ETV Bharat / state

ಪ್ರತಿಪಕ್ಷದ ಗದ್ದಲ ಮುಂದುವರಿಕೆ: ಮಾತುಕತೆಗೆ ಕಲಾಪವನ್ನು ಮುಂದೂಡಿದ ಸಭಾಪತಿ

author img

By

Published : Dec 22, 2022, 5:11 PM IST

Updated : Dec 22, 2022, 5:49 PM IST

oppositions-uproar-continues-chairman-adjourned-proceedings-for-talks
ಪ್ರತಿಪಕ್ಷದ ಗದ್ದಲ ಮುಂದುವರಿಕೆ: ಮಾತುಕತೆಗೆ ಕಲಾಪವನ್ನು ಮುಂದೂಡಿದ ಸಭಾಪತಿ

ವಿಧಾನ ಪರಿಷತ್ ಭೋಜನ ವಿರಾಮದ ನಂತರ ಸದನವನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಆರಂಭಿಸಲಾಗಿದೆ. ಇದರಿಂದಾಗಿ ಸಮಸ್ಯೆ ಎದುರಾಗಿದೆ ಎಂದು ಕಾಂಗ್ರೆಸ್​ ಸಚೇತಕ ಪ್ರಕಾಶ್​ ರಾಥೋಡ್​ ತಿಳಿಸಿದರು.

ಪ್ರತಿಪಕ್ಷದ ಗದ್ದಲ ಮುಂದುವರಿಕೆ: ಮಾತುಕತೆಗೆ ಕಲಾಪವನ್ನು ಮುಂದೂಡಿದ ಸಭಾಪತಿ

ಬೆಳಗಾವಿ: ವಿಧಾನ ಪರಿಷತ್ ಭೋಜನ ವಿರಾಮದ ನಂತರ ಪ್ರಶ್ನೆ ಒಂದಕ್ಕೆ ಉತ್ತರಿಸಿದ ಕೃಷಿ ಸಚಿವರು ಬಿ ಸಿ ಪಾಟೀಲ್​, ರಾಜ್ಯ ಕೃಷಿ ಇಲಾಖೆಯಿಂದ ರೈತರಿಗೆ ನೀಡಿರುವ ಇನ್ಪುಟ್ ಸಬ್ಸಿಡಿಯ ವಿವರವನ್ನು ನೀಡಿದರು. ಆದರೆ ಈ ಉತ್ತರವನ್ನು ಖಂಡಿಸಿದ ಕಾಂಗ್ರೆಸ್ ಸದಸ್ಯರು ನಾವು ಬಾವಿಯಲ್ಲಿದ್ದು ಈ ಚರ್ಚೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಸದನ ಸರಿಯಾದ ಸ್ಥಿತಿಯಲ್ಲಿ ಇಲ್ಲದ ಸಂದರ್ಭ ಯಾವುದೇ ಚರ್ಚೆಗೆ ಅವಕಾಶ ಕೊಡಬಾರದು ಎಂದು ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್ ತಿಳಿಸಿದರು. ಸಚಿವರು ಈಗಾಗಲೇ ಉತ್ತರ ನೀಡುತ್ತಿದ್ದು ಅದು ಮುಗಿದ ಬಳಿಕ ಅಂದರೆ ಇನ್ನು ಐದು ನಿಮಿಷದ ಬಳಿಕ ಅವಕಾಶ ನೀಡುವುದಾಗಿ ಭರವಸೆ ನೀಡಿದರು.

ನಮಗೆ 3.30ಕ್ಕೆ ಆಗಮಿಸುವಂತೆ ತಿಳಿಸಿ 10 ನಿಮಿಷ ಮುಂಚಿತವಾಗಿಯೇ ಸದನವನ್ನು ಆರಂಭಿಸಲಾಗಿದೆ. ಇದರಿಂದಾಗಿ ಸಮಸ್ಯೆ ಎದುರಾಗಿದೆ ಎಂದು ಪ್ರಕಾಶ್​ ರಾಥೋಡ್​ ತಿಳಿಸಿದರು. ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಧ್ಯಪ್ರವೇಶಿಸಿ ತೊಗರಿ ಬೆಳೆ ಸಮಸ್ಯೆ ಬಗ್ಗೆ ಸಚಿವರು ಮಾತನಾಡುತ್ತಿದ್ದಾರೆ ಸಹಕರಿಸಿ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಗದ್ದಲ ಹೆಚ್ಚಾದಾಗ ಅವಧಿಗೆ ಮುನ್ನ ಯಾಕೆ ನಾನು ಸದನವನ್ನು ಕರೆಯಬಾರದು? ಅನಗತ್ಯವಾಗಿ ಗಲಾಟೆ ಮಾಡಲು ನೀವು ಬಂದಿದ್ದೀರಾ? ಉದ್ದೇಶಪೂರ್ವಕವಾಗಿ ಗದ್ದಲ ಸೃಷ್ಟಿಸುವುದೇ ನಿಮ್ಮ ಉದ್ದೇಶವಾ ಎಂದು ಪ್ರಶ್ನಿಸಿದರು.

ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಮಾತನಾಡಿ, ಮಧ್ಯಾಹ್ನ 3:30ಕ್ಕೆ ಕಲಾಪ ಆರಂಭಿಸುತ್ತೇನೆ ಎಂದು ಭರವಸೆ ನೀಡಿದ್ದೀರಿ. ಆದರೆ ಕೋರಂ ಇರುವ ಹಿನ್ನೆಲೆ ಕೊಂಚ ಮುಂಚೆ ಕಲಾಪ ಆರಂಭಿಸಿದ್ದೀರಿ. ಗಂಭೀರ ವಿಚಾರದ ಮೇಲೆ ಆಡಳಿತ ಪಕ್ಷದ ನಾಯಕರು ಆರೋಪ ಮಾಡಿದ್ದಾರೆ.

ಮಾಜಿ ಪ್ರಧಾನಿ ಹಾಗೂ ಮಾಜಿ ಸ್ಪೀಕರ್ ವಿರುದ್ಧ ಬಿಜೆಪಿ ನಾಯಕರು ಅವಹೇಳನ ಮಾಡಿ ಓಡಿ ಹೋಗಿದ್ದಾರೆ. ಅವರು ಕ್ಷಮೆ ಕೇಳುವವರೆಗೂ ನಾವು ಸಾಧನ ನಡೆಯಲು ಬಿಡುವುದಿಲ್ಲ. ನಮ್ಮ ಕಡೆಯಿಂದ ತಪ್ಪಿದ್ದರೆ ನಾನು ರಾಜೀನಾಮೆ ಸಲ್ಲಿಸುತ್ತೇನೆ. ಅವರ ತಪ್ಪಿದ್ದರೆ ಅವರು ರಾಜೀನಾಮೆ ಸಲ್ಲಿಸುತ್ತಾರ ಎಂದು ಪ್ರಶ್ನಿಸಿದರು.

ಈ ಮಾತಿನಿಂದಾಗಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಕಾಂಗ್ರೆಸ್ ಸದಸ್ಯರು ಬಾವಿಯಲ್ಲೇ ಇದ್ದು ಆಕ್ರೋಶ ವ್ಯಕ್ತಪಡಿಸಿದರೆ, ಆಡಳಿತ ಪಕ್ಷದ ಪರವಾಗಿ ಸಚಿವ ಎಸ್ ಟಿ ಸೋಮಶೇಖರ್ ಹಾಗೂ ಸಭಾ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಸಮಜಾಯಿಸಿ ನೀಡುವ ಪ್ರಯತ್ನ ಮಾಡಿದರು. ಬಾವಿಗಿಳಿದ ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದರೆ ಆಡಳಿತ ಪಕ್ಷದ ಸದಸ್ಯರು ಕಾಂಗ್ರೆಸ್ ವಿರುದ್ಧ ಆರೋಪ ಮುಂದುವರಿಸಿದರು.

ಅರ್ಧಕ್ಕೆ ನಿಂತ ತೊಗರಿ ಬೆಳೆಗಾರರ ಸಮಸ್ಯೆ: ತೊಗರಿ ಬೆಳೆಗಾರರ ಹಾಗೂ ಬೆಳೆ ನಷ್ಟದ ಕುರಿತು ಸಚಿವ ಬಿಸಿ ಪಾಟೀಲ್ ನೀಡುತ್ತಿದ್ದ ವಿವರಣೆ ಅರ್ಧಕ್ಕೆ ನಿಂತಿತು. 40% ಭ್ರಷ್ಟ ಸರ್ಕಾರ, ಜೈಲಿಗೆ ಹೋಗಿ ಬಂದವರು ಸಿಎಂ ಆದ ಸರ್ಕಾರ, ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ದಿಕ್ಕಾರ ಎಂದು ಘೋಷಣೇ ಕೂಗಿದರು. ಅನಗತ್ಯವಾಗಿ ಕಲಾಪದ ಸಮಯವನ್ನು ಹಾಳು ಮಾಡಲಾಗುತ್ತಿದೆ ಎಂದು ಆಡಳಿತ ಪಕ್ಷದ ಸದಸ್ಯರು ದೂರಿದರು. ಬಿಜೆಪಿ ಸದಸ್ಯ ರವಿಕುಮಾರ್ ತಮ್ಮ ಸ್ಥಳದಲ್ಲೇ ನಿಂತು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದರು.

ಸಭಾ ನಾಯಕರು ಎದ್ದುನಿಂತು ಸಂಧಾನ ನಡೆಸುವ ಯತ್ನ ಮಾಡಿ, ಈ ರೀತಿ ಸದನ ನಡೆಸುವುದಕ್ಕಿಂತ ರದ್ದುಪಡಿಸುವುದು ಯಾಕೆ ತಪ್ಪಲ್ಲ? ಬೇಡದ ವಿಚಾರವನ್ನು ನನ್ನ ಬಾಯಿಂದ ಹೇಳಿಸಬೇಡಿ. ಬಾಯಿಗೆ ಬಂದಂತೆ ಮಾತನಾಡಬೇಡಿ ಹುಡುಗಾಟಿಕೆ ಮಾಡಬೇಡಿ. ದಯವಿಟ್ಟು ಸದನವನ್ನು ಸುಗಮವಾಗಿ ನಡೆಸಲು ಅವಕಾಶ ಮಾಡಿಕೊಡಿ ಎಂದು ಕೇಳಿದರು.

ಕೇವಲ ಪ್ರತಿಪಕ್ಷದ ನಾಯಕರನ್ನ ಗುರಿಯಾಗಿಸಬೇಡಿ: ಕಾಂಗ್ರೆಸ್ ಸದಸ್ಯ ನಜೀರ್ ಅಹ್ಮದ್​ಗೆ ಸರಿಯಾದ ರೀತಿಯಲ್ಲಿ ಮಾತನಾಡಲು ಕಲಿಸಿ. ತುಂಬಾ ಉದ್ದಟತನದಿಂದ ಮಾತನಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕರಿಗೆ ತಾಕೀತು ಮಾಡಿದರು. ಪ್ರತಿಪಕ್ಷ ನಾಯಕ ಡಿಕೆ ಹರಿಪ್ರಸಾದ್, ಮಧ್ಯಪ್ರವೇಶಿಸಿ ಆಡಳಿತ ಪಕ್ಷದ ಸದಸ್ಯರು ತಮ್ಮ ಮಾತಿಗೆ ಕ್ಷಮೆ ಕೇಳಬೇಕು, ನೀವು ಸಹ ಆಡಳಿತ ಪಕ್ಷದ ಸದಸ್ಯರಿಗೆ ಮಾಹಿತಿ ನೀಡಿ ಕೇವಲ ಪ್ರತಿಪಕ್ಷದ ನಾಯಕರನ್ನ ಮಾತ್ರ ಗುರಿಯಾಗಿಸಬೇಡಿ ಎಂದು ಮನವಿ ಮಾಡಿದರು.

ಬೆಳಗಾವಿ ಸಮಸ್ಯೆ ಚರ್ಚೆಗೆ ಕಾಲವಕಾಶ ನೀಡಿ: ಬೆಳಗ್ಗೆ ಕಲಾಪ ಮುಂದೂಡಿಕೆ ಆಗುವುದಕ್ಕೆ ಮುನ್ನ ಗದ್ದಲಕ್ಕೆ ಕಾರಣವಾಗುವ ಮಾತನಾಡಿದ ರವಿಕುಮಾರ್​ಗೆ ಸ್ಪಷ್ಟೀಕರಣ ನೀಡುವಂತೆ ಸಭಾಪತಿಗಳು ಸೂಚಿಸಿದರು. ಈ ಮಧ್ಯ ಜೆಡಿಎಸ್ ಸದಸ್ಯ ಬೋಜೇಗೌಡರು ಬೆಳಗಾವಿ ಭಾಗದ ಸಮಸ್ಯೆಯ ಚರ್ಚೆಗೆ ಒಂದಿಷ್ಟು ಕಾಲಾವಕಾಶ ನೀಡಿ, ಮೂರು ದಿನದ ಚರ್ಚೆ ಮುಕ್ತಾಯವಾಗಿದ್ದು ಇಲ್ಲಿನ ಸಮಸ್ಯೆಯ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಹೇಳಿದರು.

ಯಾವುದೇ ರೀತಿಯ ಪರಿಹಾರ ಕಾಣದ ಸಂದರ್ಭ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಆಡಳಿತ ಪಕ್ಷದ ನಾಯಕರು ಆಡಳಿತ ಪಕ್ಷದ ಮುಖ್ಯ ಸಚೇತಕರು ಪ್ರತಿಪಕ್ಷದ ನಾಯಕರು ಪ್ರತಿಪಕ್ಷದ ಸಚೇತಕರು ಜೆಡಿಎಸ್ ಸದಸ್ಯ ಬೋಜೆ ಗೌಡರು ಸೇರಿದಂತೆ ಪ್ರಮುಖ ನಾಯಕರನ್ನು ತಮ್ಮ ಕಚೇರಿಗೆ ಬರುವಂತೆ ಆಹ್ವಾನಿಸಿ ಕಲಾಪವನ್ನು 10 ನಿಮಿಷ ಮುಂದೂಡಿದರು.

ಇದನ್ನೂ ಓದಿ: ವಿಸಿಗಳ ನೇಮಕದಲ್ಲಿ ಲಂಚ ತೆಗೆದುಕೊಂಡ ಆರೋಪ: ಪರಿಷತ್ ಕಲಾಪದಲ್ಲಿ ಗದ್ದಲ ಕೋಲಾಹಲ

Last Updated :Dec 22, 2022, 5:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.