ETV Bharat / state

ಚಾಮರಾಜನಗರ ಬಿಜೆಪಿ ಮುಖಂಡ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ: ಸೋಮಣ್ಣ ಮತ ಬ್ಯಾಂಕಿಗೆ ಕನ್ನ

author img

By

Published : Apr 20, 2023, 3:14 PM IST

Updated : Apr 20, 2023, 9:35 PM IST

bjp-leader-files-namination-as-jds-candidate-in-chamarajangara
ಚಾಮರಾಜನಗರ ಬಿಜೆಪಿ ಮುಖಂಡ ಈಗ ಜೆಡಿಎಸ್ ಅಭ್ಯರ್ಥಿ: ಸೋಮಣ್ಣ ಮತ ಬ್ಯಾಂಕಿಗೆ ಕನ್ನ!!

ಬಿಜೆಪಿ ಮುಖಂಡರಾಗಿದ್ದ ಮಲ್ಲಿಕಾರ್ಜುನ ಸ್ವಾಮಿ (ಆಲೂರು ಮಲ್ಲು) ಚಾಮರಾಜನಗರ ಕ್ಷೇತ್ರದ ಜೆಡಿಎಸ್​​ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಚಾಮರಾಜನಗರ: ಚಾಮರಾಜನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಸ್ವಾಮಿ ಕಣಕ್ಕಿಳಿದಿದ್ದು (ಆಲೂರು ಮಲ್ಲು), ವಿ. ಸೋಮಣ್ಣ ಅವರಿಗೆ ಸಿಗುವ ಮತಗಳು ಕಡಿಮೆಯಾಗುವ ನಿರೀಕ್ಷೆ ಇದೆ. ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಜೊತೆ ಗುರುತಿಸಿಕೊಂಡಿದ್ದ ಆಲೂರು ಮಲ್ಲು, ಕಳೆದ ಬಾರಿ ಚಾಮರಾಜನಗರದ ಬಿಎಸ್​​​ಪಿ ಅಭ್ಯರ್ಥಿಯಾಗಿ 7 ಸಾವಿರ ಮತ ಪಡೆದಿದ್ದರು. ಬಳಿಕ, ಮಹೇಶ್ ಹಿಂಬಾಲಿಸಿ ಬಿಜೆಪಿ ಸೇರಿದ್ದು ಕಳೆದ 5-6 ತಿಂಗಳುಗಳಿಂದ ವಿಜಯೇಂದ್ರ ಆಪ್ತ ರುದ್ರೇಶ್ ಅವರೊಂದಿಗೆ ಗುರುತಿಸಿಕೊಂಡಿದ್ದರು.

ಈಗ ದಿಢೀರ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಲಿಂಗಾಯತ ಪ್ರಾಬಲ್ಯದ ಚಾಮರಾಜನಗರ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ವಿಭಜನೆಯಾದಷ್ಟು ಕಾಂಗ್ರೆಸ್​​ಗೆ ವರವಾಗಲಿದ್ದು ಮಲ್ಲಿಕಾರ್ಜುನ ಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿರುವುದು ಬಿಜೆಪಿಗೆ ಮೈನಸ್ ಕಾಂಗ್ರೆಸ್​​ಗೆ ಪ್ಲಸ್ ಎಂಬ ಮಾತುಗಳಿವೆ.

ಇನ್ನೊಂದೆಡೆ ರೈತ ಸಂಘದ ಡಾ.ಗುರುಪ್ರಸಾದ್ ಎಎಪಿ ಅಭ್ಯರ್ಥಿ ಆಗಿದ್ದಾರೆ. ಇವರೂ ಕೂಡ ಸಾಕಷ್ಟು ಮತಗಳನ್ನು ಕೀಳುವ ಭರವಸೆ ಮೂಡಿಸಿದ್ದು, ಗುರುಪ್ರಸಾದ್ ಅವರು ಕೂಡ ಕೈ ಹಾಕುವುದು ಲಿಂಗಾಯತ ಮತಬುಟ್ಟಿಗೇ. ಆದ್ದರಿಂದ ಸೋಮಣ್ಣಗೆ ಇವರೂ ಕೂಡ ಹೊಡೆತ ಕೊಡಬಹುದು. ಸದ್ಯ, ಚಾಮರಾಜನಗರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದ್ದು ಉಳಿದ ಅಭ್ಯರ್ಥಿಗಳು ಕನ್ನ ಹಾಕುವ ಮತಗಳು ಒಬ್ಬ ಅಭ್ಯರ್ಥಿಯ ಸೋಲು ಅಥವಾ ಗೆಲುವಿಗೆ ಕಾರಣವಾಗಬಲ್ಲದು.

ಕೈಗೆ ಎಸ್​​ಡಿಪಿಐ ಹೊಡೆತ: ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಎಸ್​​ಡಿಪಿಐ ಸಂಘಟನೆ ಪ್ರಬಲವಾಗಿದ್ದು ಸದ್ಯ ಬಿಎಸ್​​ಪಿಗೆ ಬೆಂಬಲ ಘೋಷಿಸಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದೆ. ಮುಸ್ಲಿಂ ಮತಗಳು ಕೂಡ ಕಾಂಗ್ರೆಸ್​​ಗೆ ನಿರ್ಣಾಯಕವಾಗಿದ್ದು ಎಲ್ಲ ಮತಗಳು ಬಿಎಸ್​​ಪಿ ಪಾಲಾದರೆ ಜೊತೆಗೆ ಎಸ್​ಸಿ ಬಲಗೈ ಮತಗಳು ಬಿಎಸ್​​ಪಿ ಕಿತ್ತರೆ ನೇರ ಪರಿಣಾಮ ಕಾಂಗ್ರೆಸ್​​​ಗೆ ಬೀಳಲಿದ್ದು ಸದ್ಯ ಚಾಮರಾಜನಗರ ಕ್ಷೇತ್ರ ಕದನ ಕುತೂಹಲ ಕೆರಳಿಸಿದೆ.

ಬಿಜೆಪಿಗೆ ಬಂಡಾಯದ ಬಿಸಿ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಎಂ.ಪಿ.ಸುನೀಲ್ ಕುಮಾರ್ ನಾಮಪತ್ರ ಸಲ್ಲಿಸಿರುವುದು ಹಾಲಿ ಬಿಜೆಪಿ ಶಾಸಕ ನಿರಂಜನ ಕುಮಾರ್ ಅವರಿಗೆ ಸಮಸ್ಯೆ ತಂದೊಡ್ಡಬಹುದು‌. ಭದ್ರ ಮತಬ್ಯಾಂಕ್​ಗಳ ಮೂಲಕ ನಿರಾಳರಾಗಿದ್ದ ಕೊಳ್ಳೇಗಾಲ ಹಾಲಿ ಬಿಜೆಪಿ ಶಾಸಕ ಮಹೇಶ್ ಅವರಿಗೆ ಪೆಟ್ಟು ಕೊಡಲು ಕಿನಕಹಳ್ಳಿ ರಾಚಯ್ಯ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಮತ ವಿಭಜನೆಗೆ ಕಾರಣವಾಗಲಿದೆ. ಕೊಳ್ಳೇಗಾಲ ಜೆಡಿಎಸ್ ಅಭ್ಯರ್ಥಿ ಪುಟ್ಟಸ್ವಾಮಿ ಕೂಡ ಗಮನ ಸೆಳೆಯುತ್ತಿದ್ದು ಇವರು ಯಾವ ಪಕ್ಷದ ಮತಬುಟ್ಟಿಗೆ ಕೈ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಇಷ್ಟೆಲ್ಲಾ ಮಾತಾಡುವ ಕಾಂಗ್ರೆಸ್ ಲಿಂಗಾಯತ ಸಿಎಂ ಘೋಷಿಸಲಿ: ಸೋಮಣ್ಣ ಸವಾಲ್

Last Updated :Apr 20, 2023, 9:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.