಿದ್ದರೂ ಈವರೆಗೂ ಸದರಿ ಭೂಮಿಯನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿಲ್ಲ. ಅಧಿಕಾರಿಗಳು ಶಾಮೀಲಾಗಿ ಸದರಿ ಭೂಮಿಯನ್ನು ನಿಯಮಬಾಹಿರವಾಗಿ ದಾಖಲೆಗಳನ್ನು ಸೃಷ್ಟಿಸಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ ಎಸ್ ವೆಂಕಟರೆಡ್ಡಿ ಮಾತನಾಡಿ, ಸರ್ಕಾರಿ ಭೂಮಿಯನ್ನು ಉಳಿಸಿ, ಬಡವರಿಗೆ ನಿವೇಶಗಳನ್ನು ಹಂಚಿಕೆ ಮಾಡಬೇಕು ಎಂದು ಹೋರಾಟ ಮಾಡುತ್ತಿರುವವರ ವಿರುದ್ಧ ಪೊಲೀಸರಿಗೆ ದೂರು ನೀಡಿ, ವಿನಾಕಾರಣ ಮಾನಸಿಕ ಹಿಂಸೆ ಮಾಡಲಾಗಿದೆ. ನಿಯಮಬಾಹಿರವಾಗಿ ಮಾಡಿಕೊಟ್ಟ ಖಾತೆಗಳನ್ನು ವಜಾಗೊಳಿಸಬೇಕು. ಅಕ್ರಮ ಖಾತೆಗಳನ್ನು ಮಾಡಲಿಕ್ಕೆ ಸಹಕಾರ ನೀಡಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಪಡಿಸಬೇಕು. ಸದರಿ ಭೂಮಿಯನ್ನು ಪಂಚಾಯತ್ ವಶಕ್ಕೆ ಪಡೆದುಕೊಂಡು ಬಡವರಿಗೆ ನಿವೇಶಗಳನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.