ETV Bharat / state

ನಾಳೆಯಿಂದ ಎರಡು ದಿನ ಬೆಳಗಾವಿಯಲ್ಲಿ ಶಫರ್ಡ್ಸ್‌ ಇಂಡಿಯಾ ಇಂಟರ್ನ್ಯಾಷನಲ್ ರಾಷ್ಟ್ರೀಯ ಸಮಾವೇಶ

author img

By ETV Bharat Karnataka Team

Published : Oct 1, 2023, 10:35 PM IST

ಕುರುಬರ ಸಮಾವೇಶದಲ್ಲಿ ದೇಶ ಸೇರಿದಂತೆ ರಾಜ್ಯದ ಮೂಲೆಮೂಲೆಗಳಿಂದ ಜನರು ಆಗಮಿಸಲಿದ್ದಾರೆ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ತಿಳಿಸಿದರು.

MLC H Vishwanath gave information.
ಕುರುಬರ ಸಮಾವೇಶದ ಬಗ್ಗೆ ಎಂಎಲ್ಸಿ ಎಚ್ ವಿಶ್ವನಾಥ ಮಾಹಿತಿ ನೀಡಿದರು.

ಬೆಳಗಾವಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಮೊದಲ ಬಾರಿಗೆ ಕುರುಬ ಸಮಾಜದಿಂದ ಅ.2 ಮತ್ತು 3 ರಂದು ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ಶಫರ್ಡ್ಸ್‌ ಇಂಡಿಯಾ ಇಂಟರ್ನ್ಯಾಷನಲ್ ರಾಷ್ಟ್ರೀಯ ಅಧಿವೇಶನ ನಡೆಯುತ್ತಿದೆ ಎಂದು ಶಫರ್ಡ್ಸ್‌ ಇಂಡಿಯಾ ಇಂಟರ್ನ್ಯಾಷನಲ್ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮ ನಡೆಯಲಿರುವ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುರುಬ ಸಮಾಜದ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ನಾವು ಏನೇನೂ ಕೇಳಬಹುದು ಎಂದು ಅಕ್ಟೋಬರ್ 2ರಂದು ನಡೆಯುವ ಸಭೆಯಲ್ಲಿ ಚರ್ಚೆ ನಡೆಸಿ ಅ.3 ರಂದು ನಡೆಯುವ ಅಧಿವೇಶನದಲ್ಲಿ ನಿರ್ಧಾರ ಪ್ರಕಟಿಸುವ ಕುರಿತು ಸಿದ್ಧತೆ ನಡೆಸಿದ್ದೇವೆ. ರಾಷ್ಟ್ರದಲ್ಲಿ ಎಲ್ಲರ ಜೊತೆಗೆ ಬದುಕಿ ಬಾಳುತ್ತಿರುವ ಕುರುಬ ಸಮುದಾಯವು ಇದೇ ಮೊದಲ‌ ಬಾರಿಗೆ ರಾಷ್ಟ್ರೀಯ ಅಧಿವೇಶನವನ್ನು ಬೆಳಗಾವಿಯಲ್ಲಿ ಆಯೋಜಿಸುತ್ತಿದೆ ಎಂದರು.

ಬ್ರಿಟಿಷರ್ ವಿರುದ್ಧ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದ ಕಿತ್ತೂರು ರಾಣಿ ಚನ್ನಮ್ಮ‌ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರನ್ನು ಬೃಹತ್ ವೇದಿಕೆಗೆ ಇಡಲಾಗಿದೆ. ಈ ಒಂದು ಅಧಿವೇಶನದಲ್ಲಿ ಕುರುಬ ಸಮಾಜದಿಂದ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರಿಗೆ ಬೇರೆ ಬೇರೆ ರಾಜ್ಯದಿಂದ ಬರುತ್ತಿರುವ ಪ್ರತಿನಿಧಿಗಳು ರಾಷ್ಟ್ರೀಯ ಅಭಿನಂದನೆಗಳನ್ನು ಸಲ್ಲಿಸಿ ಸತ್ಕರಿಸಲಿದ್ದಾರೆ ಎಂದು ಹೇಳಿದರು.

ಶಫರ್ಡ್ಸ್‌ ಇಂಡಿಯಾ ಇಂಟರ್ನ್ಯಾಷನಲ್ ರಾಷ್ಟ್ರ ಮಟ್ಟದ ಅಧಿವೇಶನದ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ನಾಯಕತ್ವ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಬೆಳಗಾವಿ ಜಿಲ್ಲೆಯ ಶಾಸಕರ ಸಹಕಾರದೊಂದಿಗೆ ಅ.3 ರಂದು ಈ‌ ಅಧಿವೇಶನ ನಡೆಯಲಿದೆ. ಅ.2 ರಂದು ನಗರದ ಖಾಸಗಿ ಹೋಟೆಲ್ ನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿದೆ ಎಂದರು.

ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮಾತನಾಡಿ, ಅಧಿವೇಶನದಲ್ಲಿ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗುತ್ತಿದೆ. ದೇಶದ ಕುರುಬರ ಹಿತದೃಷ್ಟಿಯಿಂದ ಸುಮಾರು 10 ಬೇಡಿಕೆಗಳನ್ನು ಅಧಿವೇಶನದಲ್ಲಿ ಮಂಡಿಸಲಿದ್ದೇವೆ. ಪ್ರಮುಖವಾಗಿ ಕೇಂದ್ರ ಸರಕಾರದ‌ ಅಂಗಳದಲ್ಲಿರುವ ಕುರುಬ ಸಮಾಜದ ಎಸ್ಟಿ ಮೀಸಲಾತಿಯನ್ನು ಶೀಘ್ರದಲ್ಲೇ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಬೆಳಗಾವಿ ಕೆಎಂಎಫ್ ಅಧ್ಯಕ್ಷ ವಿವೇಕರಾವ್ ಪಾಟೀಲ, ವೇದ ಪ್ರಕಾಶ, ಕುರುಬರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ, ಪ್ರೇಮ ಲತಾ, ಲಕ್ಷ್ಮಣರಾವ್ ಚಿಂಗಳೆ ಸೇರಿ ಮತ್ತಿತರರು ಇದ್ದರು.

ಇದನ್ನೂಓದಿ: ಶಾಮನೂರು ಶಿವಶಂಕರಪ್ಪನವರು ಒಂದು ಜಾತಿಯ ಪಕ್ಷದ ಪ್ರತಿನಿಧಿಯಂತೆ ಮಾತನಾಡುತ್ತಿರುವುದು ಸರಿಯಲ್ಲ: ಹೆಚ್‌.ವಿಶ್ವನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.