ETV Bharat / state

ಬಿಳಿಗಿರಿ ಬನದಲ್ಲೊಂದು ಭಾವೈಕ್ಯತೆ: ಮುಸ್ಲಿಂ ವ್ಯಕ್ತಿಗೂ ಬಿಳಿಗಿರಿರಂಗನಿಗೂ ಇದೆ ನಂಟು..!

author img

By

Published : Apr 2, 2021, 9:29 AM IST

Chamarajnagar
ಬಿಳಿಗಿರಿ ಬನದಲ್ಲಿ ಹಿಂದೂ- ಮುಸಲ್ಮಾನ ಭಾವೈಕ್ಯತೆ

ಹಿರಿಯ ಕೆಎಎಸ್ ಅಧಿಕಾರಿಯಾಗಿ ನಿವೃತ್ತಿ ಹೊಂದಿದ ಮುಜೀಬ್ ಅಹಮ್ಮದ್ ಅವರು ಬಿಳಿಗಿರಿರಂಗನ ಅಪ್ಪಟ ಭಕ್ತ. ಇನ್ನು ಇವರು ದೇವಾಲಯ ಜೀರ್ಣೋದ್ಧಾರಗೊಂಡು ಸಂಪ್ರೋಕ್ಷಣೆ ಕಾರ್ಯದ ಕೊನೆ ದಿನದ ಪೂಜೆಯಲ್ಲಿ ಭಾಗಿಯಾಗಿ ಭಕ್ತಿ ಮೆರೆದಿದ್ದಾರೆ.

ಚಾಮರಾಜನಗರ: ಕನಕ ಭಕ್ತಿ, ಬಸವಣ್ಣನ ಕಾಯಕ ಶಕ್ತಿ ಮೇಳೈಸಿದಂತೆ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ದೇವಾಲಯ ಸಂಪ್ರೋಕ್ಷಣೆ ಕಾರ್ಯಕ್ರಮದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಭಾಗಿಯಾಗಿದ್ದಾರೆ.

ಹಿರಿಯ ಕೆಎಎಸ್ ಅಧಿಕಾರಿಯಾಗಿ ನಿವೃತ್ತಿ ಹೊಂದಿದ, ಉತ್ತಮ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಮುಜೀಬ್ ಅಹಮ್ಮದ್ ಬಿಳಿಗಿರಿರಂಗನ ಅಪ್ಪಟ ಭಕ್ತರಾಗಿದ್ದಾರೆ. ಆ ರಂಗನಾಥನೂ ಇವರಿಗೆ ದಿಟ ದರ್ಶನ ನೀಡಿದ್ದಾನೆ.

ನಂಟು ಬೆಳೆದಿದ್ದು ಹೇಗೆ..?

ಬಿಳಿಗಿರಿರಂಗನಾಥ ಮತ್ತು ಮುಜೀಬ್ ಅವರ ನಂಟು 80ರ ದಶಕದಲ್ಲಿ ಯಳಂದೂರು ತಹಶೀಲ್ದಾರ್ ಆದಾಗಿನಿಂದ ಶುರುವಾಗಿದೆ. 1986ರಲ್ಲಿ ದೇವರ ಮೂರ್ತಿ ಅಲುಗಾಡುತ್ತಿದೆ. ಸರಿಪಡಿಸಬೇಕೇಂದು ಅರ್ಚಕರು ಮುಜೀಬ್ ಗಮನಕ್ಕೆ ತರುತ್ತಾರೆ. ಆಗ ಮುಜೀಬ್ ಅವರು ಧರ್ಮದರ್ಶಿಗಳ ಸಭೆ ಕರೆದು, ಮುಜರಾಯಿ ಇಲಾಖೆಯೊಂದಿಗೆ ನಿರಂತರ ಪತ್ರ ವ್ಯವಹಾರ ನಡೆಸಿ ಪುನರ್ ಪ್ರತಿಷ್ಟಾಪನೆಗೆ ಮುಂದಾಗುತ್ತಾರೆ. ವೈಖಾನಸ ಆಗಮದ ಪ್ರಕಾಶ ಕಳಾಕರ್ಷನೆ, ಧಾನ್ಯವಾಸ ಬಳಿಕ ಪುನರ್ ಪ್ರತಿಷ್ಠಾಪಿಸಲು ಕಿಂಚಿತ್ತು ಲೋಪವಾಗದಂತೆ ಕಾರ್ಯ ನಿರ್ವಹಿಸುತ್ತಾರೆ.

ಬಿಳಿಗಿರಿ ಬನದಲ್ಲಿ ಹಿಂದೂ- ಮುಸಲ್ಮಾನ ಭಾವೈಕ್ಯತೆ

ತಹಶೀಲ್ದಾರ್ ಆಗಿದ್ದರಿಂದ ಪುನರ್ ಪ್ರತಿಷ್ಟಾಪನೆಯ ಪೂಜೆಗೆ ಮುಜೀಬ್ ಅವರು ಕೂರಬೇಕು. ಯಾಗಗಳನ್ನು ಪೂರೈಸಬೇಕೆಂದು ತಿಳಿದಾಗ ಮುಜೀಬ್ ಅವರಲ್ಲಿ ತಾನು ಕೂರಬಹುದೇ, ಧರ್ಮ ಸಿದ್ಧಾಂತದ ಅಡ್ಡಿ, ಮನಸ್ಸಿನಲ್ಲಿ ಅಷ್ಟು ತಾನು ನಿರ್ಮಲನೇ ಎಂಬ ಅವ್ಯಕ್ತ ತೊಳಲಾಟಕ್ಕೆ ಸಿಲುಕಿದ್ದರು. ಪುನರ್ ಪ್ರತಿಷ್ಟಾಪನೆಗೆ ಸಕಲ ಸಿದ್ಧತೆಯನ್ನು ಪರಿಶೀಲಿಸಿ ನಿವಾಸಕ್ಕೆ ಬಂದ ವೇಳೆ ಬಿಳಿಗಿರಿರಂಗನಾಥ ಸ್ವಾಮಿಯೇ ದರ್ಶನ ನೀಡಿ " ಕಳೆದ 1000 ವರ್ಷಗಳಿಂದ ನಿನ್ನ ನಿರೀಕ್ಷೆಯಲ್ಲಿ ನಾನಿದ್ದೆ. ನಿನ್ನಲ್ಲಿ ಎಲ್ಲವೂ ಸ್ವಚ್ಚ ಹಾಗೂ ನಿರ್ಮಲ, ಕಾರ್ಯ ನನ್ನದು ಲೌಖಿಕ ನೆಪ ನಿನ್ನದು, ನಿಂತು ನಿರ್ವಹಿಸು" ಎಂದು ಮಾತುಗಳನ್ನಾಡಿ ಶಕ್ತಿ ಅಂತರ್ಧಾನವಾಗುತ್ತದೆ. ಬೃಹದಾಕಾರದ ಶಕ್ತಿ, ಅಂದಿನ ದಿನ ನೆನಸಿಕೊಂಡರೆ ಇಂದಿಗೂ ರೋಮಾಂಚನವಾಗುತ್ತದೆ ಎನ್ನುತ್ತಾರೆ ಮುಜೀಬ್.

ಬಳಿಕ, ಸಾಂಗವಾಗಿ ಪುನರ್ ಪ್ರತಿಷ್ಠಾಪನೆ ಕಾರ್ಯ ಮುಗಿಯಲಿದ್ದು ಪೂಜೆಯಲ್ಲಿ ಭಾಗಿಯಾಗುತ್ತಾರೆ. ಇವರ ಹೆಸರಿನಲ್ಲೇ ಮೊದಲ ಪೂಜೆಯೂ ಆಗುತ್ತದೆ. ಧರ್ಮ ಜಾತಿ ಮೀರಿದ ಘಟನೆಯೊಂದು ಘಟಿಸಿ ಮುಸ್ಲಿಂ ವ್ಯಕ್ಯಿಯೊಬ್ಬರು ಬಿಳಿಗಿರಿರಂಗನ ಭಕ್ತರಾಗುತ್ತಾರೆ.

ಸಂಪ್ರೋಕ್ಷಣೆಯಲ್ಲೂ ಭಾಗಿ: ಈಗ ದೇವಾಲಯ ಜೀರ್ಣೋದ್ಧಾರಗೊಂಡು ಸಂಪ್ರೋಕ್ಷಣೆ ಕಾರ್ಯದ ಕೊನೆ ದಿನದ ಪೂಜೆಯಲ್ಲಿ ಭಾಗಿಯಾಗಿ ಭಕ್ತಿ ಮೆರೆದಿದ್ದಾರೆ ಮುಜೀಬ್.

ಹೃದಯದಲ್ಲಿ ಗೂಡು ಕಟ್ಟದಿದ್ದರೇ ಎಲ್ಲಾ ಧರ್ಮಗಳ ದೇವರು ಭಗವಂತನೇ. ಹೃದಯ ವೈಶಾಲ್ಯತೆ ಒಂದಿರಬೇಕಷ್ಟೇ. ಬಿಳಿಗಿರಿರಂಗನಾಥನ ಶಕ್ತಿ, ಯಳಂದೂರು ಜನರ ಪ್ರೀತಿ ನನ್ನಲ್ಲಿ ಅಚ್ಚೊತ್ತಿದೆ ಎಂದು ಅವರು ಭಾವುಕರಾಗುತ್ತಾರೆ. ಅಲ್ಪ ಮಾನವರಿಗಷ್ಟೇ ಜಾತಿ- ಧರ್ಮ. ದೇವರಿಗೂ ಅಲ್ಲ ಹೃದಯವಂತರಿಗಲ್ಲ ಎಂಬುದಕ್ಕೆ ಬಿಳಿಗಿರಿ ಬನ ಸಾಕ್ಷಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.