ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಸ್ಮಾರಕಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆ, ವಿಶ್ವಪರಂಪರೆ ಹಂಪಿ ಅಭಿವೃದ್ಧಿ ನಿರ್ವಹಣಾ ಪ್ರಾಧಿಕಾರ ಕಣ್ಣು ಮುಚ್ಚಿ ಕುಳಿತುಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.
ಹಂಪಿಯ ವಿಜಯ ವಿಠ್ಠಲ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಹರೇ ಶಂಕರ ಮಂಟಪವಿದೆ. ಇದು ರಸ್ತೆ ಮಧ್ಯದಲ್ಲಿದ್ದು, ಬೃಹತ್ ವಾಹನಗಳು ಈ ರಸ್ತೆ ಮೂಲಕ ಹೋಗಲು ಸಾಧ್ಯವಿಲ್ಲ. ರಸ್ತೆ ಕಿರಿದಾಗಿದ್ದರೂ ವಾಹನಗಳು ಸಂಚರಿಸುತ್ತಿರುವುದು ಇಲಾಖೆಯ ಲೋಪದೋಷಕ್ಕೆ ಕೈಗನ್ನಡಿಯಾಗಿದೆ.
ದ್ವಾರದ ಇತಿಹಾಸ:
ದ್ವಾರವನ್ನು ತಾಳಾರಿಘಟ್ಟ ಬಾಗಿಲು ಎಂದು ಕರೆಯಲಾಗುತ್ತದೆ. ಜನರು ಆಡು ಭಾಷೆಯಲ್ಲಿ ಅಗಸಿ ದ್ವಾರ ಎಂದು ಕರೆಯುತ್ತಾರೆ. ಆದರೆ, ಶಾಸನಗಳಲ್ಲಿ ಅರೆಶಂಕರಬಾವಿ ಬಾಗಿಲು ಎಂದು ಉಲ್ಲೇಖಗೊಂಡಿದೆ. ಈ ದ್ವಾರವು ವಿಜಯನಗರ ಪಟ್ಟಣ ಈಶಾನ್ಯಕ್ಕಿದ್ದು ತುಂಗಭದ್ರಾ ನದಿಯ ತೀರದಲ್ಲಿರುವ ತಾಳಾರಿಘಟ್ಟಕ್ಕೆ ಹೋಗುವ ಮುಖ್ಯದ್ವಾರವಾಗಿದೆ. ಕಿರಿದಾದ ಈ ದ್ವಾರವು ಇಕ್ಕೆಲಗಳಲ್ಲಿ ರಾಜಧಾನಿಯನ್ನು ಸುತ್ತುವರೆದಿರುವ ಕೋಟೆಯ ಗೋಡೆಯನ್ನು ಹೊಂದಿದೆ. ದ್ವಾರವು ಎರಡು ಅಂತಸ್ತುಗಳಲ್ಲಿ ನಿರ್ಮಾಣಗೊಂಡಿದ್ದು, ಮೇಲಿನ ಅಂತಸ್ತಿನಲ್ಲಿ ಕಾವಲುಗಾರರಿಗೆ ಒಂದು ಸಣ್ಣ ಮಂಟಪ ಹೊಂದಿದೆ. ಮಂಟಪವನ್ನು ಗಾರೆಯಿಂದ ನಿರ್ಮಿಸಿರುವ ಕಮಾನುಗಳಿಂದ ಅಲಂಕರಿಸಲಾಗಿದೆ. ದ್ವಾರದ ಉತ್ತರ ಮತ್ತು ದಕ್ಷಿಣಕ್ಕೆ ಮಂದಿರಗಳಿದ್ದು, ಉತ್ತರಕ್ಕೆ ವೀರಾಂಜನೇಯ ಮೂರ್ತಿ ಇದೆ.
ಭದ್ರತೆ ಲೋಪ:
ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆ ಮಂಟಪಕ್ಕೆ ಅಷ್ಟೊಂದು ಭದ್ರತೆ ನೀಡಿಲ್ಲ. ಕಾಟಾಚಾರಕ್ಕೆ ಸಿಬ್ಬಂದಿಯನ್ನು ನೇಮಿಸಲಾಗಿದೆ. ಸ್ಥಳದಲ್ಲಿ ಒಂದು ವೇಳೆ ಸಿಬ್ಬಂದಿ ಇಲ್ಲದಿದ್ದರೆ ಆ ಸಮಯದಲ್ಲಿ ಭಾರಿ ಗಾತ್ರದ ವಾಹನಗಳು ಓಡಾಡುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಶಿಫ್ಟ್ ರೀತಿಯಲ್ಲಿ ಯಾವುದೇ ನೌಕರರು ಇಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ.
ಸ್ಮಾರಕ ಧಕ್ಕೆ:
ವಾಹನಗಳು ಪದೇ ಪದೆ ಸಿಲುಕಿಕೊಂಡ ಪರಿಣಾಮ ಮಂಟಪದ ಮೇಲ್ಭಾಗಕ್ಕೆ ಧಕ್ಕೆಯಾಗಿದೆ. ಸ್ಮಾರಕದ ಕಲ್ಲುಗಳಿಗೆ ವಾಹನಗಳು ತೆರೆದುಕೊಂಡು ಹೋಗಿರುವ ಗುರುತುಗಳಿವೆ. ಹೀಗೆ ಪದೇ ಪದೆ ವಾಹನಗಳು ಸ್ಮಾರಕದೊಳಗೆ ಸಿಲುಕಿಕೊಂಡರೆ, ಐತಿಹಾಸಿಕ ಕುರುಹು ಅವನತಿಯಾಗುವುದರಲ್ಲಿ ಅನುಮಾನವಿಲ್ಲ.
ಭಾರಿ ವಾಹನಗಳು ಓಡಾಡದಂತೆ ನಾಮಫಲಕಗಳಿಲ್ಲ:
ಕಮಲಾಪುರದಿಂದ ವಾಹನಗಳು ವಿಜಯ ವಿಠ್ಠಲ ದೇವಸ್ಥಾನಕ್ಕೆ ತೆರಳಬಹುದು. ಈ ವೇಳೆ ಭಾರಿ ವಾಹನಗಳು ಓಡಾಡದಂತೆ ನಾಮಫಲಕ ಅಳವಡಿಸುವ ಗೋಜಿಗೆ ಪುರಾತತ್ವ ಹೋಗಿಲ್ಲ. ಅಲ್ಲದೇ, ಒಂದು ವೇಳೆ ವಾಹನಗಳು ಸಂಚರಿಸಿದರೆ ಕಠಿಣ ಶಿಕ್ಷೆ ಒಳಪಡಿಸಲಾಗುವುದು ಎಂದು ನಿಯಮಗಳನ್ನು ಅಳಪಡಿಸಬೇಕು. ಆಗ ವಾಹನಗಳು ಸಂಚರಿಸುವುದನ್ನು ನಿಲ್ಲಿಸಬಹುದು.