ಬೆಳಗಾವಿ: ನನ್ನ ತಾಯಿ ಪಡುತ್ತಿರುವ ಕಷ್ಟ ನೋಡಿ ತಡೆದುಕೊಳ್ಳಲಾಗದೇ ನನ್ನ ಕಣ್ಣಲ್ಲಿ ನೀರು ಬರುತ್ತಿದೆ. ರಾತ್ರಿ ಸರಿಯಾಗಿ ನಿದ್ರೆಯೂ ಬರುತ್ತಿಲ್ಲ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಕ್ಷೇತ್ರದ ಮತದಾರರ ಎದುರು ಅಳಲು ತೋಡಿಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ನಡೆದ ಕೆರೆ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮೃಣಾಲ್ ಹೆಬ್ಬಾಳ್ಕರ್ ಮಾತನಾಡಿ, ಡಿಕೆಶಿ ಅಕ್ರಮ ಹಣಕಾಸು ಸಂಪಾದನೆ ವಿಚಾರವಾಗಿ ಹೆಬ್ಬಾಳ್ಕರ್ ಎರಡು ದಿನ ಇಡಿ ವಿಚಾರಣೆಗೆ ಹಾಜರಾಗಿದ್ದರು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ನನ್ನ ತಾಯಿ ಕಷ್ಟದಲ್ಲಿದ್ದಾರೆ ಎಂದು ಮೃಣಾಲ್ ಹೇಳಿಕೊಂಡಿದ್ದಾರೆ.
ಎಂಥದ್ದೇ ಕಷ್ಟ ಬಂದರೂ ನನ್ನ ತಾಯಿಯ ಮುಖದಲ್ಲಿ ನಗು ಇರುತ್ತದೆ. ನನ್ನ ತಾಯಿಯ ಈ ಗುಣವನ್ನು ನಾವೆಲ್ಲರೂ ಕಲಿಯಬೇಕಿದೆ. ನಿಮಗೆ ಕಾಲು ಮುಗಿದು ಕೇಳುತ್ತಿದ್ದೇನೆ. ನಿಮ್ಮ ಆಶೀರ್ವಾದ ನಮ್ಮ ತಾಯಿಯ ಮೇಲಿರಲಿ. ನಿಮ್ಮ ಆಶೀರ್ವಾದ ಇದ್ದಷ್ಟು ನಾವು ಕ್ಷೇತ್ರದ ಒಳ್ಳೆಯ ಕೆಲಸ ಮಾಡುತ್ತೇವೆ. ಈ ಕಾರ್ಯಕ್ರಮಕ್ಕೆ ನನ್ನ ತಾಯಿ ಬರಬೇಕಿತ್ತು. ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಬರಲು ಅವರಿಗೆ ಸಾಧ್ಯವಾಗಿಲ್ಲ ಎಂದು ಮೃಣಾಲ್ ಹೇಳಿದರು.