ETV Bharat / state

ರೈಲಿನಲ್ಲಿ ಗುಂಡಿನ ದಾಳಿ ಪ್ರಕರಣ.. ಬೀದರ್ ಜಿಲ್ಲೆಯ ಪ್ರಯಾಣಿಕ ಹತ

author img

By

Published : Aug 1, 2023, 10:59 PM IST

Case of firing in a train
ರೈಲಿನಲ್ಲಿ ಗುಂಡಿನ ದಾಳಿ ಪ್ರಕರಣ: ಬೀದರ್ ಜಿಲ್ಲೆಯ ಪ್ರಯಾಣಿಕನ ಹತ್ಯೆ..!

ರಾಜಸ್ಥಾನದ ಜೈಪುರದಿಂದ ಮುಂಬೈಗೆ ಹೋಗುತ್ತಿದ್ದ ರೈಲಿನಲ್ಲಿ ಆರೋಪಿ ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್ ಮನಬಂದಂತೆ ಗುಂಡಿನ ದಾಳಿ ನಡೆಸಿ ನಾಲ್ವರನ್ನು ಹತ್ಯೆ ಮಾಡಿದ್ದನು. ಈ ಪ್ರಕರಣದಲ್ಲಿ ಬೀದರ್ ಜಿಲ್ಲೆಯ ಪ್ರಯಾಣಿಕನನ್ನು ಕೂಡ ಕೊಲೆ ಮಾಡಿದ್ದಾನೆ.

ಬೀದರ್: ಜೈಪುರ ಎಕ್ಸ್‌ಪ್ರೆಸ್‌ನಲ್ಲಿ ಸೋಮವಾರ ಬೆಳಗ್ಗೆ ನಡೆದಿದ್ದ ಗುಂಡಿನ ದಾಳಿ ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ರಾಜಸ್ಥಾನದ ಜೈಪುರದಿಂದ ಮುಂಬೈಗೆ ಬರುತ್ತಿದ್ದ ರೈಲಿನಲ್ಲಿ ಆರೋಪಿ ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್ ಮನಬಂದಂತೆ ಗುಂಡಿನ ದಾಳಿ ನಡೆಸಿ ನಾಲ್ವರನ್ನು ಹತ್ಯೆ ಮಾಡಿದ್ದನು. ಹತ್ಯೆಗೊಳಗಾದವರಲ್ಲಿ ಬೀದರ್ ಜಿಲ್ಲೆಯ ಒಬ್ಬ ಪ್ರಯಾಣಿಕ ಇರುವುದು ಬೆಳಕಿಗೆ ಬಂದಿದೆ.

ತಾಲೂಕಿನ ಹಮೀಲಾಪುರದ ನಿವಾಸಿ ಸೈಯದ್ ಸೈಫುದ್ದೀನ್ ಮುನಿರೊದ್ದೀನ್ ಗುಂಡಿಗೆ ಬಲಿಯಾದ ವ್ಯಕ್ತಿ. ಸೈಫುದ್ದೀನ್ ಕಳೆದ ಹಲವು ವರ್ಷಗಳಿಂದ ಹೈದರಾಬಾದ್​ನ ರಿಂಗ್ ಕೋಟಿ ಪ್ರದೇಶದ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಂಗಡಿಯ ಮಾಲೀಕರ ಜೊತೆಗೆ ರಾಜಸ್ಥಾನದ ಅಜ್ಮೇರ್​ಗೆ ಹೋಗಿ ರೈಲಿನಲ್ಲಿ ಬರುವಾಗ ಈ ಘಟನೆ ನಡೆದಿತ್ತು. ಸೈಫುದ್ದೀನ್ ಪತ್ನಿ ಹಾಗೂ ಮೂವರು ಪುತ್ರಿಯರು ಸ್ವಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ನೀರವಮೌನ ಆವರಿಸಿದೆ. ಮೃತದೇಹ ಬುಧವಾರ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಜೈಪುರ- ಮುಂಬೈ ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್​ಪ್ರೆಸ್ ರೈಲಿನಲ್ಲಿ ಸೋಮವಾರ ಬೆಳಗ್ಗೆ ಘಟನೆ ನಡೆದಿತ್ತು. ಆರ್​ಪಿಎಫ್​ನ ಕಾನ್​ಸ್ಟೆಬಲ್ ಚೇತನ್ ಸಿಂಗ್ ತನ್ನ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿಸಿ ತನ್ನ ಹಿರಿಯ ಅಧಿಕಾರಿಯೊಬ್ಬರ ಹತ್ಯೆ ಮಾಡಿದ ನಂತರ, ಮೂವರು ಪ್ರಯಾಣಿಕರನ್ನು ಸಹ ಗುಂಡು ಹಾರಿಸಿ ಕೊಂದಿದ್ದ. ಅದರಲ್ಲಿ ಬೀದರ್ ಜಿಲ್ಲೆಯ ಸೈಫುದ್ದೀನ್ ಸಹ ಒಬ್ಬರು.

ಪ್ರಕರಣದ ಹಿನ್ನೆಲೆ ಏನು?: ಸೋಮವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ರೈಲ್ವೆ ರಕ್ಷಣಾ ಪಡೆಯ ಕಾನ್‌ಸ್ಟೆಬಲ್ ಚೇತನ್ ಸಿಂಗ್ ಎಎಸ್‌ಐ ಟಿಕಾರಾಂ ಮೀನಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದನು. ಬಳಿಕ ಮತ್ತೊಂದು ಬೋಗಿಯಲ್ಲಿದ್ದ ಮೂವರು ಪ್ರಯಾಣಿಕರ ಮೇಲೆ ಗುಂಡು ಹಾರಿಸಿದ್ದು, ಅವರೂ ಸ್ಥಳದಲ್ಲೇ ಅವರು ಪ್ರಾಣ ಬಿಟ್ಟಿದ್ದಾರೆ. ನಂತರ ಮುಂದಿನ ನಿಲ್ದಾಣದಲ್ಲಿ ರೈಲು ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ವೇಳೆಯಲ್ಲಿ ಸಿಕ್ಕಿಬಿದ್ದಿದ್ದನು.

ಆರ್‌ಪಿಎಫ್ ಇನ್ಸ್‌ಪೆಕ್ಟರ್ ಜನರಲ್ (ಪಶ್ಚಿಮ ರೈಲ್ವೆ) ಪ್ರವೀಣ್ ಸಿನ್ಹಾ ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿದರು. ಅವನದು ಅಲ್ಪ ಕೋಪ. ಸುಲಭವಾಗಿ ಕೋಪಗೊಳ್ಳುವ ಪ್ರವೃತ್ತಿಯನ್ನು ಹೊಂದಿದ್ದನು. ಆ ವೇಳೆಯಲ್ಲಿ ದೊಡ್ಡ ಜಗಳ ಇರಲಿಲ್ಲ. ಆದ್ರೆ, ಕೋಪದ ಕ್ಷಣದಲ್ಲಿ ಅವನು ತನ್ನ ಹಿರಿಯ ಅಧಿಕಾರಿಯನ್ನು ಹೊಡೆದು ಹಾಕಿದ್ದಾನೆ. ಬಳಿಕ ಕಾಣಿಸಿಕೊಂಡವರಿಗೆ ಗುಂಡು ಹಾರಿಸುತ್ತಲೇ ಇದ್ದ ಎಂದು ಅಧಿಕಾರಿ ತಿಳಿಸಿದ್ದರು.

ಇದನ್ನೂ ಓದಿ: ಅಲ್​ಖೈದಾ ನಂಟು ಆರೋಪ: ರಾಜ್‌ಕೋಟ್‌ನ ಚಿನ್ನದ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.