ಬಸವಕಲ್ಯಾಣ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಓ) ಶಾರದಾ ಕಲ್ಮಲಕರ್ ಅವರು ಪಾರದರ್ಶಕ ಆಡಳಿತಕ್ಕೆ ಕೈಗನ್ನಡಿಯಾಗಿದ್ದಾರೆ. ಸಿಡಿಪಿಓ ಅವರ ಅಮಾನತು ದುರುದ್ದೇಶದಿಂದ ಕೂಡಿದೆ. ಹಾಗಾಗಿ ಅವರನ್ನು ಪುನಃ ಇಲ್ಲಿಯೇ ಸೇವೆ ಸಲ್ಲಿಸಲು ಅನುವು ಮಾಡಿಕೊಡಬೇಕು ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕೆಲ ಸಂಘಟನೆಗಳು ಮನವಿ ಮಾಡಿವೆ.
ಸಂಘಟನೆ ಪದಾಧಿಕಾರಿಗಳು ಮಿನಿ ವಿಧಾನಸೌಧಕ್ಕೆ ತೆರಳಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಸಾವಿತ್ರಿ ಸಲಗರ್ ಅವರಿಗೆ ಸಲ್ಲಿಸಲಾಯಿತು. ಕಲ್ಮಲಕರ್ ಅವರು ಇಲ್ಲಿ ಅಧಿಕಾರ ವಹಿಸಿಕೊಂಡ ನಂತರ ಸಾಕಷ್ಟು ಬದಲಾವಣೆ ತಂದಿದ್ದಾರೆ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಸಿಡಿಪಿಓ ಅವರನ್ನು ನಿರ್ಲಕ್ಷತೆ, ಕರ್ತವ್ಯ ಲೋಪದ ಆರೋಪದ ಮೇರೆಗೆ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಇದು ಸುಳ್ಳು ಅರೋಪವಾಗಿದೆ. ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಅವರಿಗೆ ಇಲ್ಲಿಯೇ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.
ಜೈ ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕ ಅಧ್ಯಕ್ಷ ರವಿ ನಾವದ್ಗೇಕರ್, ಕಲ್ಯಾಣ ಕರ್ನಾಟಕ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಧನರಾಜ ರಾಜೋಳೆ, ಅರವಿಂದ ದವಲೆ, ಪ್ರಮುಖರಾದ ಸೋಮನಾಥ ನಾವದ್ಗೇಕರ್, ಪದಾಧಿಕಾರಿಗಳಾದ ಸಂತೋಷ ಮಜನಾಯಕ, ಸಂಜೀವ ಪೂಜಾರಿ, ಲಖನ ಮುಜನಾಕ, ಉಮೇಶ ಸಂಗನೂರೆ ಉಪಸ್ಥಿತರಿದ್ದರು.