ಚಾಮರಾಜನಗರ: ಕಾಡುಗಳ್ಳ ವೀರಪ್ಪನ್ ಸ್ವಗ್ರಾಮ, ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಸಂಕ್ರಾಂತಿ ಪ್ರಯುಕ್ತ ಹೋರಿ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಗ್ರಾಮದ ಮಾರಿಯಮ್ಮ ದೇಗುಲದ ಮುಂಭಾಗ ಜಮಾಯಿಸಿದ ಹೊಗೆನಕಲ್, ಆಲಂಬಾಡಿ, ಪುದೂರಿನ ಗ್ರಾಮಸ್ಥರು ಎತ್ತುಗಳಿಗೆ ಬೆದರು ಬೊಂಬೆ ತೋರಿಸಿ ರೊಚ್ಚಿಗೆಬ್ಬಿಸಿ ಕಾದಾಡಿದ್ದಾರೆ.
ಈ ಕುರಿತು ಗ್ರಾಮದ ಲಕ್ಷ್ಮಣ್ ಮಾತನಾಡಿ, ಇಂದು 50 ಎತ್ತುಗಳನ್ನು ಬೆದರಿಸಿದೆವು. ಎತ್ತುಗಳಿಗೆ ಎಳೆಯುವ ಶಕ್ತಿ ಹೆಚ್ಚಾಗಲಿ, ದುಷ್ಟ ಶಕ್ತಿಗಳು ಹತ್ತಿರ ಸುಳಿಯದಿರಲೆಂದು ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಎತ್ತನ್ನು ಕಾದಾಟಕ್ಕಿಳಿಸಿದವರು ಮಾರಿಯಮ್ಮ ದೇಗುಲಕ್ಕೆ ಒಂದೊಂದು ದೀಪದ ಕಂಬ ನೀಡಿದ್ದಾರೆ ಎಂದರು.
ಎಡ-ಬಲವನ್ನು ಹಗ್ಗದಿಂದ ಹಿಡಿಯುವ 10 ಕ್ಕೂ ಹೆಚ್ಚು ಯುವಕರು, ಬೆದರು ಬೊಂಬೆಯನ್ನು ತೋರಿಸಿ ಅದನ್ನು ರೊಚ್ಚಿಗೆಬ್ಬಿಸುತ್ತಾರೆ. 10-12 ಮಂದಿಯ ಹಿಡಿತವನ್ನು ಲೆಕ್ಕಿಸದ ಎತ್ತುಗಳು ಬೆದರುಬೊಂಬೆಯನ್ನು ತಿವಿದು, ಬಿಸಾಕುತ್ತವೆ. ಇದು ಜಲ್ಲಿಕಟ್ಟಿನಷ್ಟು ಅಪಾಯಕಾರಿ ಅಲ್ಲದಿದ್ದರೂ ಜಾಗೃತರಾಗಿರುವುದು ಅವಶ್ಯಕ. ರೈತರ ಹಬ್ಬ ಸಂಕ್ರಾಂತಿಯನ್ನು ಒಂದೊಂದು ಪ್ರದೇಶದಲ್ಲಿ ಒಂದು ವಿಶೇಷತೆಯೊಂದಿಗೆ ಆಚರಿಸಲಾಗುತ್ತಿದೆ. ಹೋರಿ ಬೆದರಿಸೋದು ಸಂಕ್ರಾಂತಿ ಸಡಗರವನ್ನು ಗ್ರಾಮದಲ್ಲಿ ಇಮ್ಮಡಿಗೊಳಿಸಿದೆ.