ವಿಜಯನಗರ: ಜಿಲ್ಲೆಯ ಐತಿಹಾಸಿಕ ಮೈಲಾರಲಿಂಗೇಶ್ವರ ಜಾತ್ರೆಯ ವರ್ಷದ ಕಾರ್ಣಿಕೋತ್ಸವ ನಡೆಯಿತು. ಮುತ್ತಿನರಾಶಿ ಮೂರು ಭಾಗ ಆದಿತಲೆ ಪರಾಕ್ ಎಂದು ಗೊರವಯ್ಯ ಸ್ವಾಮಿ ಡೆಂಕನಮರಡಿಯಲ್ಲಿ ಬಿಲ್ಲನ್ನೇರಿ ಕಾರ್ಣಿಕವಾಣಿ ನುಡಿದಿದ್ದಾರೆ.
ಐತಿಹಾಸಿಕ ಸುಕ್ಷೇತ್ರ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನಲ್ಲಿ ನಡೆದ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ 20 ಅಡಿ ಎತ್ತರದ ಬಿಲ್ಲನೇರಿದ ಗೊರವಯ್ಯ ಸ್ವಾಮಿ ಬಿಲ್ಲನೇರಿ ಸದ್ದಲೇ ಎನ್ನುತ್ತಾ ಈ ವರ್ಷದ ಭವಿಷ್ಯವಾಣಿ “ಮುತ್ತಿನರಾಶಿ ಮೂರು ಭಾಗ ಆದಿತಲೆ ಪರಾಕ್” ಎಂದು ದೈವವಾಣಿ ನುಡಿದಿದ್ದಾರೆ.
ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರಣಿಕವನ್ನು ವಿಶ್ಲೇಷಿಸಿದ್ದು, ಮೂರು ಭಾಗದಲ್ಲಿ ಮಳೆ ಬೆಳೆ ಸಮೃದ್ಧಿಯಾಗಿ, ಒಂದು ಭಾಗದಲ್ಲಿ ಸ್ವಲ್ಪ ಸಮಸ್ಯೆ ಆಗಲಿದೆ. ರಾಜಕೀಯವಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಸರ್ಕಾರ ಛಿದ್ರ ಛಿದ್ರ ಆಗಲಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವ ಮುನ್ಸೂಚನೆ ಇದೆ ಎಂದು ಕಾರ್ಣಿಕವಾಣಿಯನ್ನು ವಿಶ್ಲೇಷಣೆ ಮಾಡಿದರು.
ಮಾಜಿ ಸಚಿವ ಪಿ.ಟಿ ಪರಮೇಶ್ವರ್ ನಾಯಕ್ ರಾಜ್ಯದಲ್ಲಿ ರಾಜಕೀಯವಾಗಿ ಮೂರು ಭಾಗ ಆಗುವ ಸಾದ್ಯತೆ ಇದೆ. ಯಡಿಯೂರಪ್ಪ ಒಂದು ಭಾಗ, ಯತ್ನಾಳ್ ಇನ್ನೊಂದು ಭಾಗ ಮತ್ತು ಬಿಜೆಪಿಗೆ ಹೋದವರು ಒಂದು ಭಾಗವಾಗಿ ಛಿದ್ರ ಛಿದ್ರವಾಗಲಿದ್ದಾರೆ ಎಂದು ವಿಶ್ಲೇಷಣೆ ಮಾಡಿದರು.
ಗೊರವಪ್ಪ 11 ದಿನಗಳ ಕಾಲ ಉಪವಾಸ ವೃತ ಕೈಗೊಂಡಿರುತ್ತಾರೆ. 11 ದಿನಗಳ ಕಾಲ ಬಂಡಾರದ ನೀರು ಕುಡಿಯುವ ಗೊರವಪ್ಪ ಕಾರ್ಣಿಕ ನುಡಿದ ನಂತರ ಉಪವಾಸ ವೃತ ಪೂರ್ಣಗೊಳಿಸುತ್ತಾರೆ. ಕಾರ್ಣಿಕ ನುಡಿಯುವ ದಿನ ಸ್ವತಃ ಮೈಲಾರಲಿಂಗೇಶ್ವರನೇ ಗೊರವಪ್ಪನ ರೂಪದಲ್ಲಿ ವರ್ಷದ ಭವಿಷ್ಯವಾಣಿ ನುಡಿಯುತ್ತಾನೆ ಎಂಬ ನಂಬಿಕೆ ಇಲ್ಲಿ ಮನೆ ಮಾಡಿದೆ.
ಈ ಕಾರ್ಣಿಕ ಕೇಳಲು ರಾಜ್ಯ ಸೇರಿದಂತೆ ಆಂಧ್ರಪ್ರದೇಶದಿಂದ ಭಕ್ತರು ಆಗಮಿಸಿದ್ದರು. ಕೊರೊನಾ ಕರಿನೆರಳಿನ ನಡುವೆ ಸಹ ಕಾರ್ಣಿಕ ಕೇಳಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಜಾತ್ರೆ ಹಿನ್ನೆಲೆಯಲ್ಲಿ ಮೈಲಾರಲಿಂಗೇಶ್ವರನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.