ಬಳ್ಳಾರಿ: ನಾನು ಮೊದಲೆಲ್ಲ ಗಂಡಾಗಿರಿ ಮಾಡುತ್ತಿದ್ದೆ, ಬಹಳ ಜಗಳ ಮಾಡುತ್ತಿದ್ದೆ. ಬಡವರಿಗೆ ತೊಂದರೆ ಮಾಡಿದಾಗ ಮಾತ್ರ ಇದೆಲ್ಲಾ ಇರುತ್ತಿತ್ತು. ಬಡವರೊಂದಿಗೆ ನಿಂತು ಜಗಳವಾಡಿ 14 ರಿಂದ 15 ಬಾರಿ ಜೈಲಿಗೂ ಹೋಗಿದ್ದೆ ಎಂದು ಸಚಿವ ಶ್ರೀರಾಮುಲು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ನಗರದ ವೀರಶೈವ ವಿದ್ಯಾರ್ಥಿ ಸಂಘದ ಎಸ್ಜಿ ಕಾಲೇಜಿನ ಅಮೃತ ಮಹೋತ್ಸವ ಮತ್ತು ದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಯಾಗಿದ್ದಾಗ ಕಾಪಿ ಹೊಡೆದು ಪಾಸಾಗಿದ್ದೇನೆ. ಕಾಪಿ ಹೊಡೆಯುವುದರಲ್ಲಿ ನಾನು ಪಿಹೆಚ್ಡಿ ಮಾಡಿದ್ದೇನೆ. ಓದು ನನ್ನ ತಲೆಗೆ ಹತ್ತಲಿಲ್ಲ. ಆದರೆ ಸಂಸ್ಕಾರ ಮಾತ್ರ ಬಿಡಲಿಲ್ಲ. ನಾನು ಭಾರಿ ಬುದ್ಧಿವಂತನಲ್ಲ. ಲಾಸ್ಟ್ ಬೆಂಚ್ ಸ್ಟೂಡೆಂಟ್. ಶಿಕ್ಷಕರು ಪ್ರೀತಿಯಿಂದ ಬೈಯ್ತಿದ್ರು ಎಂದರು.
ನಾನು 5 ಬಾರಿ ಶಾಸಕ, 4 ಬಾರಿ ಸಚಿವನಾಗಿರುವುದಕ್ಕೆ ವಿವಿ ಸಂಘ ಕಾರಣ. ಸಂಸ್ಕಾರ ಗೊತ್ತಿರದ ದಿನಗಳಲ್ಲಿ ನನಗೆ ಸಂಸ್ಕಾರ ನೀಡಿದ್ದು ಸಂಘ. ಶಿಕ್ಷಕರು ಬಂದಾಗ ಲಾಸ್ಟ್ ಬೆಂಚ್ನಲ್ಲಿ ಕುಳಿತು ಹಂಗಿಸುತ್ತಿದ್ದೆವು. ಕನ್ನಡ, ತೆಲುಗು, ಇಂಗ್ಲಿಷ್ ಬರಲ್ಲ ಎಂದು ಟೀಚರ್ಗಳು ನನಗೆ ಬೈಯುತ್ತಿದ್ದರು ಎಂದು ಹೇಳಿದರು.
ನಾನು ಜೈಲು ಸೇರಿದಾಗ ನನಗೆ ಬೇಲ್ ಕೊಡಿಸಲು ನಮ್ಮಪ್ಪ ವಕೀಲ ತಿಪ್ಪಣ್ಣನವರ ಬಳಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ನಿನಗೆ ಎಷ್ಟು ಬಾರಿ ಬೇಲ್ ಕೊಡಿಸಬೇಕು ಎಂದು ಅವರು ಹೇಳುತ್ತಿದ್ದರು. ಇದನ್ನೆಲ್ಲ ಬಿಟ್ಟು ನಿಮ್ಮಪ್ಪನ ಜತೆ ಕೆಲಸಕ್ಕೆ ಹೋಗು ಎಂದು ಬುದ್ಧಿವಾದ ಹೇಳಿದ್ದರು ಎಂದು ಶ್ರೀರಾಮಲು ತಿಳಿಸಿದರು.
ಇದನ್ನೂ ಓದಿ: ಜನಾರ್ದನ ರೆಡ್ಡಿಯವರ ಅಸಮಾಧಾನ ಹೋಗಲಾಡಿಸಲು ನಾನು ಸಿದ್ಧ: ಶ್ರೀರಾಮುಲು