ETV Bharat / state

ಚಿಕ್ಕಮಗಳೂರು: 600 ಅಡಕೆ ಗಿಡ ಕಡಿದು ಹಾಕಿದ ದುಷ್ಕರ್ಮಿಗಳು

author img

By

Published : Feb 7, 2023, 12:12 PM IST

miscreants cut down areca nut trees
ಅಡಿಕೆ ಗಿಡ ಕಡಿದು ಹಾಕಿದ ದುಷ್ಕರ್ಮಿಗಳು

ಎರಡೂವರೆ ವರ್ಷದ 600 ಅಡಕೆ ಗಿಡಗಳನ್ನು ರಾತ್ರೋರಾತ್ರಿ ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ನಡೆದಿದೆ.

ಅಡಿಕೆ ಗಿಡ ಕಡಿದು ಹಾಕಿದ ದುಷ್ಕರ್ಮಿಗಳು..

ಚಿಕ್ಕಮಗಳೂರು: ಮನೆಯವರು ಜಾತ್ರೆಗೆ ಹೋದ ಸಂದರ್ಭದಲ್ಲಿ ಕಿಡಿಗೇಡಿಗಳು ಎರಡೂವರೆ ವರ್ಷದ ಸುಮಾರು 600 ಅಡಕೆ ಸಸಿಗಳನ್ನ ಕಡಿದು ಹಾಕಿ ವಿಕೃತಿ ಮೆರೆದಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಲ್ಲಾಪುರ ಗ್ರಾಮದ ರೇವಣ್ಣ ಎಂಬುವರಿಗೆ ಸೇರಿದ ಅಡಕೆ ಸಸಿಗಳು ಸಂಪೂರ್ಣ ನಾಶವಾಗಿವೆ. ಮಕ್ಕಳಂತೆ ಸಾಕಿದ್ದ ಗಿಡಗಳು ನೆಲಕ್ಕುರುಳಿರುವುದನ್ನು ಕಂಡು ಮಾಲೀಕ ರೇವಣ್ಣ ಕಣ್ಣೀರಿಟ್ಟಿದ್ದಾರೆ. ನಿನ್ನೆ(ಸೋಮವಾರ) ಅಂತರಗಟ್ಟೆ ಜಾತ್ರೆ ನಿಮಿತ್ತ ರೇವಣ್ಣ ಕುಟುಂಬದವರೆಲ್ಲ ಜಾತ್ರೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನ ಗಮನಿಸಿದ ದುಷ್ಕರ್ಮಿಗಳು ಸಸಿಗಳನ್ನು ಕಡಿದು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ದ್ವೇಷದ ಹಿನ್ನೆಲೆ ಕೃತ್ಯ: ಸಾಲ ಸೋಲ ಮಾಡಿ ಬೆಳೆಸಿದ್ದ ಅಡಕೆ ಗಿಡಗಳನ್ನ ಕ್ಷಣಾರ್ಧದಲ್ಲಿ ಕಡಿದು ಹಾಕಿದ್ದಾರೆ. ಗ್ರಾಮದ ಒಬ್ಬರ ಮೇಲೆ ಅನುಮಾನವಿದೆ. ಹಳೆ ದ್ವೇಷದ ಹಿನ್ನೆಲೆ ಉದ್ದೇಶ ಪೂರ್ವಕವಾಗಿ ಕೃತ್ಯ ಎಸಗಿದ್ದಾರೆ ಎಂದು ತೋಟದ ಮಾಲೀಕ ರೇವಣ್ಣ ಆರೋಪಿಸಿದ್ದಾರೆ. ವರ್ಷಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗಿಡಗಳನ್ನ ಬೆಳೆಸಲಾಗಿತ್ತು. ಈಗ ಎಲ್ಲ ಗಿಡಗಳನ್ನ ಬುಡಸಮೇತ ತೆಗೆದು ಮತ್ತೆ ಗಿಡಗಳನ್ನ ಹಾಕಿ ಬೆಳೆಸಬೇಕು. ಮತ್ತೆ ಡಬಲ್ ಖರ್ಚು ಆಗಲಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೃತ್ಯ ಎಸಗಿದ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ಹಾಸನ: 500ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಡಿದು ಹಾಕಿ ಕಿಡಿಗೇಡಿಗಳ ದುಷ್ಕೃತ್ಯ

ಅಡಕೆ ಗಿಡಗಳನ್ನು ಕಡಿದು ವಿಕೃತಿ: ಫಸಲಿಗೆ ಬಂದಿದ್ದ 25ಕ್ಕೂ ಅಧಿಕ ಅಡಕೆ ಮರಗಳನ್ನು ರಾತ್ರೋರಾತ್ರಿ ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಗ್ರಾಮದ ರಾಮಪ್ಪ ಎಂಬುವರ ತೋಟದ 25ಕ್ಕೂ ಹೆಚ್ಚು ಅಡಕೆ ಗಿಡಗಳನ್ನು ಕಡಿದು ವಿಕೃತಿ ಮೆರೆದಿದ್ದರು. ಯಲಹಂಕ ತಾಲೂಕಿನ ಗಂಟಿಗಾನ ಹಳ್ಳಿಯವರಾದ ರಾಮಪ್ಪ ಬಿಇಎಲ್​ ನಿವೃತ್ತ ನೌಕರ. ಪತ್ನಿಯ ಊರಾದ ಮರಳೇನಹಳ್ಳಿಯಲ್ಲಿ ಎರಡು ಎಕರೆ ತೋಟ ಮಾಡಿಕೊಂಡು ಅಲ್ಲಿಯೇ ವಾಸವಿದ್ದರು. 'ನಾಲ್ಕು ವರ್ಷಗಳಿಂದ ಅಡಕೆ ಮರಗಳನ್ನು ಮಕ್ಕಳಂತೆ ಸಾಕುತ್ತಿದ್ದೆ. ಮುಂದಿನ 6 ತಿಂಗಳಲ್ಲಿ ಫಸಲು ಕಟ್ಟುತ್ತಿತ್ತು' ಎಂದು ಅವರು ಅಳಲು ತೋಡಿಕೊಂಡಿದ್ದರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಿಡಿಗೇಡಿಗಳ ದುಷ್ಕೃತ್ಯ: ಕಳೆದ ವರ್ಷ ಹಾಸನ ಜಿಲ್ಲೆಯಲ್ಲಿ ಫಸಲಿಗೆ ಬಂದಿದ್ದ 500ಕ್ಕೂ ಹೆಚ್ಚು ಅಡಕೆ ಗಿಡಗಳನ್ನು ಕಡಿದು ಹಾಕಿರುವ ಪ್ರಕರಣ ವರದಿಯಾಗಿತ್ತು. ಬೇಲೂರು ತಾಲೂಕಿನ ಅಜ್ಜೇನಹಳ್ಳಿಯಲ್ಲಿ ಗ್ರಾಮದ ವೀರಲಿಂಗೇಗೌಡರಿಗೆ ಸೇರಿದ ಅಡಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದರು. ಈ ಗಿಡಗಳನ್ನು ನೆಟ್ಟು ಆರು ವರ್ಷಗಳಾಗಿದ್ದು, ಫಸಲಿಗೆ ಬರುತ್ತಿತ್ತು. ಆದರೆ, ಕಿಡಿಗೇಡಿಗಳು ಫಸಲು ಕೈ ಸೇರುವ ಮೊದಲೇ ನಾಶಪಡಿಸಿದ್ದರು.

ಇದನ್ನೂ ಓದಿ: ದೊಡ್ಡಬಳ್ಳಾಪುರ: 25ಕ್ಕೂ ಹೆಚ್ಚು ಅಡಿಕೆ ಮರ ಕಡಿದು ಹಾಕಿದ ದುಷ್ಕರ್ಮಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.