ಬೆಳಗಾವಿ: ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ಸೆಮಿ ಅಟೋಮೆಟಿಕ್ ನಾಡ ಪಿಸ್ತೂಲ್, ಮೂರು ಜೀವಂತ ಗುಂಡನ್ನು ಇಟ್ಟುಕೊಂಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಖಾನಾಪೂರ ತಾಲೂಕಿನ ಉಚ್ಚವಡೆ ಕ್ರಾಸ್ ಬಳಿ ಕಾರು ಮತ್ತು ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ನಾಲ್ವರಿರುವ ಅನುಮಾನಸ್ಥ ಗುಂಪೊಂದು ರಸ್ತೆ ಬದಿಗೆ ಕಾರ ನಿಲ್ಲಿಸಿಕೊಂಡು ಹರಟೆ ಹೊಡೆಯುತ್ತಿತ್ತು. ಈ ವೇಳೆ ಖಾನಾಪೂರ ಸಿಪಿಐ ಸುರೇಶ್ ಶಿಂಗಿ ಸೇರಿ ತಮ್ಮ ತಂಡದ ಪೊಲೀಸರು ಗುಂಪಿನಲ್ಲಿದ್ದವರನ್ನು ವಿಚಾರಿಸಿದ್ದಾರೆ. ಈ ವೇಳೆ ಗುಂಪಿನಲ್ಲಿದ್ದ ಮೂರು ಜನರು ಓಡಿ ಹೋಗಿದ್ದಾರೆ.
ಸಂಶಯಗೊಂಡ ಪೊಲೀಸರು ಇನ್ನುಳಿದ ಜನರನ್ನು ವಿಚಾರಿಸಿ ತಪಾಸಣೆಗೆ ಒಳಪಡಿಸಿದಾಗ ಅವರ ಬಳಿ ಯಾವುದೇ ಪರವಾನಗಿ ಇಲ್ಲದ ಸೆಮಿ ಅಟೋಮೆಟಿಕ್ ನಾಡ ಪಿಸ್ತೂಲ್ ಸಿಕ್ಕಿದೆ. ಆಗ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಹೆಚ್ಚಿನ ತನಿಖೆ ಕೈಗೊಂಡ ಪೊಲೀಸರು ಬಂಧಿತರಿಂದ ಮೂರು ಜೀವಂತ ಗುಂಡು, ಮೊಬೈಲ್ಗಳು, 34 ಸಾವಿರ ರೂ. ನಗದು, ಟಾಟಾ ಇಂಡಿಕಾ ಕಾರು, ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಸದ್ಯ ಐವರು ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಬಂಧಿತರನ್ನು ಮಹಾರಾಷ್ಟ್ರದ ಚಂದಗಡ ತಾಲೂಕಿನ ಕಾಲಕುಂದ್ರಿಯ ತುಳಸಿದಾಸ ಜೋಶಿ (32), ವಡಗಾಂವಿಯ ಸತೀಶ ಅಲಿಯಾಸ್ ಸಚಿನ್ ಡವಳೆ(27), ಧಾರವಾಡ ಜಿಲ್ಲೆ ಅಣ್ಣಿಗೇರಿಯ ಉಮೇಶ್ ಬಿಳೆಯಲಿ(32), ಗದಗಿನ ಅಂತೂರ ಬೆಂತೂರಿನ ಗುರವಯ್ಯಾ ಲಗಮಯ್ಯನವರ (32) ಎಂದು ಗುರುತಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಪಿಐ ಸುರೇಶ್ ಶಿಂಗಿ, ಪಿಎಸ್ಐ ಬಸನಗೌಡ ಪಾಟೀಲ್, ಪ್ರೊಬೆಷನರಿ ಪಿಎಸ್ಐ ಬಸಗೌಡ ನೇರ್ಲಿ ಸೇರಿದಂತೆ ಇನ್ನಿತರ ಪೊಲೀಸ್ ಇಲಾಖೆ ಸಿಬ್ಬಂದಿಗಳು ಭಾಗಿಯಾಗಿದ್ದರು. ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ ಅಮರನಾಥ ರೆಡ್ಡಿ ಹಾಗೂ ಸಹಾಯಕ ಎಎಸ್ ಪಿ ಪ್ರದೀಪ್ ಗುಂಟೆ ಅವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿಸಿದ್ದಾರೆ.ಈ ಕುರಿತು ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.