ETV Bharat / state

ಬೀದರ್ : ನಕಲಿ ಕ್ಲಿನಿಕ್​ಗಳ ಮೇಲೆ ವೈದ್ಯಾಧಿಕಾರಿಗಳಿಂದ ದಿಢೀರ್ ದಾಳಿ, ಪರಿಶೀಲನೆ

author img

By ETV Bharat Karnataka Team

Published : Dec 6, 2023, 4:21 PM IST

ಬೀದರ್
ಬೀದರ್

ಬೀದರ್ ಜಿಲ್ಲೆ ಕಮಲನಗರ ತಾಲೂಕಿನ ಒಟ್ಟು 6 ನಕಲಿ ಕ್ಲಿನಿಕ್​​ಗಳ ಮೇಲೆ ವೈದ್ಯಾಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

ಡಾ ಗಾಯತ್ರಿ ವಿಜಯಕುಮಾರ್

ಬೀದರ್ : ಗಡಿ ಜಿಲ್ಲೆ ಬೀದರ್‌ನಲ್ಲಿ ನಕಲಿ ವೈದ್ಯರ ಹಾವಳಿ ಹಿನ್ನೆಲೆ ಇಂದು ಕಮಲನಗರ ತಾಲೂಕಿನ ಒಟ್ಟು 6 ನಕಲಿ ಕ್ಲಿನಿಕ್‌ಗಳ ಮೇಲೆ ದಿಢೀರ್ ದಾಳಿ ಮಾಡಿದ ವೈದ್ಯಾಧಿಕಾರಿಗಳು ನಕಲಿ ವೈದ್ಯರಿಗೆ ಶಾಕ್ ನೀಡಿದ್ದಾರೆ.

ನಕಲಿ ಕ್ಲಿನಿಕ್‌ಗಳಾದ ಡಾ. ಬಿಹಾರಿ ಕ್ಲಿನಿಕ್, ಲಕ್ಷ್ಮೀ ಕ್ಲಿನಿಕ್ ಸೇರಿದಂತೆ ಒಟ್ಟು 6 ಕ್ಲಿನಿಕ್‌ಗಳ ಮೇಲೆ ತಾಲೂಕಿನ ಆರೋಗ್ಯಾಧಿಕಾರಿ ಡಾ ಗಾಯತ್ರಿ ವಿಜಯಕುಮಾರ್ ಮತ್ತು ತಂಡದಿಂದ ದಾಳಿ ಮಾಡಲಾಗಿದೆ. ದಾಳಿ ಮಾಡಿ ನಕಲಿ ವೈದ್ಯರ ಮೇಲೆ ಪ್ರಕರಣ ದಾಖಲಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳು ಲಕ್ಷಾಂತರ ಮೌಲ್ಯದ ಔಷಧಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಜೊತೆಗೆ ಯಾವುದೇ ಪರವಾನಿಗೆ ಇಲ್ಲದ ಕಮಲನಗರ ಗ್ರಾಮೀಣ ಭಾಗದ 2 ಕ್ಲಿನಿಕ್ ಹಾಗೂ ಪಟ್ಟಣದಲ್ಲಿ 4 ನಕಲಿ ಕ್ಲಿನಿಕ್‌ಗಳಿಗೆ ಬೀಗ ಹಾಕಿದ್ದಾರೆ.

''ಕಮಲನಗರ ತಾಲೂಕಿನಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳ ನೇತೃತ್ವದಲ್ಲಿ ನಕಲಿ ವೈದ್ಯರ ಕ್ಲಿನಿಕ್​ ಮೇಲೆ ರೇಡ್ ನಡೆಯುತ್ತಿದೆ. ಆಯುರ್ವೇದಿಕ್​, ಯುನಾನಿ, ಆಲೋಪಥಿ, ಹೋಮಿಯೋಪಥಿಗೆ ಸಂಬಂಧಿಸಿದಂತೆ ಡಿಗ್ರಿ ಪಡೆದವರು ಮಾತ್ರ ಕ್ಲಿನಿಕ್​ ನಡೆಸಬೇಕು ಎಂಬ ನಿಯಮವಿದೆ. ಆದರೂ ಹತ್ತನೆ ತರಗತಿ, ದ್ವಿತೀಯ ಪಿಯುಸಿ ಪಾಸಾಗದವರು ಹಾಗೂ ಹೊರರಾಜ್ಯದಿಂದ ಇಲ್ಲಿಗೆ ಬಂದು ಇಲ್ಲಿನ ಜನರ ಆರೋಗ್ಯದ ಜೊತೆ ಆಟ ಆಡುತ್ತಿದ್ದಾರೆ. ಹಾಗಾಗಿ ನಕಲಿ ಕ್ಲಿನಿಕ್​ಗೆ ಭೇಟಿ ನೀಡಿ ಅವರ ಸರ್ಟಿಫಿಕೆಟ್​ಗಳನ್ನ ಪರಿಶೀಲಿಸಿದ್ದೇವೆ. ಹಾಗೂ ಅವರು ಜನರಿಗೆ ಕೊಡುತ್ತಿರುವ ಔಷಧಿ ಸರಿ ಇದೆಯೇ ಎಂಬುದನ್ನು ಪರಿಶೀಲಿಸಿದ್ದೇವೆ. ಒಂದು ವೇಳೆ ಜನರ ಆರೋಗ್ಯಕ್ಕೆ ಹಾನಿಯಾಗುವಂತಹ ಔಷಧಿಗಳನ್ನ ನೀಡುತ್ತಿದ್ದರೆ, ಹಾಗೂ ಅದಕ್ಕೆ ಸಂಬಂಧಿಸಿದಂತೆ ಸರ್ಟಿಫಿಕೆಟ್ ದೊರೆಯದಿದ್ದಲ್ಲಿ, ಅಂತಹ ನಕಲಿ ಆಸ್ಪತ್ರೆಯನ್ನು ಸೀಜ್ ಮಾಡುವಂತಹ ಕೆಲಸ ನಡೆಯುತ್ತಿದೆ.

ಸರ್ಕಾರದ ಗೈಡ್​ಲೈನ್ಸ್​ ಪ್ರಕಾರ, ನೋಂದಾಯಿತ ವೈದ್ಯರು ನೀಡುತ್ತಿರುವ ಔಷಧಿಗಳನ್ನು ಮಾತ್ರವೇ ಪಡೆಯಬೇಕು. ಕೆಲವು ಫಾರ್ಮಾ ಕಂಪನಿಗಳು ಬೇಗ ಕಾಯಿಲೆಯನ್ನು ಗುಣಪಡಿಸುತ್ತೇವೆ ಎಂದು ಹೆಚ್ಚು ಡೊಸೇಜ್ ಇರುವ ಔಷಧಿ ನೀಡುತ್ತಾರೆ. ಕೆಲವೊಮ್ಮೆ ಅದರ ಪವರ್ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಹಾರ್ಟ್​ ಅಟ್ಯಾಕ್ ಜಾಸ್ತಿ ಆಗುತ್ತಿದೆ, ಕಿಡ್ನಿ ಪ್ರಾಬ್ಲಂ ​ಜಾಸ್ತಿಯಾಗುತ್ತಿದೆ. ಕೆಲವೊಮ್ಮೆ ರೋಗಕ್ಕಿಂತಲೂ ಇಂತಹ ಹೈ ಡೊಸೇಜ್​ ಔಷಧಿಯೇ ನಮ್ಮನ್ನು ಸಾಯಿಸಿ ಬಿಡುತ್ತದೆ. ದಯವಿಟ್ಟು ನೋಂದಾಯಿತ ವೈದ್ಯರ ಬಳಿಯೇ ನೀವು ಚಿಕಿತ್ಸೆ ಪಡೆಯುವುದು ಸೂಕ್ತ. ಸುಮ್ಮನೆ ಹತ್ತನೆ ತರಗತಿ ಪಾಸ್ ಆಗಿ ಪ್ರಾಕ್ಟೀಸ್ ಮಾಡುವವರ ಬಳಿ ಹೋಗಿ ನಿಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳಬೇಡಿ'' ಎಂದು ಆರೋಗ್ಯಾಧಿಕಾರಿ ಡಾ. ಗಾಯತ್ರಿ ವಿಜಯಕುಮಾರ್ ಅವರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ತಿಪಟೂರಿನ ಖಾಸಗಿ ಆಸ್ಪತ್ರೆ ಹೆಸರಿನಲ್ಲಿ ನಕಲಿ ವೆಬ್​ಸೈಟ್​: ಜನರಿಗೆ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.